ಅಕ್ರಮ ಒತ್ತುವರಿ ಮಾಡಿಕೊಂಡ ರೆಸಾರ್ಟ್ನಲ್ಲಿ ಕೈ ಶಾಸಕರು: ಬಿಜೆಪಿ ಆರೋಪ
ಬೆಂಗಳೂರು, ಜನವರಿ 19: ಕಾಂಗ್ರೆಸ್ನ ಸುಮಾರು 50 ಶಾಸಕರು ಬೀಡುಬಿಟ್ಟಿರುವ ಬಿಡದಿಯ ಈಗಲ್ಟನ್ ರೆಸಾರ್ಟ್, ಸರ್ಕಾರಕ್ಕೆ ನೀಡಬೇಕಾದ ಭಾರಿ ಮೊತ್ತದ ದಂಡದ ಹಣವನ್ನು ಬಾಕಿ ಉಳಿಸಿಕೊಂಡಿದೆಯೇ?
ಭೂಮಿ ಒತ್ತುವರಿ ಪ್ರಕರಣದೊಂದರಲ್ಲಿ ಬರೋಬ್ಬರಿ 998 ಕೋಟಿ ರೂ. ದಂಡ ಹಣವನ್ನು ಈಗಲ್ಟನ್ ರೆಸಾರ್ಟ್ ಬಾಕಿ ಉಳಿಸಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ.
ಹಠಾತ್ತನೆ ಕಾಂಗ್ರೆಸ್ ಶಾಸಕರು ರೆಸಾರ್ಟ್ಗೆ ಹೋಗಿದ್ದೇಕೆ?
ಅಕ್ರಮವಾಗಿ 77.19 ಎಕರೆಯಷ್ಟು ಜಾಗ ಕಬಳಿಸಿದ್ದ ಪ್ರಕರಣದಲ್ಲಿ ಈಗಲ್ಟನ್ ರೆಸಾರ್ಟ್ಗೆ 998 ಕೋಟಿ ರೂ. ದಂಡ ವಿಧಿಸಲಾಗಿತ್ತು. ಚಾಮುಂಡೇಶ್ವರಿ ಬಿಲ್ಡ್ಟೆಕ್ ಪ್ರೈವೇಟ್ ಲಿಮಿಟೆಡ್ ಇಲ್ಲಿ ಈಗಲ್ಟನ್ ಗಾಲ್ಫ್ ರೆಸಾರ್ಟ್ ನಿರ್ಮಿಸಿತ್ತು. ಅದರ ಮಾರುಕಟ್ಟೆ ಮೌಲ್ಯ 982.07 ಕೋಟಿ ರೂ. ಎಂದು ನಿರ್ಧರಿಸಲಾಗಿತ್ತು.
106.12 ಎಕರೆ ಸರ್ಕಾರಿ ಭೂಮಿ ಒತ್ತುವರಿ
ಈ ಬಗ್ಗೆ ಡಿಸೆಂಬರ್ನಲ್ಲಿ ಸದನದಲ್ಲಿಯೂ ಚರ್ಚೆ ನಡೆದಿತ್ತು. ಚಾಮುಂಡೇಶ್ವರಿ ಸಂಸ್ಥೆಯಿಂದ ಹಣ ಅಥವಾ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಬಿಡದಿ ತಾಲ್ಲೂಕಿನ ಶ್ಯಾನಮಂಗಲ, ಬಿಳ್ಳಕೆಂಪನಹಳ್ಳಿ ಮತ್ತು ಬಾನಂದೂರುಗಳಲ್ಲಿ ಈಗಲ್ಟನ್ ಯೋಜನೆಗಾಗಿ ಸಂಸ್ಥೆ 106.12 ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ವಿಧಾನಸಭೆಗೆ ತಿಳಿಸಿದ್ದರು.
ಬೆಳಿಗ್ಗೆ ರೆಸಾರ್ಟ್ ರಾಜಕೀಯಕ್ಕೆ ಛೀ ಎಂದರು, ಸಂಜೆ ತಾವೇ ರೆಸಾರ್ಟ್ಗೆ ಹೋದರು
28.33 ಎಕರೆ ಭೂಮಿ ವಶ
1997ರಿಂದಲೂ ಈ ಪ್ರಕರಣ ಬಾಕಿ ಉಳಿದಿದೆ. 2014ರ ಜನವರಿ 16ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ಸರ್ಕಾರ ಈಗಾಗಲೇ 106.12 ಎಕರೆ ಒತ್ತುವರಿ ಭೂಮಿಯಲ್ಲಿ 28.33 ಎಕರೆ ಭೂಮಿಯನ್ನು ವಶಕ್ಕೆ ಪಡೆದುಕೊಂಡಿದೆ. ಉಳಿದ ಒತ್ತುವರಿ ಜಮೀನಿಗೆ ಕರ್ನಾಟಕ ಹೈಕೋರ್ಟ್ ಆದೇಶದಂತೆ ಸಂಪುಟ ಉಪ ಸಮಿತಿಯು 982.07 ಕೋಟಿ ಮಾರುಕಟ್ಟೆ ಮೌಲ್ಯ ನಿರ್ಧರಿಸಿದ್ದು, ಅದಕ್ಕೆ ಸಂಪುಟದ ಅನುಮೋದನೆ ದೊರಕಿದೆ.
