ಟಿಪ್ಪು ಜಯಂತಿ ಮಾಡ್ತೀವಿ: ಬಿಜೆಪಿ ಮುಖಂಡ ಶರತ್ ಬಚ್ಚೇಗೌಡ
ಹೊಸಕೋಟೆ, ಅಕ್ಟೋಬರ್ 25: ಬಿಜೆಪಿ ಅಧಿಕಾರಕ್ಕೆ ಬಂದು ಕೂಡಲೇ ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಿ ಆದೇಶ ಹೊರಡಿಸಿತ್ತು. ಆದರೆ ಈಗ ಅದೇ ಬಿಜೆಪಿಯ ಮಾಜಿ ಚುನಾವಣಾ ಅಭ್ಯರ್ಥಿ ತಾವು ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಅವರು ತಾವೇ ಮುಂದೆ ನಿಂತು ಮುಂಬರುವ ಟಿಪ್ಪು ಜಯಂತಿ ಆಚರಣೆ ಮಾಡುವುದಾಗಿ ಹೇಳಿದ್ದಾರೆ. ಶರತ್ ಬಚ್ಚೇಗೌಡ, ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಪುತ್ರ.
ಸಿಎಂ ಕೊಟ್ಟ 'ಉಡುಗೊರೆ' ತಿರಸ್ಕರಿಸಿದ ಶರತ್ ಬಚ್ಚೇಗೌಡ:ಎಂಟಿಬಿಗೆ ಆತಂಕ
ನಿನ್ನೆ ಹೊಸಕೋಟೆ ಬಳಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶರತ್ ಬಚ್ಚೇಗೌಡ, 'ಟಿಪ್ಪು ಜಯಂತಿ ಆಚರಣೆ ಮಾಡಬೇಡಿ ಎಂದು ಬಹಳ ಜನ ಹೇಳಿದರು, ಆದರೆ ನಾನು ಅವರ ಮಾತು ಕೇಳುವುದಿಲ್ಲ' ಎಂದು ಹೇಳಿದರು.
'ನನ್ನ ಗ್ರಾಮ ಬೆಂಡಿಗಾನಹಳ್ಳಿ, ಆ ಗ್ರಾಮದ ಪಕ್ಕದಲ್ಲಿ ತಮ್ಮರಸನಹಳ್ಳಿ ಇದೆ, ಅದೇ ಗ್ರಾಮದಲ್ಲಿ ನಾನೇ ಮುಂದೆ ನಿಂತು ಟಿಪ್ಪು ಜಯಂತಿ ಆಚರಣೆ ಮಾಡುತ್ತೇನೆ' ಎಂದು ಶರತ್ ಬಚ್ಚೇಗೌಡ ಹೇಳಿದ್ದಾರೆ.
ಶರತ್ ಬಚ್ಚೇಗೌಡ ಹೇಳಿಕೆ ಬಗ್ಗೆ ಡಿಸಿಎಂ ಗೋವಿಂದ ಕಾರಜೋಳ ಅವರ ಪ್ರತಿಕ್ರಿಯೆ ಕೇಳಿದಾಗ, ಶರತ್ ಬಚ್ಚೇಗೌಡ ಯಾರೆಂಬುದು ಸಹ ಗೊತ್ತಿಲ್ಲ ಎಂಬಂತೆ ಗೋಚಿಂದ ಕಾರಜೋಳ ಮಾತನಾಡಿದರು.
ಹೊಸಕೋಟೆ ಉಪ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಅಂತಿಮ?
ಹೊಸಕೋಟೆ ಶಾಸಕರಾಗಿದ್ದ ಎಂಟಿಬಿ ನಾಗರಾಜು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾರಣ ಹೊಸಕೋಟೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಆದರೆ ಬಿಜೆಪಿಯು ಎಂಟಿಬಿ ನಾಗರಾಜು ಗೆ ಬಿಜೆಪಿ ಯಿಂದ ಟಿಕೆಟ್ ನೀಡುವ ಸಾಧ್ಯತೆ ಇದೆ. ಹಾಗಾಗಿ ಶರತ್ ಬಚ್ಚೇಗೌಡ ಅವರು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ.
ಈಗಾಗಲೇ ಹಸಕೋಟೆ ಕ್ಷೇತ್ರದಲ್ಲಿ ಸ್ವಾಭಿಮಾನಿ ಯಾತ್ರೆ ಹೆಸರಿನಲ್ಲಿ ಸಮಾವೇಶಗಳನ್ನು ನಡೆಸುತ್ತಿರುವ ಶರತ್ ಎಲ್ಲ ಹಳ್ಳಿಗಳಿಗೂ ಭೇಟಿ ನೀಡುತ್ತಿದ್ದಾರೆ.