ಕಾಂಗ್ರೆಸ್ ಸೇರಲಿರುವ ಎಸ್ಸೆಂ ಕೃಷ್ಣ ಅವರ ಮೊಮ್ಮಗ ನಿರಂತರ್
ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಸ್ಸೆಂ ಕೃಷ್ಣ ಅವರ ತಂಗಿ ಎಸ್ ಎಂ ಸುನೀತಾ ಅವರ ಮಗಳ ಮಗ ಡಾ. ನಿರಂತರ ಗಣೇಶ್ ಅವರು ಕಾಂಗ್ರೆಸ್ ಸೇರುವುದು ಖಚಿತವಾಗಿದೆ.
ಬೆಂಗಳೂರು, ಏಪ್ರಿಲ್ 10: ಮಾಜಿ ಮುಖ್ಯಮಂತ್ರಿ, ಇತ್ತೀಚೆಗೆ ಕಾಂಗ್ರೆಸ್ ಬಿಜೆಪಿ ಮುಖಂಡ ಎಸ್ಸೆಂ ಕೃಷ್ಣ ಅವರ ತಂಗಿ ಎಸ್ ಎಂ ಸುನೀತಾ ಅವರ ಮಗಳ ಮಗ ಡಾ. ನಿರಂತರ ಗಣೇಶ್ ಅವರು ಕಾಂಗ್ರೆಸ್ ಸೇರುವ ಸುದ್ದಿ ಕಳೆದ ವಾರದಿಂದ ಹಬ್ಬಿದ್ದು ತಿಳಿದಿರಬಹುದು. ಈಗ ಈ ಸುದ್ದಿ ನಿಜ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಖಚಿತಪಡಿಸಿದ್ದಾರೆ.
ಏಪ್ರಿಲ್ 13ರಂದು ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಗಳ ಫಲಿತಾಂಶ ಹೊರಬೀಳಲಿದೆ. ಇದಾದ ಬಳಿಕ ಕಾಂಗ್ರೆಸ್ ಸೇರುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಎಂಎಸ್ ರಾಮಯ್ಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ ಡಾಕ್ಟರ್ ಆಗಿರುವ ಚಿಕ್ಕಮಗಳೂರಿನ ಮೂಡಿಗೆರೆ ಮೂಲದ ನಿರಂತರ ಗಣೇಶ್ ಅವರು ಇತ್ತೀಚೆಗೆ ನಿಧನರಾದ ಎಸ್ ಎಂ ಸುನೀತಾ ಅವರ ಮಗಳು ಮೀನಾ ಅವರ ಪುತ್ರ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಸ್ಪರ್ಧೆಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಕಾರ್ಯಕ್ರಮಗಳು, ದಾನ ದತ್ತಿ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ನಾನು ಕಾಂಗ್ರೆಸ್ ಸೇರಲು ದಿನೇಶ್ ಗುಂಡೂರಾವ್ ಅವರು ಮೂಲ ಪ್ರೇರಣೆ, ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಪರ ಬೆಂಬಲಕ್ಕೆ ನಿಂತಿದ್ದೇನೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷವನ್ನು ಸೇರುತ್ತೇನೆ. ರೈತರು, ಬಡವರ ಏಳಿಗೆಗೆ ಶ್ರಮಿಸುವುದು ನನ್ನ ಗುರಿ ಎಂದು ಡಾ. ನಿರಂತರ ಹೇಳಿದ್ದಾರೆ.