ಜೀವ ವೈವಿಧ್ಯ ವನ ಭಾಗ 3: ಅಂದು ನೀವು ನೆಟ್ಟಿದ್ದು ಬರೀ ಗಿಡವಲ್ಲ, ಕಾಡು
ಎರಡು ದಶಕದ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಜೀವವೈವಿಧ್ಯ ವನ ನಿರ್ಮಿಸುವ ಕೆಲಸದಲ್ಲಿ ತೊಡಗಿದ್ದ ನನ್ನೆಲ್ಲಾ ವಿದ್ಯಾರ್ಥಿ ಸ್ವಯಂಸೇವಕರೇ, ನೀವು ಎಷ್ಟು ದೊಡ್ಡ ಜೀವಸಂಪತ್ತಿನ ಸೃಷ್ಠಿಗೆ ಕಾರಣರಾಗಿದ್ದೀರಿ ಗೊತ್ತೇ..?
ನೀವು ಅಂದು ಸುಮಾರು 350 ಜಾತಿಯ ಮೂರು ಲಕ್ಷಕ್ಕೂ ಹೆಚ್ಚಿನ ಸಸಿಗಳನ್ನು ನೆಟ್ಟು, ಬಿಸಿಲಿಗೆ ಬಳಲು ಬಿಡದೆ ಬಿಂದಿಗೆಗಳಲ್ಲಿ ನೀರೊತ್ತು ಕಾಪಾಡಿದಿರಿ. ಆ ಕ್ಷಣಕ್ಕೆ ನಿಮಗೆ ಅದೊಂದು ಕ್ಯಾಂಪ್ ಚಟುವಟಿಕೆ ಅಥವಾ ಶ್ರಮಧಾನವಾಗಿತ್ತು. ಆದರೀಗ ಅದೊಂದು ಹಲವು ಜಾತಿಯ ಮರಗಳ ಕಾಡಾಗಿದೆ. ನಮ್ಮ ಕನಸಿನ ಹೆಮ್ಮೆಯ ಜೀವವೈವಿಧ್ಯ ವನವಾಗಿದೆ. ಅದನ್ನು ಕಾಪಾಡಲು-ಅಭಿವೃದ್ಧಿಪಡಿಸಲು ಜಿಯಾಲಜಿ ವಿಭಾಗದ ಅಧ್ಯಾಪಕರಾದ ಪ್ರೊ.ರೇಣಕಾ ಪ್ರಸಾದ್ ಅವಿರತ ಶ್ರಮವಹಿಸಿದ್ದಾರೆ.
ಜೀವವೈವಿಧ್ಯ ವನ ಭಾಗ 2; ನಮ್ಮ ಗಿಡ-ನಮ್ಮ ವನ- ಕಡಿಯಲು ಬಿಡೆವು
ನಾವು ಸಸಿಗಳನ್ನು ನೆಟ್ಟು ಬಂದ ನಂತರ ನೀರಿಲ್ಲದೆ, ಬಿಸಿಲಿಗೆ-ಬೆಂಕಿಗೆ ಆಹುತಿಯಾಗಿ ಸತ್ತು ಹೋಗಿದ್ದ ಸಸಿಗಳ ಜಾಗಕ್ಕೆ ಹೊಸ ಸಸಿಗಳನ್ನು ನೆಡುವ ಕೆಲಸ ಪ್ರೊ.ಣುಕಾ ಪ್ರಸಾದ್ ಮಾಡಿದ್ದಾರೆ.
ಇಂದು 600 ಎಕರೆಗೆ ವಿಸ್ತರಿಸಿದ್ದಾರೆ
ನಾವಾಗ 100 ಎಕರೆಯಲ್ಲಿ ನಿರ್ಮಿಸಿದ ವನವನ್ನು ಇಂದು 600 ಎಕರೆಗೆ ವಿಸ್ತರಿಸಿದ್ದಾರೆ. 575 ಕ್ಕೂ ಹೆಚ್ಚು ಜಾತಿಯ ಸುಮಾರು ಏಳೆಂಟು ಲಕ್ಷ ಗಿಡ-ಮರಗಳನ್ನು ಬೆಳೆಸುವಲ್ಲಿ ಜನರನ್ನು ತೊಡಗಿಸಿದ ಶ್ರೇಯ ಅವರಿಗೆ ಸಲ್ಲಬೇಕು. ಈ ವನದ ಬಗೆಗೆ ಅವರಿಗಿರುವ ಕಾಳಜಿ ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ರೇಣುಕ ಪ್ರಸಾದ್ ಮಾತು ಇಲ್ಲಿದೆ.
