ನಗರದಲ್ಲಿ ವಿದ್ಯಾಮಾನ್ಯತೀರ್ಥರ ಜನ್ಮ ಶತಮಾನೋತ್ಸವ
ಬೆಂಗಳೂರು, ಫೆ 26: ಶ್ರೀಮಾಧ್ವರಾದ್ದಾಂತ ಸಂವರ್ಧಿನೀ ಸಭಾ, ಶ್ರೀಭಂಡಾರಕೇರಿ ಮಠ, ಉಡುಪಿ, ನಗರದಲ್ಲಿ ಪ್ರಾತಃಸ್ಮರಣೀಯರಾದ ಶ್ರೀವಿದ್ಯಾಮಾನ್ಯತೀರ್ಥರ ಜನ್ಮ ಶತಮಾನೋತ್ಸವ ಮತ್ತು ಶ್ರೀಭಂಡಾರಕೇರಿ ಮಠಾಧೀಶರ ಷಷ್ಟ್ಯಬ್ದ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಶ್ರೀಭಾಗವತಾಶ್ರಮ ಪ್ರತಿಷ್ಠಾನ, ಶ್ರೀಭಂಡಾರಕೇರಿ ಮಠ, ಗಿರಿನಗರ, ಬೆಂಗಳೂರಿನಲ್ಲಿ ಇದೇ ಗುರುವಾರ (ಫೆ 27) ಮತ್ತು ಶುಕ್ರವಾರ (ಫೆ 28) ದಂದು ಸಂಜೆ ಐದು ಗಂಟೆಯಿಂದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಗುರುವಾರ ಶ್ರೀಭಂಡಾರಕೇರಿ ವಿದ್ಯೇಶತೀರ್ಥರ ಷಷ್ಟ್ಯಬ್ದ ಮಹೋತ್ಸವದ ವಿಶೇಷ ಕಾರ್ಯಕ್ರಮ, ಅನುಗ್ರಹ ಸಂದೇಶ ಮತ್ತು ಶ್ರೀ ಮೈಸೂರು ರಾಮಚಂದ್ರಾಚಾರ್ ಅವರಿಂದ ಭಕ್ತಿಗಾನ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಮತ್ತು ಬಿಬಿಎಂಪಿ ಸದಸ್ಯೆ ಲಲಿತ ವಿಜಯ್ ಕುಮಾರ್ ಭಾಗವಹಿಸಲಿದ್ದಾರೆ.
ಶುಕ್ರವಾರದಂದು ಸಂಜೆ ಆರು ಗಂಟೆಯಿಂದ ನೂರು ಮಂದಿ ವಿದ್ವಾಂಸರ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀಸತ್ಯಾತ್ಮ ತೀರ್ಥ ಶ್ರೀಪಾದರು ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಆರ್ ಗುರುರಾಜನ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.