ಐಎಂಎ ಹಗರಣದಲ್ಲಿ ಜಮೀರ್ ಅಹ್ಮದ್ ಬಂಧನ ಏಕಿಲ್ಲ: ಈಶ್ವರಪ್ಪ ಪ್ರಶ್ನೆ
ಬೆಂಗಳೂರು, ಜುಲೈ 16: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಏಕೆ ಬಂಧಿಸಿಲ್ಲ ಎಂದು ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಪ್ರಶ್ನಿಸಿದರು.
ಐಎಂಎ ಬಹುಕೋಟಿ ವಂಚನೆ ಹಗರಣದಲ್ಲಿ ಶಾಸಕ ರೋಷನ್ ಬೇಗ್ ಅವರನ್ನು ಸೋಮವಾರ ವಶಕ್ಕೆ ಪಡೆದುಕೊಂಡಿದ್ದ ಎಸ್ಐಟಿ ಪೊಲೀಸರು ಮಂಗಳವಾರ ಮಧ್ಯಾಹ್ನದವರೆಗೂ ಸತತ ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಈ ಪ್ರಕರಣದಲ್ಲಿ ಜಮೀರ್ ಅಹ್ಮದ್ ಅವರ ಹೆಸರೂ ಕೇಳಿಬಂದಿದೆ. ಹಾಗಿದ್ದರೂ ಅವರನ್ನು ಏಕೆ ಬಂಧಿಸಿಲ್ಲ ಎಂದು ಈಶ್ವರಪ್ಪ ಕೇಳಿದ್ದಾರೆ.
ಎಸ್ಐಟಿಯಿಂದ ರೋಷನ್ ಬೇಗ್ ವಶ: ಬೆಂಬಲಕ್ಕೆ ನಿಂತ ರಾಜ್ಯ ಬಿಜೆಪಿ
'ಐಎಂಎ ಪ್ರಕರಣದಲ್ಲಿ ಯಾರು ಲೂಟಿ ಮಾಡಿದ್ದಾರೆಯೋ ಅವರನ್ನು ಬಂಧಿಸಿ ಮೋಸ ಹೋದವರಿಗೆ ಹಣ ವಾಪಸ್ ಕೊಡಿಸಬೇಕಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ, ಸರ್ಕಾರ ಎಸ್ಐಟಿಯನ್ನು ತನಗೆ ಬೇಕಾದಂತೆ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿದೆ' ಎಂದು ಈಶ್ವರಪ್ಪ ಆರೋಪಿಸಿದರು.
'ಜಾರಿ ನಿರ್ದೇಶನಾಲಯವು ರೋಷನ್ ಬೇಗ್ ಮತ್ತು ಜಮೀರ್ ಅಹ್ಮದ್ ಇಬ್ಬರಿಗೂ ನೋಟಿಸ್ ನೀಡಿದೆ. ಆದರೆ, ಎಸ್ಐಟಿ ರೋಷನ್ ಬೇಗ್ ಅವರನ್ನು ಮಾತ್ರ ಬಂಧಿಸಿದೆ, ಜಮೀರ್ ಅವರನ್ನು ಏಕೆ ಬಂಧಿಸಿಲ್ಲ? ರೋಷನ್ ಬೇಗ್ ಅವರು ಮೈತ್ರಿ ಸರ್ಕಾರದ ವಿರುದ್ಧವಿದ್ದಾರೆ ಎಂಬ ಕಾರಣಕ್ಕಾಗಿಯೇ? ಪ್ರಾಮಾಣಿಕತೆ ಇದ್ದರೆ ಜಮೀರ್ ಅವರನ್ನೂ ಬಂಧಿಸಿ, ಕ್ರಮ ತೆಗೆದುಕೊಳ್ಳಿ' ಎಂದು ಆಗ್ರಹಿಸಿದರು.