149 ಜಾತಿಯ ಹಕ್ಕಿ ಪಕ್ಷಿಗಳಿವೆ
""ನೋಡಿ ಇಲ್ಲಿ ಈಗ 148 ವಿವಿಧ ಜಾತಿಯ ಚಿಟ್ಟೆಗಳ ಸಂತತಿ ಇದೆ. ವಲಸೆ ಬರುವ ಹಕ್ಕಿಗಳೂ ಸೇರಿದಂತೆ ಸುಮಾರು 149 ಜಾತಿಯ ಹಕ್ಕಿ ಪಕ್ಷಿಗಳಿವೆ. ವಾರ್ಷಿಕ ಸುಮಾರು 15 ಕೋಟಿ ಲೀಟರ್ ನೀರು ಭೂಮಿಗೆ ಇಂಗಿಸುವ ಮಹತ್ವದ ಕೆಲಸ ನಡೆದಿದೆ'' ಎಂದು ಹೇಳುವ ಪ್ರಸಾದ್, ನೀವು ಅಂದು ಶುರು ಮಾಡಿದ ಕೆಲಸದ ಫಲವನ್ನು ನಾವೀಗ ಕಾಣ್ತೀದ್ದೇವೆ ಎಂದು ಹೇಳುವುದನ್ನು ಮರೆಯಲಿಲ್ಲ.
ಜ್ಞಾನಭಾರತಿ ಕಾಡು ಒಂದು ಹೆಕ್ಟೇರ್ ಪ್ರದೇಶದಲ್ಲಿ (ಎರಡೂವರೆ ಎಕರೆ) ಒಂದು ಅಡಿ ಗರ್ತ್ (ಸುತ್ತಳತೆ) ಇರುವ ಸುಮಾರು 30 ಮರಗಳಿದ್ದಲ್ಲಿ it must be treated as DEEMED FOREST ಎಂಬ ನಿಯಮವಿದೆ. ಸರ್ಕಾರ ಅದನ್ನು ಕಾಡು ಎಂದು ನೋಟಿಫೈ ಮಾಡದೆ ಇದ್ದರೂ ಅದು ಕಾಡು ಎಂಬ ಸ್ಥಾನವನ್ನು ಪಡೆದುಕೊಳ್ಳುತ್ತದೆ.
60-70 ವಿವಿಧ ಜಾತಿಯ ಔಷಧೀಯ ಮರಗಳಿವೆ
ಅದೇ ನಿಯಮದಂತೆ ಇದೀಗ ಜ್ಞಾನಭಾರತಿಯಲ್ಲಿರುವುದು 600 ಎಕರೆ ಕಾಡು. ಆ ಕಾಡಿನ ಪ್ರದೇಶವನ್ನು ಹಾಗೆಯೇ ಉಳಿಸಿಕೊಳ್ಳಬೇಕಾದದ್ದು ವಿವೇಕ ಉಳ್ಳ ಎಲ್ಲಾ ಸಂಘ ಸಂಸ್ಥೆಗಳು, ವಿಶ್ವವಿದ್ಯಾಲಯ ಮತ್ತು ಸರ್ಕಾರಗಳ ಆದ್ಯ ಕರ್ತವ್ಯ. ಆದರೂ ಅಂಥದೊಂದು ಮಾನವ ನಿರ್ಮಿತ ಕಾಡಿನ ಮಧ್ಯೆ ಸೆಂಟ್ರಲ್ ಯೂನಿವರ್ಸಿಟಿ, ಯೋಗ ಯೂನಿವರ್ಸಿಟಿ ಹಾಗೂ ಸಿ.ಬಿ.ಎಸ್.ಸಿ ಕಟ್ಟಡಗಳಿಗೆ ಜಾಗ ನೀಡಲು ವಿಶ್ವವಿದ್ಯಾಲಯ ಹಾಗೂ ಸರ್ಕಾರ ಮುಂದಾಗಿರುವುದು ಅಕ್ಷಮ್ಯ. ಈ ಸಂಸ್ಥೆಗಳಿಗೆ ಗುರುತು ಮಾಡಿರುವ ಜಾಗದಲ್ಲಿ ಸುಮಾರು 60-70 ವಿವಿಧ ಜಾತಿಯ ಕಾಡು ಮರಗಳು, ಔಷಧೀಯ ಮರಗಳಿವೆ. ಹಾಗಾಗಿ ಇವುಗಳನ್ನು ಉಳಿಸಿಕೊಳ್ಳಬೇಕು. ಇಲ್ಲಿ ಕಟ್ಟಡಗಳನ್ನು ನಿರ್ಮಿಸಬಾರದು. ಆ ಸಂಸ್ಥೆಗಳಿಗೆ ಬೇರೆಲ್ಲಾದರೂ ಜಾಗ ಕೊಟ್ಟು ಉಪಕರಿಸಲಿ. ಅದಕ್ಕೆ ಯಾರ ತಕರಾರೂ ಇಲ್ಲವಲ್ಲ.
