ಪವಾಡ ಪುರುಷ ಬೆನ್ನಿಹಿನ್ ವಾಪಸ್ ಕಳಿಸಿ : ಬಿಜೆಪಿ
ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಸುರೇಶ್ ಕುಮಾರ್, ಕಾಂಗ್ರೆಸ್ ಸರ್ಕಾರ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಆದರೆ, ಅನ್ಯ ಧರ್ಮಗಳನ್ನು ಕೀಲಾಗಿ ಬಿಂಬಿಸಿ, ಮತಾಂತರಕ್ಕೆ ಪ್ರಚೋದನೆ ನೀಡುವ ಬೆನ್ನಿಹಿನ್ ಅವರನ್ನು ಸ್ವಾಗತಿಸುತ್ತಿದೆ ಎಂದು ಆರೋಪಿಸಿದರು. [ಪಾದ್ರಿಗಳು ಬೈಬಲ್ ಬಾಂಬ್ ಸಿಡಿಸುತ್ತಾರೆ]
ಬೆನ್ನಿಹಿನ್ ಅವರನ್ನು ನಗರಕ್ಕೆ ಸ್ವಾಗತಿಸುತ್ತಿರುವುದು ಕಾಂಗ್ರೆಸ್ ಸರ್ಕಾರದ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ. ಬೆನ್ನಿಹಿನ್ ಕಾರ್ಯಕ್ರಮಕ್ಕೆ ಸರ್ಕಾರ ಅವಕಾಶ ನೀಡಬಾರದು. ರಾಜ್ಯ ಸರ್ಕಾರ ಕಾರ್ಯಕ್ರಮಕ್ಕೆ ಅವಕಾಶ ನೀಡಿದರೆ, ಬಿಜೆಪಿ ರಾಜ್ಯಾದ್ಯಂತ ಇದರ ವಿರುದ್ಧ ಹೋರಾಟ ನಡೆಸಲಿದೆ ಎಂದು ಸುರೇಶ್ ಕುಮಾರ್ ಎಚ್ಚರಿಕೆ ನೀಡಿದರು. [ಬೆಂಗಳೂರಿಗೆ ಮತ್ತೆ ಪವಾಡ ಪುರುಷ ಬೆನ್ನಿಹಿನ್]
ವಿಶ್ವದ ಹಲವು ರಾಷ್ಟ್ರಗಳು ಪವಾಡ ಪುರುಷ ಬೆನ್ನಿಹಿನ್ ಕಾರ್ಯಕ್ರಮವನ್ನು ನಿಷೇಧಿಸಿವೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ರತ್ನಕಂಬಳಿ ಹಾಸಿ ಅವರನ್ನು ಸ್ವಾಗತಿಸಲು ಸಜ್ಜಾಗಿದೆ. 2005ರಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ರಾಜ್ಯಕ್ಕೆ ಆಗಮಿಸಿದ್ದ ಪವಾಡ ಪುರುಷ, ಪುನಃ ಕಾಂಗ್ರೆಸ್ ಸರ್ಕಾರವಿರುವಾಗಲೇ ಆಗಮಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು. [ಪವಾಡ ಪುರುಷನ ವಿರುದ್ಧ ಪ್ರತಿಭಟನೆ]
ಹಿಂದೆ ಸಿದ್ದರಾಮಯ್ಯ ಬೆನ್ನಿಹಿನ್ ಕಾರ್ಯಕ್ರಮವನ್ನು ವಿರೋಧಿಸಿದ್ದರು. ಸದ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಕಾರ್ಯಕ್ರಮವನ್ನು ನಿಷೇಧಿಸುವ ಅಧಿಕಾರ ಹೊಂದಿದ್ದಾರೆ. ಆದ್ದರಿಂದ ಪವಾಡ ಪುರುಷನ ಕಾರ್ಯಕ್ರಮ ನಿಷೇಧಿಸಬೇಕೆಂದು ಸುರೇಶ್ ಕುಮಾರ್ ಒತ್ತಾಯಿಸಿದರು.
ಜ.3ರ ಶುಕ್ರವಾರ ವಿವಿಧ ಹಿಂದೂ ಸಂಘಟನೆಗಳು ಬೆಂಗಳೂರಿನಲ್ಲಿ ಕ್ರಿಶ್ಚಿಯನ್ ಪಾದ್ರಿ ಬೆನ್ನಿಹಿನ್ ಬೆಂಗಳೂರಿಗೆ ಆಗಮಿಸುವುದನ್ನು ವಿರೋಧಿಸಿ ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಹಿರಿಯ ಸಂಶೋಧಕ ಎಂ.ಚಿದಾನಂದಮೂರ್ತಿ ಸಹ ಬೆನ್ನಿಹಿನ್ ಭೇಟಿಗೆ ಅವಕಾಶ ನೀಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆದರೆ, ಸರ್ಕಾರ ಈ ಕುರಿತು ಯಾವುದೇ ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ.
ಯಾವಾಗ ಬರ್ತಾನೆ ಬೆನ್ನಿಹಿನ್ : ಜನವರಿ 15ರಿಂದ ಜ.19ರವರೆಗೆ ಇಸ್ರೇಲ್ ಮೂಲದ ಬೈಬಲ್ ಶಿಕ್ಷಕ ಬೆನ್ನಿ ಹಿನ್ ಬೆಂಗಳೂರಿನ ಯಲಹಂಕದಲ್ಲಿರುವ ಸೂಪರ್ ನೋವಾ ಅರೀನಾ ಪ್ರದೇಶದಲ್ಲಿ ಕ್ರಿಶ್ಚಿಯನ್ ಪ್ರಾರ್ಥನಾ ಸಮ್ಮೇಳವನ್ನು ಹಮ್ಮಿಕೊಂಡಿದ್ದಾನೆ. ಪ್ರತಿದಿನ ಸಂಜೆ 4ರಿಂದ 9 ಗಂಟೆಯವರೆಗೆ ಪ್ರಾರ್ಥನಾ ಕಾರ್ಯಕ್ರಮ ನಡೆಯಲಿದೆ.