ಅನರ್ಹರಿಗೆ ಆತಂಕ ತಂದ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆ
ಬೆಂಗಳೂರು, ಅಕ್ಟೋಬರ್ 23 : ಕರ್ನಾಟಕದ ಬಿಜೆಪಿ ಕಚೇರಿಯಲ್ಲಿ ಉಪ ಚುನಾವಣೆ ಬಗ್ಗೆ ನಡೆದ ಸಭೆ ಅನರ್ಹ ಶಾಸಕರ ಆತಂಕಕ್ಕೆ ಕಾರಣವಾಗಿದೆ. ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಕುರಿತು ಬಿಜೆಪಿಯಲ್ಲಿ ಒಮ್ಮತ ಮೂಡಿಲ್ಲ.
ಬುಧವಾರ ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಉಪ ಚುನಾವಣೆ ಬಗ್ಗೆ ಸಭೆ ನಡೆಯಿತು. ಶಾಸಕರಾದ ಆರ್. ಅಶೋಕ್, ಅರವಿಂದ ಲಿಂಬಾವಳಿ ಹಾಗೂ ಬೆಂಗಳೂರು ನಗರದ ಇತರ ಶಾಸಕರು, ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಉಪ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ; ಸಮೀಕ್ಷೆ ವರದಿ
ಬೆಂಗಳೂರು ನಗರದ ಯಶವಂತಪುರ ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳ ಉಪ ಚುನಾವಣೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಅನರ್ಹ ಶಾಸಕರಾದ ಎಸ್. ಟಿ. ಸೋಮಶೇಖರ್ ಮತ್ತು ಕೆ. ಗೋಪಾಲಯ್ಯಗೆ ಟಿಕೆಟ್ ನೀಡಲು ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸಿದರು.
17 ಅನರ್ಹ ಶಾಸಕರಿಗೆ ಸುಪ್ರೀಂನಲ್ಲಿ ಹಿನ್ನಡೆ; ಅರ್ಜಿ ಸಂವಿಧಾನಿಕ ಪೀಠಕ್ಕೆ?
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಹ ಸಭೆಗೆ ಆಗಮಿಸಿದ್ದರು. ಆದರೆ, ಅವರಿಗೆ ಸಮಾಧಾನ ತರುವಂಥದ ಬೆಳವಣಿಗೆ ನಡೆಯಲಿಲ್ಲ. ಅನರ್ಹ ಶಾಸಕರಿಗೆ ಟಿಕೆಟ್ ನೀಡಲು ಯಡಿಯೂರಪ್ಪ ಬಯಸಿದ್ದಾರೆ. ಸ್ಥಳೀಯ ನಾಯಕರು ಇದಕ್ಕೆ ಒಪ್ಪುತ್ತಿಲ್ಲ.
ಉಪ ಚುನಾವಣೆ; ಕರ್ನಾಟಕ ಬಿಜೆಪಿಗೆ ಕಗ್ಗಂಟಾದ ಕ್ಷೇತ್ರಗಳು
ಸ್ಥಳೀಯ ನಾಯಕರ ಅಭಿಪ್ರಾಯವನ್ನು ಸಂಗ್ರಹಿಸಿ ಟಿಕೆಟ್ ಹಂಚಿಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಅನರ್ಹ ಶಾಸಕರಿಗೆ ಟಿಕೆಟ್ ನೀಡಿದರೆ ಕಾರ್ಯಕರ್ತರು ಅಸಮಾಧಾನಗೊಳ್ಳಲಿದ್ದಾರೆ. ಅವರ ವಿರುದ್ಧ ಹೋರಾಟ ಮಾಡಿದ ನಾವು ಈಗ ಅವರ ಪರವಾಗಿ ಹೇಗೆ ಮತ ಕೇಳುವುದು? ಎಂದು ನಾಯಕರು ಪ್ರಶ್ನಿಸಿದರು.
ಅನರ್ಹ ಶಾಸಕರಿಗೆ ಟಿಕೆಟ್ ನೀಡಿದ ಬಳಿಕ ಉಪ ಚುನಾವಣೆಯಲ್ಲಿ ಅವರು ಗೆದ್ದು ಬಂದರೆ ನಮ್ಮ ಹಿಡಿತಕ್ಕೆ ಸಿಗುವುದಿಲ್ಲ ಎಂದು ಚರ್ಚೆ ನಡೆಯಿತು. ಶಾಸಕರು ತಮ್ಮ ಆಪ್ತರಿಗೆ ಮಾತ್ರ ಮನ್ನಣೆ ಕೊಡುತ್ತಾರೆ. ಇದರಿಂದ ಬಿಜೆಪಿ ಕಾರ್ಯಕರ್ತರಿಗೆ ಹಿನ್ನಡೆಯಾಗಲಿದೆ ಎಂದು ನಾಯಕರು ಆತಂಕ ವ್ಯಕ್ತಪಡಿಸಿದರು.
ಯಶವಂತಪುರದ ಶಾಸಕರಾಗಿದ್ದ ಎಸ್. ಟಿ. ಸೋಮಶೇಖರ್ ಕ್ಷೇತ್ರದ ಬಿಜೆಪಿ ಮುಖಂಡರ ಮೇಲೆ 13 ಪ್ರಕರಣ ದಾಖಲಿಸಿದ್ದಾರೆ. ಅಂತವರನ್ನು ಪಕ್ಷಕ್ಕೆ ಸೇರಿಸಿಕೊಂಡು ಅವರ ಪರವಾಗಿ ಮತ ಕೇಳುವುದು ಎಂದು ಸ್ಥಳೀಯ ಬಿಜೆಪಿ ನಾಯಕರು ಪ್ರಶ್ನೆ ಮಾಡಿದರು.
ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿಯೂ ಕೆ. ಗೋಪಾಲಯ್ಯಗೆ ಉಪ ಚುನಾವಣೆ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿದೆ. ಆದರೆ, ಯಡಿಯೂರಪ್ಪ ಟಿಕೆಟ್ ನೀಡಲು ಒಪ್ಪಿಗೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.