ಒಬಿಸಿ ಮತಬುಟ್ಟಿಗೆ ಕೈಹಾಕಲು ಸಿದ್ದವಾದ ಬಿಜೆಪಿ- ಹಾಲಿ ಮಾಜಿ ಸಚಿವರಿಗೆ ಹೊಣೆ
ಬೆಂಗಳೂರು, ಸೆಪ್ಟೆಂಬರ್ 24: ಬಿಜೆಪಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶದ ಯಶಸ್ವಿಗಾಗಿ ಪೂರ್ವಭಾವಿ ಸಭೆಗಳು ಸೆಪ್ಟೆಂಬರ್ 27ರಿಂದ ಅಕ್ಟೋಬರ್ ಮೊದಲ ವಾರದಲ್ಲಿ ನಡೆಯಲಿವೆ. ಇದಕ್ಕಾಗಿ ಪಕ್ಷದ ಮುಖಂಡರ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಲಾಗಿದೆ ಎಂದು ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರಬಾಬು ತಿಳಿಸಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದ ಮೊದಲನೇ ತಂಡವು ಸೆ.27ರಂದು ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ, 30ರಂದು ಚಾಮರಾಜನಗರ, ಮೈಸೂರು, ನಗರ, ಗ್ರಾಮಾಂತರ, ಅಕ್ಟೋಬರ್ 1ರಂದು ಮಂಡ್ಯ, ಹಾಸನ ಜಿಲ್ಲೆಗಳಲ್ಲಿ, ಅ.3ರಂದು ಬೀದರ್ ಜಿಲ್ಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲಿದೆ.
ಎರಡನೇ ತಂಡದ ನೇತೃತ್ವವನ್ನು ಇಂಧನ ಸಚಿವ ಸುನೀಲ್ ಕುಮಾರ್ ಅವರು ವಹಿಸಲಿದ್ದಾರೆ. ಅವರ ತಂಡವು ಸೆ.27ರಂದು ಮಂಗಳೂರು, ಉಡುಪಿ, ಅಕ್ಟೋಬರ್ 3ರಂದು ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆ ನಡೆಸಲಿದೆ.
3ನೇ ತಂಡವು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಲಿದೆ. ಈ ತಂಡವು ಸೆ. 28ರಂದು ಕೋಲಾರ, ಚಿಕ್ಕಬಳ್ಳಾಪುರ, ಸೆ.29ರಂದು ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಜಿಲ್ಲೆಗಳಿಗೆ ಸಂಬಂಧಿಸಿದ ಪೂರ್ವಭಾವಿ ಸಭೆಗಳನ್ನು ನಡೆಸಲಿದೆ.
ಆನಂದ್ ಸಿಂಗ್ ನೇತೃತ್ವದ ತಂಡ
ಸಚಿವ ಭೈರತಿ ಬಸವರಾಜ ನೇತೃತ್ವದ ನಾಲ್ಕನೇ ತಂಡವು ಅಕ್ಟೋಬರ್ 1ರಂದು ಚಿತ್ರದುರ್ಗ, ದಾವಣಗೆರೆ, ಅ.2ರಂದು ಹಾವೇರಿ, ಹುಬ್ಬಳ್ಳಿ- ಧಾರವಾಡ, ಅ.3ರಂದು ತುಮಕೂರು- ಮಧುಗಿರಿ ಸಂಘಟನಾ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆಗಳನ್ನು ಏರ್ಪಡಿಸಲಿದೆ.
ಸಚಿವ ಆನಂದ್ ಸಿಂಗ್ ಅವರ ನೇತೃತ್ವದ 5ನೇ ತಂಡವು ಅಕ್ಟೋಬರ್ 1ರಂದು ವಿಜಯನಗರ, ಬಳ್ಳಾರಿ, ಅ.3ರಂದು ಬೆಳಗಾವಿ ಮತ್ತು ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಿದೆ.ಮಾಜಿ ಹಾಲಿ ಸಚಿವರಿಂದ ಪೂರ್ವ ತಯಾರಿ
ಹಿಂದುಳಿದ ನಾಯಕರಿಗೆ ಬಿಜೆಪಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶದ ಜವಾಬ್ದಾರಿಯನ್ನು ನೀಡಲಾಗಿದೆ. ನೆ.ಲ. ನರೇಂದ್ರ ಬಾಬು, ಮಾಜಿ ಸಚಿವ ಈಶ್ವರಪ್ಪ, ಸಚಿವ ಸುನೀಲ್ ಕುಮಾರ್, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಬೈರತಿ ಬಸವರಾಜು, ಆನಂದ್ ಸಿಂಗ್ಗೆ ಜವಾಬ್ದಾರಿಯನ್ನು ನೀಡು ಪೂರ್ವ ತಯಾರಿಯನ್ನು ಮಾಡುವಂತೆ ಪಕ್ಷ ಜವಾಬ್ದಾರಿಯನ್ನು ನೀಡಿದೆ.
