ಬಿಟ್ಕಾಯಿನ್ ಖರೀದಿಯಲ್ಲಿ ವಂಚನೆ: ಆರೋಪಿ ಜಾಮೀನು ರದ್ದುಗೊಳಿಸಲು ಒಪ್ಪದ ಹೈಕೋರ್ಟ್
ಬೆಂಗಳೂರು, ಫೆ.28: ಬಿಟ್ ಕಾಯಿನ್ ಖರೀದಿಯಲ್ಲಿ ಬೆಂಗಳೂರು ನಗರದ ವ್ಯಕ್ತಿಗೆ 75 ಲಕ್ಷ ರೂ. ವಂಚಿಸಿದ ಬಿಹಾರದ ಆರೋಪಿ ಶಾಂತನು ಸಿನ್ಹಾಗೆ ಅಧೀನ ನ್ಯಾಯಾಲಯ ನೀಡಿದ್ದ ಜಾಮೀನು ಆದೇಶ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಮೂಲ ದೂರುದಾರರಾದ ನಾಗಸಂದ್ರದ ಟಿ.ವೆಂಕಟೇಶ್ ಮೂರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶವನ್ನು ಮಾಡಿದೆ.
ಬಿಟ್ ಕಾಯಿನ್: ದಿನದಿಂದ ದಿನಕ್ಕೆ ಬಗೆದಷ್ಟು ಬಿಜೆಪಿ ಬುಡಕ್ಕೆ ಕೊಡಲಿ ಏಟು?
ಅಧೀನ ನ್ಯಾಯಾಲಯ ಜಾಮೀನು ಮುಂಜೂರು ಮಾಡುವಾಗ ಪೂರ್ವಾನುಮತಿ ಪಡೆಯದೆ ರಾಜ್ಯಬಿಟ್ಟು ತೆರಳುವಂತಿಲ್ಲ. 60 ದಿನದವರೆಗೆ ಅಥವಾ ಆರೋಪ ಪಟ್ಟಿ ಸಲ್ಲಿಕೆಯಾಗುವವರೆಗೂ 15 ದಿನಕ್ಕೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಇದೇ ಮಾದರಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು ಎಂಬ ಹಲವು ಷರತ್ತುಗಳನ್ನು ವಿಧಿಸಿದೆ, ಹಾಗಾಗಿ ಜಾಮೀನು ಆದೇಶ ರದ್ದುಪಡಿಸುವ ಅಗತ್ಯವೇನಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಜೊತೆಗೆ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಪ್ರಕರಣದ ಇತರೆ ನಾಲ್ವರು ಆರೋಪಿಗಳಿಗೆ ಜಾಮೀನು ದೊರೆತಿದೆ. ಆರೋಪಿ ವಿರುದ್ಧ ಮರಣ ದಂಡನೆ ಮತ್ತು ಜೀವಾವಧಿ ಶಿಕ್ಷೆ ವಿಧಿಸಬಹುದಾದ ಗಂಭೀರ ಆರೋಪಗಳಿಲ್ಲದಿರುವುದರಿಂದ ಆತ ನ್ಯಾಯಾಂಗ ಬಂಧನದಲ್ಲಿರುವ ಅವಶ್ಯಕತೆಯಿಲ್ಲ ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಬಿಟ್ ಕಾಯಿನ್ ಹಗರಣ: ನ.15ರಂದು ಹಣಕಾಸು ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಸಭೆ
ಪ್ರಕರಣದ ಹಿನ್ನೆಲೆ:
ವೆಂಕಟೇಶ್ ಮೂರ್ತಿ ದೂರು ಸಲ್ಲಿಸಿದ್ದ, ಬಿಟ್ ಕಾಯಿನ್ ಖರೀದಿಯಲ್ಲಿ ಲಕ್ಷ ಹಣ ಪಡೆದು ಹಿಂದಿರುಗಿಸದೆ ಶಾಂತನು ಸಿನ್ಹಾ ವಂಚನೆ ಮಾಡಿದ್ದಾರೆ. ಸಿಂಗಾಪುರ, ಮಲೇಷಿಯಾ ದೇಶದಲ್ಲಿ ಮಾಸಿಕ ದೊಡ್ಡ ಮೊತ್ತದ ಹಣದ ಆದಾಯ ಬರುವುದಾಗಿ ಆಮಿಷವೊಡ್ಡಿ ಸಾಕಷ್ಟು ಜನರಿಗೆ ವಂಚಿಸಿದ್ದಾರೆ. ಸುಮಾರು 1500ಕ್ಕೂ ಹೆಚ್ಚು ಜನ ಬಿಟ್ ಕಾಯಿನ್ ವ್ಯಾಪಾರದಲ್ಲಿ ಹಣ ಹೂಡಿಕೆ ಮಾಡಿದ್ದು, ಸುಮಾರು 1500 ಕೋಟಿ ವಂಚನೆಯಾಗಿದೆ. ಆ ಮೂಲಕ ದೇಶದಲ್ಲಿ ಅರ್ಥಿಕ ಅಪರಾಧ ಎಸಗಲಾಗಿದೆ. ಈ ಪ್ರಕರಣದಲ್ಲಿ ಶಾಂತನು ಸಿನ್ಹಾ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದರು.
ಸಿಐಡಿಯ ಸೈಬರ್ ಕೈಂ ಠಾಣಾ ಪೊಲೀಸರು ಬಿಹಾರದ ಪಾಟ್ನಾ ಮೂಲದ ಆರೋಪಿ ಶಾಂತನು ಸಿನ್ಹಾ ಅವರನ್ನು ಬಂಧಿಸಿದ್ದರು. ನೆಲಮಂಗಲದ 1ನೇ ಹೆಚ್ಚವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯವು ಆರೋಪಿಗೆ ಜಾಮೀನು ನೀಡಿ 2021ರ ಮೇ 5ರಂದು ಆದೇಶಿಸಿತ್ತು. ಆ ಆದೇಶ ರದ್ದುಪಡಿಸಬೇಕು ಎಂದು ಕೋರಿ ದೂರುದಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.