ನಿಖಿಲ್ ಕುಮಾರಸ್ವಾಮಿ ನೋಡಿ ಕಲಿಯಬೇಕು: ತೇಜಸ್ವಿನಿ ಅನಂತ್ ಕುಮಾರ್
ಬೆಂಗಳೂರು, ಏ 6: ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕೊನೆಯ ಕ್ಷಣದಲ್ಲಿ ಬಿಜೆಪಿ ಟಿಕೆಟ್ ವಂಚಿತರಾದ ತೇಜಸ್ವಿನಿ ಅನಂತ್ ಕುಮಾರ್, ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರನ್ನು ನೋಡಿ ಕಲೀರಿ ಎಂದಿದ್ದಾರೆ.
ರಾಜ್ಯ ಉಪಾಧ್ಯಕ್ಷ ಸ್ಥಾನವನ್ನು ಯಡಿಯೂರಪ್ಪ ಘೋಷಣೆ ಮಾಡಿದ ನಂತರ, ಅದರ ಬಗ್ಗೆ ಈವರೆಗೂ ಏನನ್ನೂ ಪ್ರತಿಕ್ರಿಯಿಸದ ತೇಜಸ್ವಿನಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಿದ್ದರು.
ತೇಜಸ್ವಿನಿ ಭಾವುಕ ಟ್ವೀಟ್ ಗೆ ಅಭಿಮಾನಿಗಳ ಅಕ್ಕರೆಯ ಸಾಂತ್ವನ
ಏನೇ ಭಿನ್ನಾಭಿಪ್ರಾಯವಿರಲಿ ಈಗಿಂದೀಗಲೇ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಕಟ್ಟುನಿಟ್ಟಿನ ಫರ್ಮಾನು ಅಮಿತ್ ಶಾ ಹೊರಡಿಸಿದ ನಂತರ, ಬೆಂಗಳೂರು ಬಿಜೆಪಿ ಶಾಸಕರು ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮಂಡ್ಯದ ಜಿದ್ದಾಜಿದ್ದಿನ ಹಣಾಹಣಿಯ ನಡುವೆ, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ, ನಿಖಿಲ್ ಅವರನ್ನು ತೇಜಸ್ವಿನಿ ಅನಂತ್ ಕುಮಾರ್ ಹೊಗಳುವ ಟ್ವೀಟ್ ಮಾಡಿದ್ದಾರೆ. ಆದರೆ, ಇದು ರಾಜಕೀಯಕ್ಕೆ ಸಂಬಂಧಪಟ್ಟ ಹೇಳಿಕೆಯಲ್ಲ.
ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ತೇಜಸ್ವಿನಿ ಅನಂತ್ ಕುಮಾರ್
ಅದಮ್ಯ ಚೇತನ ಟ್ರಸ್ಟ್ ಮೂಲಕ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ತೇಜಸ್ವಿನಿ ಅನಂತ್ ಕುಮಾರ್, ಪ್ಲಾಸ್ಟಿಕ್ ಮುಕ್ತ ನಗರ, ಹಸಿರು ಬೆಂಗಳೂರು ಮುಂತಾದ ವಿಚಾರಗಳಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ಮತ್ತು ಗಿಡಗಳನ್ನು ನೆಡುವ ಕಾರ್ಯಕ್ರಮಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನಿಖಿಲ್ ಕುಮಾರಸ್ವಾಮಿಯನ್ನು ನೋಡಿ ಕಲಿಯಬೇಕು
ಸಾರ್ವತ್ರಿಕ ಚುನಾವಣೆಯ ಈ ಸಂದರ್ಭದಲ್ಲಿ ತೇಜಸ್ವಿನಿ ಅನಂತ್ ಕುಮಾರ್, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ನೋಡಿ ಕಲಿಯಬೇಕು ಎಂದು ಟ್ವೀಟ್ ಮಾಡಿದ್ದಾರೆ. ಇದು ರಾಜಕೀಯಕ್ಕೆ ಸಂಬಂಧವಿಲ್ಲದ ಟ್ವೀಟ್. ಪ್ಲಾಸ್ಟಿಕ್ ಮುಕ್ತ ನಗರದ ವಿಚಾರದಲ್ಲಿ ನಿಖಿಲ್ ಅವರನ್ನು ನೋಡಿ ಕಲಿಯಬೇಕು ಎಂದಿದ್ದಾರೆ.