BIOPARK-OPEN LAB ನಿರ್ಮಾಣ
ಜ್ಞಾನಭಾರತಿ ಆವರಣದ ಜೀವವೈವಿಧ್ಯ ವನ ಇದೀಗ ಹಲವು ವಿಭಾಗಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಬಯಲು ಪ್ರಯೋಗಾಲಯವಾಗಿದೆ. ಆಗಿನ ಉಪಕುಲಪತಿಗಳಾದ ಡಾ.ಕೆ.ಸಿದ್ದಪ್ಪ ಬಯೋಪಾರ್ಕ್ ಕುರಿತು ಮಾತನಾಡುವಾಗ ಮುಂದೊಂದು ದಿನ ಇದು open lab ಆಗುತ್ತದೆ ಎಂದು ಸ್ವಯಂಸೇವಕರಿಗೆ ಹೇಳುತ್ತಿದ್ದದ್ದು ನೆನಪಿಗೆ ಬರುತ್ತಿದೆ. ಈಗಾಗಲೇ ಹತ್ತಾರು ಸಂಶೋಧನಾ ಕಾರ್ಯಗಳು ಇಲ್ಲಿ ನಡೆದಿವೆ, ನಡೆಯುತ್ತಿವೆ. ಪಕ್ಷಿಗಳ ಮೇಲೆ, ಚಿಟ್ಟೆಗಳ ಮೇಲೆ, ಮರಗಳ ಮೇಲೆ, ವಾತಾವರಣ, ಭೂಗರ್ಭಶಾಸ್ತ್ರ ಹೀಗೆ botony, zoology, geology, social sciences ಬಗೆಗೆ ಸಂಶೋಧನೆ ನಡೆಯುತ್ತಿರುವ ಬಹುದೊಡ್ಡ ಬಯಲು ಪ್ರಯೋಗಾಲಯ ಇದಾಗಿದೆ. ಇಂತಹ ಜಾಗವನ್ನು ಕಟ್ಟಡಗಳನ್ನು ಕಟ್ಟಲು ಧ್ವಂಸ ಮಾಡುವುದು ಯಾವ ವಿವಿಗೂ, ಸರ್ಕಾರಕ್ಕೂ ಶೋಭೆ ತರುವ ಕೆಲಸವಲ್ಲ.
Recommended Video
ಹೀಗೊಂದು ಪ್ರಶ್ನೆ
ಸರ್ಕಾರಕ್ಕೆ ಇಲ್ಲಿನ ಪ್ರಕೃತಿ ಸಂಪತ್ತಿನ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆಯೇ? ಈಗ ಇಲ್ಲಿ ಸೃಷ್ಟಿಯಾಗಿರುವ ಸಂಪತ್ತಿನ ಮೌಲ್ಯದ ಬಗ್ಗೆ ತಿಳಿಸಲಾಗಿದೆಯೇ? ಪ್ರಾಯಶಃ BIO-GEO-HYDRO experts ಸರ್ಕಾರಕ್ಕೆ ಇಲ್ಲಿನ ಸಂಪತ್ತಿನ ಬಗ್ಗೆ ಅರಿವು ಮೂಡಿಸಿದಲ್ಲಿ ಕಟ್ಟಡಗಳನ್ನು ತರುವ ಅವಿವೇಕದ ಕೆಲಸ ಯಾರೂ ಮಾಡಲಾರರು ಎಂಬುದು ನನ್ನ ನಂಬಿಕೆ. ಅದೇನೇ ಇರಲಿ ಈಗ ನಮ್ಮೆ ಕಣ್ಣೆದುರೇ ಒಂದು ಕಾಡು ನಿರ್ಮಾಣವಾಗಿದೆ. ಇದನ್ನು ಕಡಿಯುವ ಕೆಲಸ ಕೂಡಲೇ ನಿಲ್ಲಬೇಕು. ಆ ಬಗ್ಗೆ ಹೋರಾಟ ಮುಂದುವರೆಸೋಣ...