ಅಮಿತ್ ಶಾ ಭೇಟಿಯಾದ ಯಡಿಯೂರಪ್ಪ ಪುತ್ರ
Recommended Video
ಬೆಂಗಳೂರು, ಡಿಸೆಂಬರ್ 13: ಉಪ ಚುನಾವಣೆ ಯಶಸ್ಸಿನ ಬಳಿಕ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ ವೈ ವಿಜಯೇಂದ್ರ ಅವರ ವರ್ಚಸ್ಸು ಹೆಚ್ಚಾಗಿದೆ. ಅವರು ನಿನ್ನೆ ರಾತ್ರಿ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿಯಾದರು.
ಈ ವೇಳೆ ಅಮಿತ್ ಶಾ ಅವರು ಬಿ ವೈ ವಿಜಯೇಂದ್ರ ಅವರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಮಾಡಿದ ಪ್ರಯತ್ನವನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಕೆಲ ಹೊತ್ತು ಮಾತುಕತೆ ನಡೆಸಿದ ಇಬ್ಬರೂ, ಮುಂಬರುವ ದಿನಮಾನಗಳಲ್ಲಿ ವಿಜಯೇಂದ್ರ ಅವರಿಗೆ ಪಕ್ಷ ಸಂಘಟನೆಯಲ್ಲಿ ಮಹತ್ವದ ಹುದ್ದೆ ನೀಡುವ ಮುನ್ಸೂಚನೆಯನ್ನೂ ನೀಡಿದ್ದಾರೆ. ಅದರಲ್ಲೂ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಪಾಲಿಗೆ ಬಂದಿರುವುದು ಅಮಿತ್ ಷಾ ಅವರಿಗೆ ಹೆಚ್ಚಿನ ಖುಷಿ ಕೊಟ್ಟಿದೆ ಎಂದು ತಿಳಿದು ಬಂದಿದೆ.
ಲಿಂಗಾಯತ ಸಮುದಾಯದ ಭವಿಷ್ಯದ ನಾಯಕ ಬಿವೈ ವಿಜಯೇಂದ್ರ?
ಕಳೆದ ವಾರ ಕೊನೆಗೊಂಡ ರಾಜ್ಯದ 15 ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿ ವೈ ವಿಜಯೇಂದ್ರ ಅವರು, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ , ರಾಣೆಬೆನ್ನೂರು, ಹಿರೇಕೆರೂರು ಕ್ಷೇತ್ರಗಳು ಬಿಜೆಪಿ ವಶವಾಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹೀಗಾಗಿ ಪಕ್ಷದಲ್ಲಿ ಬಿ ವೈ ವಿಜಯೇಂದ್ರ ಹೊಸ ನಾಯಕರಾಗಿ ಬೆಳೆಯುತ್ತಿದ್ದಾರೆ.