ಬಿಜೆಪಿ ಮುಖಂಡ ಅನಂತರಾಜು ಸಾವಿನ ಭವಿಷ್ಯ 20 ದಿನ ಮೊದಲೇ ಹೇಳಿದ್ದ ಪತ್ನಿ ಸುಮಾ!?
ಬೆಂಗಳೂರು, ಮೇ. 18: ಬ್ಯಾಡರಹಳ್ಳಿಯ ಬಿಜೆಪಿ ಮುಖಂಡ ಅನಂತರಾಜು ಅವರ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಅನಂತರಾಜು ಬಲಿಯಾಗಿದ್ದು ಹನಿಟ್ರಾಪ್ ನಿಂದ ಅಲ್ಲ, ಅನೈತಿಕ ಸಂಬಂಧ ವಿಚಾರವಾಗಿ ಅನಂತರಾಜು ಮತ್ತು ಅವರ ಪತ್ನಿ ನಡುವಿನ ಜಗಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಹೊರ ಬಿದ್ದಿದೆ.
ಅನಂತರಾಜು ಆತ್ಮಹತ್ಯೆಗೂ 20 ದಿನ ಮುನ್ನ ಆತನ ಪತ್ನಿ ಸುಮಾ ಮತ್ತು ಅನಂತರಾಜು ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆ ರೇಖಾ ನಡುವಿನ ಸಂಭಾಷಣೆ ಅಡಿಯೋ ಆತ್ಮಹತ್ಯೆಯ ಅಸಲಿ ಸಂಗತಿಯನ್ನು ಹೊರ ಹಾಕಿದೆ. ಇಪ್ಪತ್ತು ದಿನದ ಮುನ್ನ ಅನಂತ ರಾಜು ಪತ್ನಿ ಸುಮಾ " ಅನಂತು ಇನ್ನು ಇಪ್ಪತ್ತು ದಿನದಲ್ಲಿ ಸಾಯುತ್ತಾನೆ. ನಾನು ಕೊಡುವ ಟಾರ್ಚರ್ಗೆ ನೋಡ್ತಿರು. ನೀನೇ ಬಂದು ಎಲ್ಲಾ ಕಾರ್ಯ ಮಾಡಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾಳೆ. ಕಾಕತಾಳೀಯ ಎಂಬಂತೆ ಈ ಘಟನೆ ನಡೆದ ಇಪ್ಪತ್ತು ದಿನಗಳ ಬಳಿಕ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದು ಇದೀಗ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.
ಹನಿಟ್ರ್ಯಾಪ್ ಪ್ರಕರಣ ಎಂದೇ ಆರಂಭದಲ್ಲಿ ಬಿಂಬಿಸಲಾಗಿತ್ತು. ಆದ್ರೆ ಐದು ನಿಮಿಷದ ಅಡಿಯೋ ಬೇರೆಯದ್ದೇ ಕಥೆಯನ್ನು ಹೇಳುತ್ತದೆ. ಅನಂತರಾಜು ಅವರ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿ ಪೊಲೀಸರ ಮೇಲೆ ಒತ್ತಡ ಹಾಕಿ ರೇಖಾ ವಿರುದ್ಧ ಎಫ್ಐಆರ್ ಹಾಕಿಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.
ಅನಂತು ಕೇಸಿನ ಅಡಿಯೋ ವೈರಲ್:
ಅನಂತರಾಜು ಪತ್ನಿ ಸುಮಾ ಮತ್ತು ಆತನ ಪ್ರಿಯತಮೆ ರೇಖಾ ನಡುವೆ ನಡೆದಿರುವ ಸಂಭಾಷಣೆಯಲ್ಲಿ, ನಿನ್ನ ಅನಂತ ಸಾಯ್ತಾನೆ. ಫೇಸ್ಬುಕ್ ನಲ್ಲಿ ನೋಡ್ತೀಯಾ ಅಂತ ರೇಖಾಗೆ ಧಮ್ಕಿ ಹಾಕಲಾಗಿದೆ. ನಿನ್ನ ಬಿಡಲ್ಲ, ಅವನನ್ನು (ಅನಂತನನ್ನು) ಬಿಡಲ್ಲ ಎಂದು ಸುಮಾ ಧಮ್ಕಿ ಹಾಕಿದ್ದು, ಇದೀಗ ಅನಂತರಾಜು ಆತ್ಮಹತ್ಯೆ ಪ್ರಕರಣದಲ್ಲಿ ಆಕೆಯನ್ನೂ ಬ್ಯಾಡರಹಳ್ಳಿ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
ಆರು ವರ್ಷದಲ್ಲಿ ಅನಂತು ಕೊಟ್ಟಿದ್ದು ಐದು ಲಕ್ಷ ?
