ಜೂ.7ರಿಂದ ಗೋಪಿನಾಥ ದಾಸರ ಜನ್ಮಶತಮಾನೋತ್ಸವ
ಬೆಂಗಳೂರು, ಜೂ. 7 : ಎಂಬತ್ಮೂರು ವರ್ಷಗಳ ಭವ್ಯ ಇತಿಹಾಸವಿರುವ ಕನ್ನಡ ನಾಡಿನ ಹೆಮ್ಮೆಯ ನೃತ್ಯ ನಾಟಕ ಪರಿವಾರ 'ಪ್ರಭಾತ್ ಕಲಾವಿದರು' ಸಂಸ್ಥೆಯನ್ನು ಸ್ಥಾಪಿಸಿದ 'ಹರಿಕಥಾ ರತ್ನ' ಟಿ.ವಿ. ಗೋಪಿನಾಥ ದಾಸರು ಅವರ ಜನ್ಮ ಶತಮಾನೋತ್ಸವ 'ಗೋಪಣ್ಣ 100' ಜೂ.7ರಿಂದ ಎಂಟು ದಿನಗಳ ಕಾಲ ಭವ್ಯವಾಗಿ ಬೆಂಗಳೂರಿನಲ್ಲಿ ಆಚರಿಸಲಾಗುತ್ತಿದೆ.
ಎಂಟು ದಿನಗಳ ಕಾಲ, ಪ್ರತಿ ಶನಿವಾರ ಮತ್ತು ಭಾನುವಾರ, ನಾಟಕ, ನೃತ್ಯ ನಾಟಕ, ಗಾಯನ, ನರ್ತನ, ಕಥಾ ಕೀರ್ತನೆ ಮುಂತಾದ ಸಾಂಸ್ಕೃತಿಕ ಸಂಮೃದ್ಧ ಕಾರ್ಯಕ್ರಮಗಳು ಬೆಂಗಳೂರಿನ ಕಲಾ ಪ್ರೇಮಿಗಳನ್ನು ತೋಯಿಸಲಿವೆ. ಈ ಸಂದರ್ಭದಲ್ಲಿ ಕಲೆಗಾಗಿ ಜೀವನವನ್ನು ಮುಡುಪಿಟ್ಟ ಹಲವಾರು ಸಾಧಕರನ್ನು ಸನ್ಮಾನ ಕೂಡ ಮಾಡಲಾಗುತ್ತಿದೆ.
ಶನಿವಾರ ಸಂಜೆ 6.15ಕ್ಕೆ ಸೆಂಟ್ರಲ್ ಕಾಲೇಜು ಕ್ಯಾಂಪಸ್ ನಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ. ಖೋಡೆ ಗ್ರೂಪ್ ಆಫ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಹರಿ ಖೋಡೆ, ಕೇಂದ್ರ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಚಂದ್ರಶೇಖರ ಕಂಬಾರ ಮತ್ತು ಸಚಿವೆ ಉಮಾಶ್ರೀ ಉಪಸ್ಥಿತರಿರಲಿದ್ದಾರೆ. [ಕರ್ನಾಟಕ ಹೆಮ್ಮೆಯ ಪ್ರಭಾತ್ ಕಲಾವಿದರು]
ಉದ್ಘಾಟನೆಯ ನಂತರ ಹರಿಕಥಾ ವಿದ್ವಾಂಸ ಭದ್ರಗಿರಿ ಸರ್ವೋತ್ತಮ ಪೈ, ದಿ. ಮೈಸೂರು ಅನಂತಸ್ವಾಮಿ ಅವರ ಪತ್ನಿ ಶಾಂತಾ ಅನಂತಸ್ವಾಮಿ ಅವರನ್ನು ಸನ್ಮಾನಿಸಲಾಗುತ್ತಿದೆ. ನಂತರ ಹರಿಕಥಾ ರತ್ನಾಕರ ಗೋಪಿನಾಥ ದಾಸರ ಅವರ ಜೀವನ ಚರಿತ್ರೆ ಆಧಾರಿತ ರೂಪಕ 'ಕಲಾತಪಸ್ವಿ' ಮತ್ತು ಪ್ರಭಾತ ಕಲಾವಿದರಿಂದ ನೃತ್ಯ ನಾಟಕ 'ಪುಣ್ಯಕೋಟಿ ಮತ್ತು ಭಗವದ್ಗೀತೆ' ಪ್ರದರ್ಶನಗೊಳ್ಳಲಿವೆ.
ಜೂನ್ 8ರಿಂದ ನಗರದ ಹಲವಾರು ಸಭಾಂಗಣಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ರಸದೌತಣ ಬಡಿಸಲಿವೆ. ಜೆಪಿ ನಗರದ ಆರ್ ವಿ ಡೆಂಟಲ್ ಕಾಲೇಜು ಸಭಾಂಗಣ, ಕುಮಾರಸ್ವಾಮಿ ಲೇಔಟ್ ನಲ್ಲಿರುವ ಪ್ರೇಮಚಂದ್ರ ಸಾಗರ ಸಭಾಂಗಣ, ವಿವಿ ಪುರಂನಲ್ಲಿನ ಕುವೆಂಪು ಕಲಾಕ್ಷೇತ್ರ, ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರಗಳಲ್ಲಿ ಕಲಾವೈಭವ ಮೇಳೈಸಲಿದೆ. [ಹೆಚ್ಚಿನ ವಿವರಗಳಿಗಾಗಿ]
ಜೂನ್ 29ರ ಭಾನುವಾರದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮೂರು ಗಂಟೆಗೆ ಬೆನಕ ತಂಡದಿಂದ 'ಹಯವದನ' ನಾಟಕ ಪ್ರದರ್ಶಿತವಾಗಲಿದೆ. ಸಮಾರೋಪ ಸಮಾರಂಭದಲ್ಲಿ ರಾಜ್ಯ ಸರಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ ಜಯರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಶ್ರೀನಿವಾಸಾಚಾರಿ ಅವರು ಭಾಗವಹಿಸುತ್ತಿದ್ದಾರೆ.