ಮತದಾರರನ್ನು ಸೆಳೆಯಲು ಬಿಜೆಪಿಯ ಮತ್ತೊಂದು ಮಾಸ್ಟರ್ ಪ್ಲಾನ್
Recommended Video
ಬೆಂಗಳೂರು, ಫೆ 9: ಪರಿವರ್ತನಾ ರ್ಯಾಲಿ ನಿರೀಕ್ಷೆಗೂ ಮೀರಿ ಯಶಸ್ಸನ್ನು ಪಡೆದುಕೊಂಡ ಖುಷಿಯಲ್ಲಿರುವ ಬಿಜೆಪಿ ನಾಯಕರು, ಮತ ಸೆಳೆಯಲು ಇನ್ನೊಂದು ಸುತ್ತಿನ ಪ್ಲ್ಯಾನಿಗೆ ಸಜ್ಜಾಗಿದ್ದಾರೆ. ಚುನಾವಣಾ ಕಾಲೇ, ಬಹುಕೃತ ವೇಷಂ!!
ದಲಿತರ ಮನೆಯಲ್ಲಿ ಭೋಜನ ಸವಿದ ನಂತರ, ಬಿಜೆಪಿ ನಾಯಕರ ಮುಂದಿನ ಹೆಜ್ಜೆ, ಸ್ಲಂ ನಿವಾಸಿಗಳತ್ತ. ಮೊದಲಿಗೆ, ಬೆಂಗಳೂರು ವ್ಯಾಪ್ತಿಯಲ್ಲಿ ಬರುವ, ಕಾಂಗ್ರೆಸ್ಸಿನ ಭದ್ರಕೋಟೆ ಮತ್ತು ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದ ಸ್ಲಂನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಾಸ್ತವ್ಯ ಹೂಡಲಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕಕ್ಕೆ ಮೂರು ದಿನಗಳ ಪ್ರವಾಸ ಶನಿವಾರದಿಂದ (ಫೆ 10) ಆರಂಭಿಸುತ್ತಿರುವ ಹೊತ್ತಿನಲ್ಲೇ, ಯಡಿಯೂರಪ್ಪ ಕಾಂಗ್ರೆಸ್ ಭದ್ರ ಮತಬ್ಯಾಂಕಿಗೆ 'ಕೈ'ಹಾಕಲು ಮುಂದಾಗಿದ್ದಾರೆ. ಶನಿವಾರ, ಬಿಎಸ್ವೈ ಈ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿರುವ ಸುಮಾರು 2750ಕ್ಕೂ ಹೆಚ್ಚು ಸ್ಲಂಗಳಲ್ಲಿ ವಾಸ್ತವ್ಯ ಹೂಡುವ ಯೋಜನೆ ಹಾಕಿಕೊಂಡಿರುವ ಬಿಜೆಪಿ ಮುಖಂಡರು, ಜಿಲ್ಲಾ ಅಧ್ಯಕ್ಷರು ಮತ್ತು ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳಿಗೆ ಸ್ಲಂನಲ್ಲಿ ವಾಸ್ತವ್ಯ ಹೂಡುವಂತೆ ಸೂಚಿಸಿದೆ.
ಮುಂದಿನ ತಿಂಗಳು ಸ್ಲಂ ನಿವಾಸಿಗಳ ಭಾರೀ ಸಮಾವೇಶ ನಡೆಸಲು ಬಿಜೆಪಿ ನಿರ್ಧರಿಸಿದ್ದು, ಸ್ಲಂ ವಾಸ್ತವ್ಯದ ವೇಳೆ ನಿವಾಸಿಗಳ ಕಷ್ಟಕಾರ್ಪಣ್ಯಗಳನ್ನು ಪಟ್ಟಿ ಮಾಡಿ,ಕಾಂಗ್ರೆಸ್ ವಿರುದ್ದ ಮತ್ತೊಂದು ಸುತ್ತು ತಿರುಗಿಬೀಳಲು ಬಿಜೆಪಿ ಪ್ಲ್ಯಾನ್ ಮಾಡಿಕೊಂಡಿದೆ ಎನ್ನುವ ಮಾಹಿತಿಯಿದೆ.
ಗಾಂಧಿನಗರ ಕ್ಷೇತ್ರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್ ಸತತವಾಗಿ ಜಯಗಳಿಸುತ್ತಿದ್ದು, ಈ ಕ್ಷೇತ್ರದಲ್ಲಿ ಸ್ಲಂ ಮತ್ತು ತಮಿಳು ಮತಗಳು ನಿರ್ಣಾಯಕ ಪಾತ್ರವಹಿಸಲಿದೆ. ಜಯಲಲಿತಾ ಜೀವಿತಾವಧಿಯಲ್ಲಿ ಎಐಎಡಿಎಂಕೆ ತನ್ನ ಅಭ್ಯರ್ಥಿಯನ್ನು ಇಲ್ಲಿ ಕಣಕ್ಕಿಳಿಸಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.