ರೇಖಾ ಚಿಕ್ಕಬಿದರ ಕಲ್ಲು ಬಳಿ ನಿವೇಶನ ಹೊಂದಿದ್ದು ಅದು ವಿವಾದಕ್ಕೆ ನಾಂದಿ ಹಾಡಿತ್ತು. ಇದನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿ ರೇಖಾ ಅಸಹಾಯಕತೆ ತೋಡಿಕೊಂಡಿದ್ದಳು. ಈ ವಿಚಾರವಾಗಿ ರೇಖಾ ಅನಂತರಾಜುಗೆ ಸಾಮಾಜಿಕ ಜಾಲ ತಾಣದ ಮೂಲಕ ಪರಿಚಯವಾಗಿದ್ದಾಳೆ. ವಿವಾಹಿತ ರೇಖಾಗೆ ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಗಳಿದ್ದು, ಇಬ್ಬರು ಪರಸ್ಪರ ಯಾರಿಗೂ ಗೊತ್ತಾಗದಂತೆ ಸಂಬಂಧ ಬೆಳೆಸಿದ್ದಾರೆ. ಮಕ್ಕಳ ಭವಿಷ್ಯ ಕೊಡಿಸುವ ಷರತ್ತು ಹಾಕಿ ರೇಖಾ ಅನಂತರಾಜು ಬಳಿ ಚೆನ್ನಾಗಿದ್ದಳು ಎಂದು ಹೇಳಲಾಗುತ್ತಿದೆ. ನನ್ನ ಸಾಲ ತೀರಿದ ಬಳಿಕ ನಿನ್ನ ಮಗಳನ್ನು ಮೆಡಿಕಲ್ ಮಾಡಿಸುತ್ತೇನೆ ಎಂದು ಅನಂತರಾಜು ಭರವಸೆ ಕೊಟ್ಟಿದ್ದ. ಆರು ವರ್ಷದಿಂದ ಇಲ್ಲಿಯವರೆಗೂ ರೇಖಾಗೆ ಕೇವಲ 5 ಲಕ್ಷ ರೂ. ನಷ್ಟು ಹಣ ಕೊಟ್ಟಿದ್ದ ಅಷ್ಟೇ. ಇದು ಹನಿಟ್ರ್ಯಾಪ್ ಅಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ರೇಖಾಗೆ ಕರೆ ಮಾಡಿ ಧಮ್ಕಿ ಹಾಕಿದ್ದ ಅನಂತು ಪತ್ನಿ:
ರೇಖಾ ಜತೆ ಅಕ್ರಮ ಸಂಬಂಧ ಹೊಂದಿರುವ ವಿಚಾರ ಸುಮಾ ಅವರಿಗೆ ಗೊತ್ತಾಗಿತ್ತು. ಈ ವಿಚಾರವಾಗಿ ರೇಖಾ ಮತ್ತು ಸುಮಾ ನಡುವೆ ವಾಗ್ವಾದಗಳು ನಡೆದಿವೆ. ಇದೇ ವಿಚಾರವಾಗಿ ಇಪ್ಪತ್ತು ದಿನಗಳ ಹಿಂದೆ ಇಬ್ಬರ ನಡುವೆ ಬೊಮೈಲ್ ನಲ್ಲಿಯೇ ವಾಗ್ವಾದ ನಡೆದಿದೆ. "ನಿನ್ನ ಅನಂತು ಸಾಯ್ತಾನೆ. ಪೇಸ್ ಬುಕ್ ನಲ್ಲಿ ನೋಡ್ತೀಯ. ನಾನು ಕೊಡುವ ಟಾರ್ಚರ್ ಗೆ ಅವನಿಗೆ ಹಾರ್ಟ್ ಅಟ್ಯಾಕ್ ಆಗಿ ಸಾಯ್ತಾನೆ" ನೋಡ್ತಿರು ಎಂದು ಸುಮಾ ಧಮ್ಕಿ ಹಾಕಿದ್ದಾಳೆ.
ಇದಕ್ಕೆ ಪ್ರತ್ಯುತ್ತರವಾಗಿ ಅವರನ್ನು ಏನೂ ಮಾಡಬೇಡಿ, ನಾನು ಅವರ ಸಹವಾಸಕ್ಕೆ ಬರುವುದಿಲ್ಲ. ನನ್ನ ಚಾರಿತ್ರ್ಯ ವಧೆ ಆದರೂ ಪರವಾಗಿಲ್ಲ. ಅನಂತರಾಜು ಅವರಿಗೆ ಏನೂ ತೊಂದರೆ ಕೊಡಬೇಡಿ ಎಂದು ರೇಖಾ ಬೇಡಿಕೊಂಡಿದ್ದಾರೆ. ಈ ಕುರಿತ ಅಡಿಯೋ ಇದೀಗ ಮಾಧ್ಯಮಗಳಿಗೆ ಲಭ್ಯವಾಗಿದ್ದು, ವೈರಲ್ ಆಗಿದೆ. ಅನಂತೂ ಅವರ ಆತ್ಮಹತ್ಯೆಗೆ ಟ್ವಿಸ್ಟ್ ಕೊಡಲು ಅವರ ಕುಟುಂಬವೇ ಟ್ವಿಸ್ಟ್ ಕೊಟ್ಟಿತೇ ಎಂಬ ಪ್ರಶ್ನೆ ಎದುರಾಗಿದೆ.
ಅನಂತು ಆತ್ಮಹತ್ಯೆ ಪ್ರಕರಣದಲ್ಲಿ ಪತ್ನಿ ವಿಚಾರಣೆ:
ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಖಾ ಅವರನ್ನು ಬ್ಯಾಡರಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸಂಜೆ ವೇಳೆಗೆ ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಯಿದೆ. ಆದರೆ, ಪೊಲೀಸರು ರೇಖಾ ಅವರನ್ನು ವಶಕ್ಕೆ ಪಡೆದ ಬಳಿಕ ಅಡಿಯೋ ವೈರಲ್ ಆಗಿರುವುದು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದೆ. ಈ ಅಡಿಯೋ ಇದೀಗ ಪೊಲೀಸರಿಗೂ ತಲೆನೋವು ತಂದಿಟ್ಟಿದೆ. ಇನ್ನು ಅಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಅನಂತರಾಜು ಅವರ ಪತ್ನಿಯನ್ನೂ ಸಹ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಈ ಕುರಿತು ಪ್ರತಿಕ್ರಿಯೆ ಕೇಳಲು ಬ್ಯಾಡರಹಳ್ಳಿ ಪೊಲೀಸರನ್ನು ಸಂಪರ್ಕಿಸುವ ಪ್ರಯತ್ನ ವಿಫಲವಾಯಿತು.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777
Recommended Video