ನಂಬಿಕೆ ದ್ರೋಹ ಮಾಡಿದವರಿಗೆ ಶಿಕ್ಷೆ ಆಗುತ್ತಿದೆ: ಸಿದ್ದರಾಮಯ್ಯ
ಬೆಂಗಳೂರು, ಜನವರಿ 26: ಪಕ್ಷಕ್ಕೆ ದ್ರೋಹ ಮಾಡಿದವರಿಗೆ, ನಂಬಿಕೆ ದ್ರೋಹ ಮಾಡಿದವರಿಗೆ ಸರಿಯಾದ ಶಿಕ್ಷೆ ಆಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಸಚಿವ ಸ್ಥಾನದ ಆಸೆಗೆ ಪಕ್ಷ ತೊರೆದು ಹೋಗಿ ಈಗ ಬಿಜೆಪಿ ಯಲ್ಲೂ ಸಚಿವ ಸ್ಥಾನ ಸಿಗದೇ ಆಗಿರುವವರ ಬಗ್ಗೆ ಸಿದ್ದರಾಮಯ್ಯ ಮೇಲಿನಂತೆ ಟೀಕಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಮಾರಂಭದ ಬಳಿಕ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಬಿಜೆಪಿಯವರು ಸಂವಿಧಾನ ವಿರೋಧಿಗಳು, ಸ್ವಾತಂತ್ರ್ಯಾನಂತರ ಸಂವಿಧಾನವು ಸಂಸತ್ನಲ್ಲಿ ಮಂಡನೆಯಾದಾಗ ಆಗಿನ ಜನಸಂಘ ಅದನ್ನು ವಿರೋಧಿಸಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ಆರ್ಎಸ್ಎಸ್ ಮತ್ತು ಜನಸಂಘಗಳು ಸಂವಿಧಾನದ ಮೇಲೆ ನಂಬಿಕೆಯಿಟ್ಟವರಲ್ಲ. ಅವರಿಗೆ ಮನುವಾದ, ಮನುಸ್ಮೃತಿ ಮೇಲಷ್ಟೇ ನಂಬಿಕೆ, ಸಂವಿಧಾನ ವಿರೋಧಿ ಬಿಜೆಪಿಗೆ ದೇಶವನ್ನು ಆಳುವ ಯೋಗ್ಯತೆ ಇಲ್ಲ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.
ಕೇಂದ್ರ ಸರ್ಕಾರವು ಕೆಲ ವರ್ಗಗಳನ್ನಷ್ಟೆ ಗುರಿಯಾಗಿಟ್ಟುಕೊಂಡು ಕಾನೂನು ರೂಪಿಸುತ್ತಿದೆ. ಆದರೆ ಸಂವಿಧಾನದ ಪ್ರಕಾರ ಎಲ್ಲರೂ ಸಮಾನರು ಎಂದು ಸಿದ್ದರಾಮಯ್ಯ ಹೇಳಿದರು.