|
ತೇಜಸ್ವಿನಿ ಮಾಡಿರುವ ಟ್ವೀಟ್
ತೇಜಸ್ವಿನಿ ಮಾಡಿರುವ ಟ್ವೀಟ್ ಹೀಗಿದೆ, ' ನಿಖಿಲ್ ಗೌಡ ಸ್ಟ್ರಾ ಇಲ್ಲದೆ ಎಳನೀರು ಕುಡಿತಾನಂತೆ, ಕಾರಣ ಏನೇ ಇರಲಿ, ಇದನ್ನು ನಾವೆಲ್ಲ ಕಲಿಲೇಬೇಕು. ಯಾಕೆ ಗೊತ್ತಾ ? ಬೆಂಗಳೂರಿನಲ್ಲಿ ಪ್ರತಿದಿನ ಲಕ್ಷಾಂತರ ಸ್ಟ್ರಾ ಎಳನೀರು ಕುಡಿದು ಬಿಸಾಕ್ತಿವಿ. ಈ ಸ್ಟ್ರಾಗಳು ಮರುಸಂಸ್ಕರಣೆ ಮಾಡಲಾಗುವದಿಲ್ಲ. ನೀರಿಗೊ, ಕಾಡಿಗೊ, ಭೂಮಿಗೊ ಸೇರಿ ಮೂಕಪ್ರಾಣಿಗಳಿಗೆ ತೊಂದರೆ ಸ್ಟ್ರಾ ಉಪಯೋಗ ಬಿಟ್ಹಾಕೋಣ'.
ನಿಮ್ಮ ಪರಿಸರ ಪ್ರೇಮ, ಸಾಮಾಜಿಕ ಕಳಕಳಿ ಬೆಂಗಳೂರಿನ ಮೇಲಿರುವ ಕಾಳಜಿ ನಮಗೆ ಸ್ಫೂರ್ತಿ
ತೇಜಸ್ವಿ ಟ್ವೀಟ್ ಗೆ ಕೆಲವೊಂದು ರಿಪ್ಲೈಗಳು ಬಂದಿವೆ. ಬೇರೆ ಪಕ್ಷದವರನ್ನ ಏಕವಚನದಲ್ಲಿ ಮಾತನಾಡಿಸುವುದು ಬೇಡ . 'ಕುಡಿತಾನಂತೆ' ಬದಲು 'ಕುಡಿತಾರಂತೆ' ಅಂತ ಬರೆಯಬಹುದಿತ್ತು. ಸುಮ್ಮನೆ ಅವರ ವ್ಯಂಗಕ್ಕೆ ಆಸ್ಪದ ಮಾಡಿದಂತಾಗುತ್ತದೆ. ಮೇಡಂ ನಿಮ್ಮ ಪರಿಸರ ಕಾಳಜಿಗೆ ನನ್ನದೊಂದು ಧೀರ್ಘದಂಡ ನಮಸ್ಕಾರಗಳು...... ನಿಮ್ಮ ಪರಿಸರ ಪ್ರೇಮ ಸಾಮಾಜಿಕ ಕಳಕಳಿ ಬೆಂಗಳೂರಿನ ಮೇಲಿರುವ ಕಾಳಜಿ ನಮಗೆ ಸ್ಫೂರ್ತಿ.
ನಿಮಗೆ ಅಷ್ಟೊಂದ್ ಸರಿ ಅನ್ನಿಸಿದರೆ ಜೆಡಿಎಸ್ ಹೋಗಿ
ಯಾವಾಗಲೂ ಸಾಮಾನ್ಯವಾಗಿ ಇರುವುದು ನಿಜವಾದ ವಿಶೇಷ. ಆದರೆ ವಿಶೇಷವಾಗಿ ಸಾಮಾನ್ಯವಾಗಿ ಇರುವುದು ಕೇವಲ ಪ್ರಚಾರಕ್ಕಾಗಿ ಮಾತ್ರ.! ನಿಮಗೆ ಅಷ್ಟೊಂದ್ ಸರಿ ಅನ್ನಿಸಿದರೆ ಜೆಡಿಎಸ್ ಹೋಗಿ ... ನಿಮ್ಮ ಮೇಲೆ ನಿಷ್ಠೆ ಯ ನಂಬಿಕೆ ಹೋಯಿತು ಎನ್ನುವ ಖಾರವಾದ ಟ್ವೀಟ್.