'ದಂಗೆ' ಹೇಳಿಕೆ ಮೂಲಕ ಸರ್ಕಾರ ಕೆಡವಲು ಬಿಜೆಪಿ ಬಳಿ ಇದೆ 4 ಬ್ರಹ್ಮಾಸ್ತ್ರ!
Recommended Video
ಬೆಂಗಳೂರು, ಸೆಪ್ಟೆಂಬರ್ 21: ಸಮ್ಮಿಶ್ರ ಸರ್ಕಾರವನ್ನು ಕೆಡವಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಬಿಜೆಪಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ 'ದಂಗೆ' ಹೇಳಿಕೆಯೇ ಬ್ರಹ್ಮಾಸ್ತ್ರವಾಗುತ್ತದೆಯೇ? ಖಂಡಿತ ಆಗಬಹುದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ!
'ದಂಗೆ' ಹೇಳಿಕೆಗೆ ಕುಮಾರಸ್ವಾಮಿ, ಸ್ಪಷ್ಟನೆ ಬಿಜೆಪಿ ಆಕ್ರೋಶ, ರಾಜಕೀಯ
ಮುಖ್ಯಮಂತ್ರಿಯಂಥ ಉನ್ನತ, ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಬಾಯಿತಪ್ಪಿಯೂ ನೀಡುವ ಹೇಳಿಕೆ ಅದಲ್ಲ. 'ನಮ್ಮ ಸಮ್ಮಿಶ್ರ ಸರ್ಕಾರ ಸರಿಯಾಗಿ ಕೆಲಸ ಮಾಡಲು ಬಿ ಎಸ್ ಯಡಿಯೂರಪ್ಪನವರು ಬಿಡುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ರಾಜ್ಯದ ಜನರೇ ಬಿಜೆಪಿ ವಿರುದ್ಧ ದಂಗೆ ಏಳಲು ನಾನೇ ಕರೆನೀಡಬೇಕಾಗುತ್ತದೆ' ಎಂಬ ಹೇಳಿಕೆಯನ್ನು ಕುಮಾರಸ್ವಾಮಿ ಗುರುವಾರ ಮಾಧ್ಯಮಗಳಿಗೆ ನೀಡಿದ್ದರು.
ಸಿಎಂ ರ 'ದಂಗೆ' ಹೇಳಿಕೆಗೆ ಬಿಜೆಪಿ ಆಕ್ರೋಶ, ಪ್ರಕರಣ ದಾಖಲಿಸಲು ನಿರ್ಧಾರ
ಈ ಹೇಳಿಕೆಯನ್ನೇ ಸರಿಯಾಗಿ ಬಳಸಿಕೊಂಡರೆ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಕೆಡಹುವುದಕ್ಕೂ ಸಾಧ್ಯವಿದೆ! ಮುಖ್ಯಮಂತ್ರಿಯೇ ರಾಜ್ಯದ ಕಾನೂನು ಸುವ್ಯವಸ್ಥೆಗೆ ಭಂಗ ತರುವಂಥ ಹೇಳಿಕೆ ನೀಡಿರುವುದನ್ನೇ ಬಿಜೆಪಿ ತನ್ನ ಲಾಭಕ್ಕೆ ಬಳಸಿಕೊಳ್ಳಬಹುದು.
ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಮನವಿ
ದಂಗೆ ಹೇಳಿಕೆಯನ್ನೇ ಇಟ್ಟುಕೊಂಡು ರಾಜ್ಯಪಾಲರ ಬಳಿ ತೆರಲಿ ಬಿಜೆಪಿ ದೂರು ನೀಡುವುದಕ್ಕೆ ಸಾಧ್ಯವಿದೆ. ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಮುಖ್ಯಮಂತ್ರಿಗಳೇ ಇಂಥ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಗೋಳಿಡಬಹುದು. ರಾಜ್ಯಪಾಲರ ಮಧ್ಯಪ್ರವೇಶವಾದರೆ ಇದರಿಂದ ಸರ್ಕಾರಕ್ಕೆ ಅವಮಾನವೇ.
ರಾಷ್ಟ್ರಪತಿಗಳಿಗೂ ದೂರು!
ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೂ ಈ ಕುರಿತು ದೂರು ನೀಡುವುದಕ್ಕೆ ಸಾಧ್ಯವಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿಯೇ ಜನರನ್ನು ಹಿಂಸೆಗೆ ಪ್ರಚೋದಿಸುತ್ತಿದ್ದಾರೆ ಎಂದು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ತಿಳಿಸಬಹುದು. ಅಕಸ್ಮಾತ್ ರಾಷ್ಟ್ರಪತಿಗಳಿಗೆ ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅನ್ನಿಸಿದರೆ ವಿಧಾನಸಭೆಯನ್ನು ವಿಸರ್ಜಿಸುವ ಅಧಿಕಾರವೂ ಇದೆ. ಆದರೆ ಅದಕ್ಕೆ ಕೇಂದ್ರ ಸರ್ಕಾರದ ಶಿಫಾರಸ್ಸು ಬೇಕು.
ಕುಮಾರಸ್ವಾಮಿ 'ದಂಗೆ' ಹೇಳಿಕೆ ವಿರುದ್ಧ ದಂಗೆಯೆದ್ದ ಟ್ವಿಟ್ಟಿಗರು
ವಿಧಾನಸಭೆ ವಿಸರ್ಜನೆ ಮತ್ತು ರಾಷ್ಟ್ರಪತಿ ಆಳ್ವಿಕೆ!
ಒಂದು ರಾಜ್ಯದ ವಿಧಾನಸಭೆಯನ್ನು ವಿಸರ್ಜಿಸುವುದಕ್ಕೆ ಕೆಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಆ ರಾಜ್ಯದಲ್ಲಿ ಆಡಳಿತದಲ್ಲಿರುವ ಸರ್ಕಾರ ಬಹುಮತ ಕಳೆದುಕೊಂಡರೆ, ಅಥವಾ ವಿಧಾನಸಭಾ ಚುನಾವಣೆಯ ದಿನಾಂಕ ಮುಂದೂಡಿದರೆ ಇತ್ಯಾದಿ ಸಮಯಗಳಲ್ಲಿ ವಿಧಾನಸಭೆಯನ್ನು ವಿಸರ್ಜಿಸಬಹುದು. ಅಂತೆಯೇ ಯಾವುದೇ ರಾಜ್ಯದಲ್ಲಿ ಅನಿಯಂತ್ರಿತ ಗಲಭೆ ಅಥವಾ ಕಾನೂನು ಸುವ್ಯವಸ್ಥೆಗೆ ಭಂಗ ಬರುವಂಥ ಸನ್ನಿವೇಶವಿದ್ದರೆ, ಅಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಶಿಫಾರಸ್ಸಿನ ಮೇರೆಗೆ ವಿಧಾನಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆಡಳಿತ ಹೇರುವುದಕ್ಕೆ ಸಾಧ್ಯ! ಈ ಕೆಲಸ ಬಿಜೆಪಿಗೆ ಕಷ್ಟವೇ ಆದರೂ, ದಂಗೆ ಹೇಳಿಕೆಯನ್ನೇ ಸರಿಯಾಗಿ ಬಳಸಿಕೊಂಡರೆ ಸಾಧ್ಯವಿದೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇರುವುದರಿಂದ ಹೆಚ್ಚು ಕಷ್ಟವಾಗಲಿಕ್ಕಿಲ್ಲ. ಆದರೆ ರಾಜ್ಯದಲ್ಲಿ ನಿಜವಾಗಿಯೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂಥ ಸನ್ನಿವೇಶ ನಿರ್ಮಾಣವಾಗಿದ್ದರೆ ಮಾತ್ರ ಇದು ಸಾಧ್ಯ.
ಏನೂ ಇಲ್ಲವೆಂದರೆ ಆಪರೇಶನ್ ಕಮಲ!
ಈ ಯಾವುದೂ ಇಲ್ಲವೆಂದರೆ ಆಪರೇಶನ್ ಕಮಲದ ಮೂಲಕ ಈಗಾಗಲೇ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗದೆ ಅತೃಪ್ತರಾಗಿರುವವರನ್ನು ಸೆಳೆಯುವುದಕ್ಕೆ ಸಾಧ್ಯವಿದೆ. ಸಮ್ಮಿಶ್ರ ಸರ್ಕಾರದಲ್ಲಿ ಅದರಲ್ಲೂ ಕಾಂಗ್ರೆಸ್ ಶಾಸಕರಲ್ಲಿ ಹಲವರು ಈಗಾಗಲೇ ಬಂಡಾಯವೆದ್ದಿದ್ದು, ಈ ಸನ್ನಿವೇಶವನ್ನು ಬಿಜೆಪಿ ತನ್ನ ಅನುಕೂಲಕ್ಕೆ ಬಳಸಿಕೊಳ್ಳಬಹುದು.