ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ, ಕವಿರಾಜ್ ಉಚ್ಛಾಟನೆ
ಬೆಂಗಳೂರು, ನವೆಂಬರ್ 21: ತನ್ನ ಪಕ್ಷದ ಬಂಡಾಯ ಅಭ್ಯರ್ಥಿಗಳಿಗೆ ಬಿಜೆಪಿ ಶಿಕ್ಷೆ ವಿಧಿಸಿದ್ದು, ಪಕ್ಷದ ಆದೇಶ ಧಿಕ್ಕರಿಸಿ ಚುನಾವಣೆ ನಾಮಪತ್ರ ಸಲ್ಲಿಸಿರುವ ಇಬ್ಬರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ಹೊಸಕೋಟೆ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿರುವ ಶರತ್ ಬಚ್ಚೇಗೌಡ ಹಾಗೂ ವಿಜಯನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಕವಿರಾಜ್ ಅರಸ್ ಅವರುಗಳನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಆದೇಶ ಹೊರಡಿಸಿದ್ದಾರೆ.
ಆನಂದ್ ಸಿಂಗ್ ಕಣಕ್ಕೆ, ಸ್ಪರ್ಧೆಯಿಂದ ಗವಿಯಪ್ಪ ಹೊರಕ್ಕೆ
ಈ ಇಬ್ಬರೂ ಮುಖಂಡರನ್ನು ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಹಿನ್ನೆಲೆಯಲ್ಲಿ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಉಚ್ಛಾಟನೆಯಿಂದಾಗಿ ಈ ಇಬ್ಬರೂ ಮುಖಂಡರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಬಿಜೆಪಿಯ ಅಧಿಕೃತ ಅಭ್ಯರ್ಥಿಯ ಎದುರು ನಾಮಪತ್ರ ಸಲ್ಲಿಸಿದ್ದಕ್ಕಾಗಿ ಇಬ್ಬರನ್ನೂ ಉಚ್ಛಾಟನೆ ಮಾಡಲಾಗಿದೆ.
ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಆಗಿದ್ದ ಶರತ್ ಬಚ್ಚೇಗೌಡ ಅವರು ಹೊಸಕೋಟೆ ಬಿಜೆಪಿ ಅಭ್ಯರ್ಥಿ 'ಅನರ್ಹ' ಎಂಟಿಬಿ ನಾಗರಾಜು ವಿರುದ್ಧ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯ ಮುಖಂಡರು ನಾಮಪತ್ರ ವಾಪಸ್ ಪಡೆಯುವಂತೆ ಬಹುವಾಗಿ ಒತ್ತಡ ಹೇರಿದ್ದರೂ ಸಹ ಅದನ್ನು ನಿರಾಕರಿಸಿ ಕಣದಲ್ಲಿ ಉಳಿದುಕೊಂಡಿದ್ದಾರೆ. ಹಾಗಾಗಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ಶರತ್ ಬಚ್ಚೇಗೌಡ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವುದಾಗಿ ಕೆಲವು ದಿನಗಳ ಹಿಂದೆ ಯಡಿಯೂರಪ್ಪ ಅವರು ಹೊಸಕೋಟೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಹೇಳಿದ್ದರು. ಅಂತೆಯೇ ಇಂದು ನಾಮಪತ್ರ ಹಿಂಪಡೆಯುವ ಕೊನೆಯ ದಿನವಾಗಿದ್ದು, ಇಂದು ಶರತ್ ಬಚ್ಚೇಗೌಡ ನಾಮಪತ್ರ ವಾಪಸ್ ಪಡೆಯದ ಕಾರಣ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಎಂಟಿಬಿ ನಾಗರಾಜ್, ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ದೂರು
ಕವಿರಾಜ್ ಅರಸ್ ಅವರು ವಿಜಯನಗರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ವಿರುದ್ಧ ಕಣಕ್ಕೆ ಇಳಿದಿದ್ದು, ಅವರಿಗೂ ನಾಮಪತ್ರ ಹಿಂಪಡೆಯುವಂತೆ ಬಿಜೆಪಿ ಮುಖಂಡರು ಒತ್ತಡ ಹೇರಿದ್ದರು, ಆದರೆ ಅವರು ತಮ್ಮ ನಿರ್ಧಾರ ಬದಲಿಸದೇ ಪಕ್ಷೇತರವಾಗಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದ್ದಾರೆ ಹಾಗಾಗಿ ಅವರನ್ನೂ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಕವಿರಾಜ್ ಅವರು ಇತ್ತೀಚೆಗಷ್ಟೆ ನಾಮಪತ್ರ ಸಲ್ಲಿಸಿದಾಗ ಅವರ ಬೆಂಬಲಿಗರು ಅವರ ಮೇಲೆ 101 ಲೀಟರ್ ಹಾಲು ಸುರಿದು ಅಭಿಷೇಕ ಮಾಡಿದ್ದರು. ಇದು ರಾಜ್ಯದಾದ್ಯಂತ ಗಮನ ಸೆಳೆದಿತ್ತು.