ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯ ನಿರ್ಧಾರವನ್ನು ಬಿಜೆಪಿ ಹಠಾತ್ ಬದಲಿಸಿದ್ದೇಕೆ?
ಬೆಂಗಳೂರು, ಜುಲೈ 27: ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಸರ್ಕಾರ ರಚಿಸಲು ರಾಜ್ಯ ಬಿಜೆಪಿ ನಾಯಕರು ಸಿದ್ಧರಾಗಿದ್ದರೂ, ಅವರ ಆತುರಕ್ಕೆ ಹೈಕಮಾಂಡ್ ಬ್ರೇಕ್ ಹಾಕಿತ್ತು. ತರಾತುರಿ ಮಾಡುವುದು ಬೇಡ, ಕಾದು ನೋಡೋಣ ಎಂದು ಯಡಿಯೂರಪ್ಪ ಅವರ ಎದುರು ಹಳದಿ ಸಿಗ್ನಲ್ ಇರಿಸಿತ್ತು. ಸ್ಪೀಕರ್ ರಮೇಶ್ ಕುಮಾರ್ ಅವರು ಮೂವರು ಶಾಸಕರನ್ನು ಅನರ್ಹಗೊಳಿಸಿದ ಬಳಿಕ ಹಸಿರು ಸಿಗ್ನಲ್ ನೀಡಿತ್ತು. ಇಲ್ಲದಿದ್ದರೆ, ಯಡಿಯೂರಪ್ಪ ಅವರಿಗೆ ರೆಡ್ ಸಿಗ್ನಲ್ ಬೀಳುವುದು ಖಚಿತವಾಗಿತ್ತು.
ಸರ್ಕಾರ ಪತನಗೊಂಡ ಬಳಿಕ ಬಿಜೆಪಿ ರಾಷ್ಟ್ರೀಯ ನಾಯಕತ್ವವು ಸರ್ಕಾರ ರಚನೆಯ ಸಾಹಸಕ್ಕೆ ಮುಂದಾಗುವ ಬದಲು ರಾಷ್ಟ್ರಪತಿ ಆಳ್ವಿಕೆ ಹೇರಿಕೆಯನ್ನೇ ಪ್ರಮುಖ ಆಯ್ಕೆಯನ್ನಾಗಿ ಪರಿಗಣಿಸಿತ್ತು. ಏಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ನ ಅತೃಪ್ತ ಶಾಸಕರ ಅನರ್ಹತೆ ವಿಚಾರದಲ್ಲಿ ಇನ್ನೂ ಅನಿಶ್ಚಿತತೆ ಇತ್ತು. ಈ ನಡುವೆ ರಾಮಲಿಂಗಾ ರೆಡ್ಡಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಹೊಸದಾಗಿ ಸಮ್ಮಿಶ್ರ ಸರ್ಕಾರ ಸ್ಥಾಪಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮುಂದಾಗುತ್ತಿದ್ದಾರೆ ಎಂಬ ಮಾಹಿತಿ ಪಡೆದ ಕೂಡಲೇ ತನ್ನ ಕಾರ್ಯತಂತ್ರವನ್ನು ಬದಲಿಸಿ ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಅನುಮತಿ ನೀಡಿತು ಎಂದು 'ಏಷ್ಯನ್ ಏಜ್' ಪತ್ರಿಕೆ ವರದಿ ಮಾಡಿದೆ.
ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರು ಕಾಂಗ್ರೆಸ್ನ ಇಬ್ಬರು ಮತ್ತು ಕೆಪಿಜೆಪಿಯ ಒಬ್ಬ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದು ಕೂಡ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಲು ಕಾರಣವಾದ ಮತ್ತೊಂದು ಅಂಶ.
ಬಿಜೆಪಿ ಸಖ್ಯ ಬಯಸುತ್ತಿರುವ ಜೆಡಿಎಸ್ ಶಾಸಕರು: ಬಿಜೆಪಿ ನಾಯಕರು ಏನಂದ್ರು?
ಉಳಿದ 13 ಶಾಸಕರು ಅನರ್ಹತೆಯ ಭೀತಿ ಎದುರಿಸುತ್ತಿದ್ದಾರೆ. ಹೀಗಿರುವಾಗ ಸರ್ಕಾರ ರಚನೆ ಮಾಡುವಂತೆ ಸಕಾರಾತ್ಮಕ ಸೂಚನೆ ನೀಡುವುದು ಒಳಿತು ಎಂದು ಪಕ್ಷ ಭಾವಿಸಿತ್ತು ಎಂದು ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಕಲಬುರಗಿಯಲ್ಲಿ ಕುಳಿತು ಅತೃಪ್ತ ಶಾಸಕರ ಮನವೊಲಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬುದರ ಸುಳಿವು ಬಿಜೆಪಿಗೆ ದೊರಕಿತ್ತು.
ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಸರ್ಕಾರ
ಒಂದು ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್, ನಾಲ್ಕು ಅಥವಾ ಐವರು ಅತೃಪ್ತ ಶಾಸಕರನ್ನು ಮೈತ್ರಿಕೂಟದೊಳಗೆ ಮರಳಿ ಸೆಳೆದುಕೊಂಡರೆ, ಅದು ಸರ್ಕಾರ ರಚಿಸುವ ಬಿಜೆಪಿಯ ಉದ್ದೇಶಕ್ಕೆ ಅಪಾಯ ತಂದೊಡ್ಡುತ್ತದೆ. ಅತ್ತ ಅತೃಪ್ತ ಶಾಸಕರು ಅನರ್ಹತೆಯ ಭೀತಿಯ ಒತ್ತಡ ಎದುರಿಸುತ್ತಿರುವುದರಿಂದ, ಕಾಂಗ್ರೆಸ್ ಅವರ ಮನವೊಲಿಸಲು ಪ್ರಯತ್ನಿಸಬಹುದು ಮತ್ತು ಬಂಡಾಯ ಶಾಸಕರೊಂದಿಗೆ ಸೇರಿ ರಾಜೀನಾಮೆ ನೀಡಿದ್ದ ಮತ್ತು ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎನ್ನಲಾದ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಸರ್ಕಾರ ರಚಿಸಲು ಕೂಡ ಮುಂದಾಗಬಹುದು ಎಂಬ ವರದಿಗಳು ಬಂದಿದ್ದವು.
ಜುಲೈ 29ರಂದು ವಿಶ್ವಾಸಮತಯಾಚನೆ : ಯಡಿಯೂರಪ್ಪ
ರಿವರ್ಸ್ ಆಪರೇಷನ್ ಭಯ
ಒಂದು ವೇಳೆ ಕಾಂಗ್ರೆಸ್ನ ಉದ್ದೇಶ ಈಡೇರಿದರೆ ಕಾಂಗ್ರೆಸ್ನವರು ಹಲವು ಸಮಯದಿಂದ ಹೇಳಿಕೊಂಡು ಬಂದಿರುವ 'ರಿವರ್ಸ್ ಆಪರೇಷನ್'ನ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಬಿಜೆಪಿಯ ಮೂರು ಅಥವಾ ನಾಲ್ಕು ಶಾಸಕರನ್ನು ಅದು ಸೆಳೆದುಕೊಳ್ಳುವ ಸಂಭವ ಇತ್ತು. ಈ ಕಾರಣದಿಂದಲೇ ಬಿಜೆಪಿ ಎಲ್ಲ ವಿರೋಧಗಳನ್ನು ಬದಿಗೊತ್ತಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಸ್ಥಾಪಿಸಿತು ಎಂದು ಪಕ್ಷದ ಮೂಲಗಳು ಹೇಳಿವೆ.
ಅತೃಪ್ತ ಶಾಸಕರಲ್ಲಿ ಭರವಸೆ ತುಂಬಲು...
ಗುರುವಾರ ಮೂವರು ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ ಬಳಿಕ ಉಳಿದ ಅತೃಪ್ತ ಶಾಸಕರು ತಮ್ಮ ಭಯ ವ್ಯಕ್ತಪಡಿಸಿದ್ದರು. ಇದರಿಂದ ಅವರನ್ನು ರಕ್ಷಿಸಲು ಮತ್ತು ಸರ್ಕಾರ ರಚನೆಯ ಕುರಿತು ಅವರಲ್ಲಿ ಭರವಸೆ ತುಂಬುವ ಮೂಲಕ ಸಂಕಷ್ಟದಲ್ಲಿರುವ ಅವರಿಗೆ ಸಚಿವ ಸ್ಥಾನದ ಖಾತರಿ ನೀಡಲು ಬಿಜೆಪಿ ಅವಸರ ಮಾಡಬೇಕಾಯಿತು. ಹೀಗಾಗಿ ಯಡಿಯೂರಪ್ಪ ಅವರಿಗೆ ಪ್ರಮಾಣವಚನ ಸ್ವೀಕಾರ ಮಾಡುವಂತೆ ದಿಢೀರ್ ಸೂಚನೆ ನೀಡಲಾಯಿತು.
ನೇಕಾರರಿಗೆ, ರೈತರಿಗೆ ಭರ್ಜರಿ ಗಿಫ್ಟ್ ಕೊಟ್ಟ ಸಿಎಂ ಯಡಿಯೂರಪ್ಪ
ಶಾಸಕರನ್ನು ರಕ್ಷಿಸಲು ಹೊಸ ಸ್ಪೀಕರ್
ಅತೃಪ್ತ ಶಾಸಕರು ತಮ್ಮ ರಾಜೀನಾಮೆ ಅಂಗೀಕಾರವಾಗಲು ಮಾಡುತ್ತಿರುವ ಪ್ರಯತ್ನಕ್ಕೆ ನೆರವಾಗಲು ಮತ್ತು ಅನರ್ಹಗೊಳ್ಳುವ ಸಾಧ್ಯತೆಯನ್ನು ತಪ್ಪಿಸಿ ರಾಜೀನಾಮೆ ಅಂಗೀಕಾರ ಮಾಡಲು ಹೊಸ ಸ್ಪೀಕರ್ ಅವರನ್ನು ನೇಮಿಸುವ ವಿಚಾರವಾಗಿ ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಈ ಕಾರಣಕ್ಕಾಗಿ ರಮೇಶ್ ಕುಮಾರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಕೂಡ ಬಿಜೆಪಿ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