ಸಿದ್ದರಾಮಯ್ಯಗೆ ಟಾಂಗ್ ನೀಡಯು ಪ್ರಯತ್ನ
ಕಾಂಗ್ರೆಸ್ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ನಾಯಕ ಎಂದು ಗುರುತಿಸಿಕೊಂಡವರು. ಸಿದ್ದಾರಾಮಯ್ಯ ಹಿಂದೂಳಿದ ವರ್ಗ ಕಾಂಗ್ರೆಸ್ ಪರವಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಇದಕ್ಕಾಗಿ ಹಿಂದೂಳಿದ ಸಮಾಜದ ಬೃಹತ್ ಸಮಾವೇಶವನ್ನು ಮಾಡಿ ಹಿಂದೂಳಿದ ವರ್ಗ ಬಿಜೆಪಿಗೆ ಬೆಂಬಲಿಸಲಿದೆ ಎಂದು ತೋರಿಸುವ ಯತ್ನವನ್ನು ಬಿಜೆಪಿ ಮಾಡಲಿದೆ. ಆ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಕ್ಕೆ ಟಕ್ಕರ್ ಕೊಡಲು ಬಿಜೆಪಿ ಸಿದ್ದತೆ ಆರಂಭವನ್ನು ಮಾಡಿದೆ.
ಹಿಂದುಳಿದ ವರ್ಗಗಳ ಸಮಾವೇಶ
ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಬೃಹತ್ ಸಮಾವೇಶವನ್ನು ಮಾಡಿ ಚುನಾವಣಾ ಅಖಾಡಕ್ಕೆ ಎಂಟ್ರಿಯನ್ನು ಕೊಟ್ಟಿತ್ತು. ಇದಾದ ಬಳಿಕ ಬಿಜೆಪಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶದ ಸಿದ್ದತೆಯನ್ನು ಪ್ರಾರಂಭಿಸಿದೆ. ಹಾಲಿ ಮಾಜಿ ಸಚಿವ ನೇತೃತ್ವದ ಸಮಿತಿಗೆ ಬೇರೆ ಬೇರೆ ಜಿಲ್ಲೆಯ ಪೂರ್ವಸಿದ್ದತೆಯ ಜವಾಬ್ದಾರಿ ವಹಿಸಲಾಗಿದೆ. ಇವರ ಜೊತೆ ಬಿಜೆಪಿ ಜಿಲ್ಲಾ ಸಮಿತಿ, ಜಿಲ್ಲೆಯ ಮಂಡಲ ಪದಾಧಿಕಾರಿಗಳು, ಜಿಲ್ಲೆ ಮತ್ತು ಮಂಡಲ ಸಂಯೋಜಕರು, ಹಿಂದುಳಿದ ವರ್ಗಗಳ ಶಾಸಕರು, ಮಾಜಿ ಶಾಸಕರು, ಜಿಪಂ, ತಾಪಂ ಸದಸ್ಯರು, ಎಪಿಎಂಸಿ ಸದಸ್ಯರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಹಿಂದುಳಿದ ವರ್ಗಗಳ ಜನಪ್ರತಿನಿಧಿಗಳು ಹಾಗೂ ಹಿಂದುಳಿದ ವರ್ಗಗಳ ನಿಗಮ, ಮಂಡಳಿ ಸದಸ್ಯರು ಈ ಸಭೆಯಲ್ಲಿ ಭಾಗವಹಿಸುವಂತೆ ನೆ.ಲ.ನರೇಂದ್ರಬಾಬು ಕೋರಿದ್ದಾರೆ.