ರಾಜ್ಯ ಮತ್ತು ಕೇಂದ್ರ ಎರಡಲ್ಲೂ ಬಿಜೆಪಿ ಸರ್ಕಾರವಿದ್ದರೂ ಬೀದಿ ಪಾಲಾದ ಕನ್ನಡ ಜನ
ಬೆಂಗಳೂರು, ಸೆ. 18: ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಲಕ್ಷಾಂತರ ಜನರು ತತ್ತರಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಎರಡಲ್ಲೂ ಬಿಜೆಪಿ ಸರ್ಕಾರವಿದ್ದರೂ ಕನ್ನಡ ಜನ ಬೀದಿ ಪಾಲಾಗಿದ್ದಾರೆ. ಕೇಂದ್ರದಿಂದ ಪರಿಹಾರ ಧನ ತರುವಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನರು ತಮ್ಮ ಜೀವನ ಕಳೆದುಕೊಂಡು ಬೀದಿಪಾಲಾಗಿ ಒಂದು ತಿಂಗಳೇ ಕಳೆದು ಹೋಗಿದೆ. ಕಳೆದ ವಾರ ಪ್ರವಾಹಕ್ಕೆ ಸಿಲುಕಿ ನೆಲೆ ಕಳೆದುಕೊಂಡಿದ್ದ ಕುಟುಂಬದ ಪುಟ್ಟಮಗುವೊಂದು ತಿನ್ನಲು ಆಹಾರವಿಲ್ಲದೆ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಅಲ್ಲದೆ ಕಳೆದ ಭಾನುವಾರ ಬೆಳಗಾವಿಯ ನೇಕಾರರೊಬ್ಬರು ಪ್ರವಾಹದಲ್ಲಿ ಮನೆಯನ್ನೂ ಕಳೆದುಕೊಂಡು, ಮಗ್ಗವೂ ಹಾಳಾಗಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜನರು ಇಂದಿಗೂ ಬಯಲಿನಲ್ಲೇ ಸ್ನಾನ ಮಾಡಿ, ಬೀದಿಗಳಲ್ಲೇ ಬದುಕು ನಡೆಸುವಂತಹ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲೂ ಬಿಜೆಪಿಗೆ ಅಧಿಕಾರದ ನೀಡಿದ ಜನರಿಗೆ ಸಿಕ್ಕಿದ್ದೇನು?
ವಿಶೇಷ: ಜಲತಜ್ಞ ಡಾ. ದೇವರಾಜ್ ರೆಡ್ಡಿರಿಂದ ಪ್ರವಾಹದ ನೈಜ ಕಾರಣ ಬಹಿರಂಗ
ಕರ್ನಾಟಕದಲ್ಲಿ ಪದೇ ಪದೇ ಪ್ರವಾಹ ಸಂಭವಿಸುತ್ತಿದ್ದರೂ ಯಾವುದೇ ಮುನ್ನೆಚ್ಚರಿಕೆ ಕ್ರಮವಿರಲಿ ಪ್ರವಾಹದಿಂದ ಬದುಕು ಕೆಳೆದುಕೊಂಡ ಜನರ ಜೀವನವನ್ನು ಮರಳಿ ಕಟ್ಟಿಕೊಡುವುದರಲ್ಲಿ ಕೂಡ ಸರ್ಕಾರ ವಿಫಲವಾಗಿದೆ. ಈ ಬಾರಿಯ ಪ್ರವಾಹದಿಂದ 12 ಜಿಲ್ಲೆಗಳ 88 ತಾಲ್ಲೂಕುಗಳಲ್ಲಿ 40 ಸಾವಿರ ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಆದರೆ ಯಡಿಯೂರಪ್ಪನವರು ಕೇಂದ್ರ ಸರ್ಕಾರದಿಂದ ಕೇವಲ 3,800 ಕೋಟಿಯನ್ನಷ್ಟೇ ಪರಿಹಾರಕ್ಕೆ ಕೇಳಿದ್ದಾರೆ.