ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು
ಬೆಂಗಳೂರು, ಏಪ್ರಿಲ್ 9: ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗೋಪ್ಯತಾ ಪ್ರಮಾಣ ಹಾಗೂ ಅಧಿಕೃತ ರಹಸ್ಯ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ಬಿಜೆಪಿಯ ಇತರ ಸದಸ್ಯರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅಗತ್ಯ ಕ್ರಮ ಜರುಗಿಸುವಂತೆ ಮನವಿ ಕೂಡ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬಿಜೆಪಿ ಪರವಾಗಿ ನಿಯೋಗವೊಂದು ರಾಜ್ಯಪಾಲರನ್ನು ಭೇಟಿ ಮಾಡಿ, ಈ ಎರಡು ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡವಳಿಕೆಯು ಪ್ರಶ್ನಾರ್ಹವಾದುದ್ದು. ಆದ್ದರಿಂದ ಸ್ವತಃ ರಾಜ್ಯಪಾಲರು ಮಧ್ಯಪ್ರವೇಶಿಸಿ, ಕಾನೂನು ಪರಿಧಿಯಲ್ಲಿ ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ ಪರಿಶೀಲಿಸಬೇಕು ಎಂದು ಮನವಿ ಮಾಡಲಾಗಿದೆ.
ಮೊದಲನೆಯದಾಗಿ ಕರ್ನಾಟಕದಲ್ಲಿ ಆದಾಯ ತೆರಿಗೆ ದಾಳಿ ಆಗುವ ಒಂದು ದಿನ ಮೊದಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಆ ವಿಚಾರವನ್ನು ಬಹಿರಂಗ ಪಡಿಸಿದರು. ಗುತ್ತಿಗೆದಾರರ ಬಳಿ ದೊಡ್ಡ ಮೊತ್ತದ ನಗದು ಹಾಗೂ ದಾಖಲೆಗಳು ಇದ್ದವು ಎಂದು ಸಾರ್ವಜನಿಕವಾಗಿಯೇ ಬಹಿರಂಗವಾಗಿದೆ ಎಂದು ತಿಳಿಸಿದ್ದಾರೆ.
* ಸಿಎಂ ಕುಮಾರಸ್ವಾಮಿ ಅವರಿಗೆ ಆದಾಯ ತೆರಿಗೆ ದಾಳಿ ಬಗ್ಗೆ ಮಾಹಿತಿ ಸಿಕ್ಕಿದ್ದು ಹೇಗೆ? ಮತ್ತು ಅವರ ಸಾಂವಿಧಾನಿಕ ಜವಾಬ್ದಾರಿಯಾದ ರಹಸ್ಯವನ್ನು ಕಾಪಾಡಬೇಕಾದ ನಿಯಮ ಮುರಿದು, ಹಣ ಸಂಗ್ರಹಿಸಿ, ತಮ್ಮ ಬಳಿ ಇರಿಸಿಕೊಂಡಿದ್ದವರಿಗೆ ಮಾಹಿತಿ ನೀಡಿದ್ದು ಏಕೆ?
* ಸಂಪುಟ ಸಹೋದ್ಯೋಗಿಗಳ ಜತೆ ಕೂಡಿ, ಆದಾಯ ತೆರಿಗೆ ಇಲಾಖೆ ಕಚೇರಿ ಹೊರಗೆ ಹೋಗಿ, ಐಟಿ ಅಧಿಕಾರಿಗಳಿಗೆ ಭಯ ಹುಟ್ಟಿಸಲು ಯತ್ನಿಸಿದ್ದಾರೆ. ಸಾಂವಿಧಾನಿಕವಾಗಿ ಪ್ರಮಾಣ ಸ್ವೀಕರಿಸಿದ ಮುಖ್ಯಮಂತ್ರಿ ನ್ಯಾಯ ಮೀರಿದ ಉದಾಹರಣೆ ಇದು ಆಗುವುದಿಲ್ಲವೆ?
'ಐಟಿ ಅಧಿಕಾರಿಗಳು ದಾಳಿ ನಡೆಸಿದರೆ ಕುಮಾರಸ್ವಾಮಿ ಮುಖದಲ್ಲಿ ಏಕೆ ಗಾಬರಿ?'
* ಚುನಾವಣೆಗೆ ಮುನ್ನ ಸರ್ಜಿಕಲ್ ಸ್ಟ್ರೈಕ್, ದಾಳಿಗಳು ಆಗುತ್ತವೆ ಎಂದು ಸೇನಾಧಿಕಾರಿಯೊಬ್ಬರು ಕುಮಾರಸ್ವಾಮಿಗೆ ಎರಡು ವರ್ಷದ ಹಿಂದೆ ಹೇಳಿದ್ದರಂತೆ. ಇದು ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆ ಆಗುತ್ತದೆ.
* ಒಂದು ವೇಳೆ ಕುಮಾರಸ್ವಾಮಿ ಅವರಿಗೆ ಹೇಳಿದ್ದೇ ನಿಜವಾದ ಆ ಸೇನಾಧಿಕಾರಿಯಿಂದ ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ ಆಗುತ್ತದೆ. ಆದ್ದರಿಂದ ಅದು ನಿಜವಾಗಿದ್ದಲ್ಲಿ ಕುಮಾರಸ್ವಾಮಿ ಅವರು ಆ ಸೇನಾಧಿಕಾರಿ ಹೆಸರನ್ನು ಬಹಿರಂಗ ಪಡಿಸಬೇಕು. ಅಥವಾ ಅದು ಸುಳ್ಳು ಅನ್ನೋದನ್ನು ಖಾತ್ರಿ ಪಡಿಸಬೇಕು.
ಮೈತ್ರಿ ಸರಕಾರ ಪರ ಕೆಲಸ, ಅಧಿಕಾರಿಗಳ ವಿರುದ್ಧ ರಾಜೀವ್ ದೂರು
* ಇದನ್ನು ಸೇನಾಧಿಕಾರಿ ಹೇಳಿದ್ದರೆ ಆತ ವಿಚಾರಣೆ ಎದುರಿಸಬೇಕಾಗುತ್ತದೆ. ಇನ್ನು ಜವಾಬ್ದಾರಿ ಇರುವ ಮುಖ್ಯಮಂತ್ರಿ ಆಗಿ, ಈ ವಿಚಾರವನ್ನು ಭಾರತದ ರಾಷ್ಟ್ರಪತಿ ಜತೆಗೆ ಹಂಚಿಕೊಳ್ಳಬೇಕಾಗುತ್ತದೆ. ಈ ಎರಡೂ ಸನ್ನಿವೇಶದಲ್ಲೂ ಮುಖ್ಯಮಂತ್ರಿಗಳು ತಮ್ಮನ್ನು ಕಾನೂನಿಗೂ ಮೇಲ್ಪಟ್ಟವರಾಗಿ ಭಾವಿಸಿದಂತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜ್ಯಪಾಲರಿಗೆ ಮನವಿ ಸಲ್ಲಿಸುವ ವೇಳೆ ಶಾಸಕ ಸಿ.ಎನ್.ಅಶ್ವಥ್ ನಾರಾಯಣ್, ಎ.ಎಚ್.ಆನಂದ್, ವಿನೋದ್ ಮತ್ತಿತರರು ಹಾಜರಿದ್ದರು.