ನಾಳೆ ರೆಸಾರ್ಟ್ನಲ್ಲಿ ಬಿಜೆಪಿ ಶಾಸಕರ ಜೊತೆ ಯಡಿಯೂರಪ್ಪ ಸಭೆ
ದಂಡ ವಸೂಲಿ ವಿಳಂಬವಾಗಿದೆ
ಆದರೆ, ಈ ಪ್ರಕರಣ ಇನ್ನೂ ಕೋರ್ಟ್ನಲ್ಲಿದೆ. ನ್ಯಾಯಾಲಯವು ಚಾಮುಂಡೇಶ್ವರಿ ಸಂಸ್ಥೆಗೆ ಅವಕಾಶ ನೀಡುವಂತೆ ಸೂಚಿಸಿತ್ತು. ಹೀಗಾಗಿ ಮುಂದಿನ ಕ್ರಮ ವಿಳಂಬವಾಗಿದೆ ಎಂದು ದೇಶಪಾಂಡೆ ವಿವರಿಸಿದ್ದರು.
ಆದರೆ ಈಗ ಕಂದಾಯ ಸಚಿವ ದೇಶಪಾಂಡೆ ಅವರದೇ ಪಕ್ಷದ ಶಾಸಕರು ಅದೇ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
77 ಎಕರೆ ಭೂಮಿಯನ್ನು ಒತ್ತುವರಿ ಮಾಡಿದ್ದಕ್ಕೆ ಸರ್ಕಾರ ಈಗಲ್ಟನ್ ರೆಸಾರ್ಟ್ನಿಂದ 998 ಕೋಟಿ ರೂ ವಸೂಲಿ ಮಾಡಬೇಕಿದೆ ಎಂಬ ಪತ್ರಿಕೆಯ ವರದಿಯನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
|
ದಂಡ ವಸೂಲಿ ಮಾಡಿಕೊಂಡು ಬನ್ನಿ
ಕಾಂಗ್ರೆಸ್ ಪಕ್ಷವು ಈಗ ರೆಸಾರ್ಟ್ನಲ್ಲಿಯೇ ಕಾಲ ಕಳೆಯಲಿದೆ. ಹೀಗಾಗಿ ಅಲ್ಲಿಂದ ವಾಪಸ್ ಬರುವಾಗ ಈ ಹಣವನ್ನು ವಸೂಲಿ ಮಾಡಿಕೊಂಡು ಬರುವಂತೆ ನಾವು 'ಮರ್ಯಾದಾ ಪುರುಷೋತ್ತಮ' ಶ್ರೀ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ದಿನೇಶ್ ಗುಂಡೂರಾವ್ ಅವರನ್ನು ಮನವಿ ಮಾಡುತ್ತೇವೆ ಎಂದು ಸವಾಲು ಹಾಕಿದೆ.
ಈ ಹಣವನ್ನು ನೀವು ರೈತರ ಸಾಲ ಮನ್ನಾಕ್ಕೆ ಬಳಸಿಕೊಳ್ಳಬಹುದು ಎಂದು ಬಿಜೆಪಿ ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.
|
ಗುಜರಾತ್ ಕೈ ಶಾಸಕರೂ ಬಂದಿದ್ದರು
ಈ ಹಿಂದೆ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಗುಜರಾತ್ನ ಕಾಂಗ್ರೆಸ್ ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ಶಾಸಕರನ್ನು ಕರ್ನಾಟಕಕ್ಕೆ ರವಾನಿಸಿತ್ತು. ಆಗಲೂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಈಗಲ್ಟನ್ ರೆಸಾರ್ಟ್ನಲ್ಲಿ ಕಾಂಗ್ರೆಸ್ ಶಾಸಕರಿಗೆ ಆಶ್ರಯ ನೀಡಲಾಗಿತ್ತು.
|
ಎಚ್ಎಎಲ್ ನಷ್ಟ ವಸೂಲಿಗಾ?
ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಬಿಜೆಪಿ ಶಾಸಕರು ಗುರುಗ್ರಾಮದ ರೆಸಾರ್ಟ್ಗೆ ಹೋಗಿದ್ದು ರಫೇಲ್ ಹಗರಣದಿಂದ ಎಚ್ ಎಎಲ್ಗೆ ಆದ 30,000 ಕೋಟಿ ನಷ್ಟ ವಸೂಲಿಗಾಗಿಯೇ? ಎಂದು ಪ್ರಶ್ನಿಸಿದೆ.
ಬಿಜೆಪಿಯ ಶಾಸಕರು ಗುರುಗ್ರಾಮದ ರೆಸಾರ್ಟ್ ಸೇರಿದ್ದು ನರೇಂದ್ರ ಮೋದಿ ಅವರ ರಫೇಲ್ ಹಗರಣದಿಂದ ಹೆಚ್ಎಎಲ್ ಗಾದ ₹30000 ಕೋಟಿ ನಷ್ಟ ವಸೂಲಿಗಾ? ಪಸಲ್ ಭೀಮಾ ಯೋಜನೆಯಲ್ಲಿ ರೈತರಿಂದ ಕೊಳ್ಳೆಹೊಡೆದ ಸಾವಿರಾರು ಕೋಟಿ ವಸೂಲಿಗಾ? ಆಪರೇಷನ್ ಕಮಲವೆಂಬ ಸಂವಿಧಾನಬಾಹಿರ ಅನೈತಿಕವನ್ನು ಹುಟ್ಟುಹಾಕಿದ ನಿಮ್ಮ ಯೋಗ್ಯತೆ ಜನರಿಗೆ ತಿಳಿದಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.