ಮತಹಾಕಲು ಅನುಮತಿ ನೀಡದ ಮ್ಯಾನೇಜರ್ ವಿರುದ್ಧ ದೂರು ದಾಖಲಿಸಿದ ಯುವತಿ
ಬೆಂಗಳೂರು, ಡಿಸೆಂಬರ್ 05: ಉಪಚುನಾವಣೆಯಲ್ಲಿ ಮತ ಹಾಕಲು ಹೋಗಲು ಅನುಮತಿ ನಿರಾಕರಿಸಿದ ಸಂಸ್ಥೆಯ ರಿಪೋರ್ಟಿಂಗ್ ಮ್ಯಾನೇಜರ್ ವಿರುದ್ಧವೇ ಯುವತಿಯೊಬ್ಬರು ಪೊಲೀಸ್ ದೂರು ನೀಡಿರುವ ಘಟನೆ ನಗರದಲ್ಲಿ ನಡೆದಿದೆ.
ಪ್ರತೀಷ್ಠಿತ ಬಯೋಕಾನ್ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿರುವ ಕಾವ್ಯ ಎಂಬ ಯುವತಿ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದು, ಮತದಾನ ಮಾಡಲು ಅನುಮತಿ ಕೋರಿದ್ದಾರೆ. ಆದರೆ ಆಕೆಯ ರಿಪೋರ್ಟಿಂಗ್ ಮ್ಯಾನೇಜರ್ ಮತದಾನ ಮಾಡಲು ಹೋಗಲು ಅನುಮತಿ ನೀಡಿಲ್ಲ.
ಇದರಿಂದ ಸಿಟ್ಟಿಗೆದ್ದ ಕಾವ್ಯಾ, ವಿಭೂತಿಪುರ ಠಾಣೆಗೆ ತೆರಳಿ ತನ್ನನ್ನು ಮತದಾನ ಮಾಡದಂತೆ ತಡೆಯಲು ಯತ್ನಿಸಿದ ರಿಪೋರ್ಟಿಂಗ್ ಮ್ಯಾನೇಜರ್ ಭರತ್ ಕುಮಾರ್ ತಗಂಡು ಅವರ ವಿರುದ್ಧ ದೂರು ದಾಖಲಿಸಿ ನಂತರ ಬಂದು ಮತದಾನ ಮಾಡಿದ್ದಾರೆ.
ಬಯೋಕಾನ್ ಸಂಸ್ಥೆಯಲ್ಲಿ ಮತದಾನ ಮಾಡಲು ಸಂಬಳ ಸಹಿತ ರಜೆ ನೀಡಲು ಅನುಮತಿ ಇದೆ. ಆದರೆ ರಿಪೋರ್ಟಿಂಗ್ ಮ್ಯಾನೇಜರ್ ಭರತ್ ಕುಮಾರ್ ತಗಂಡು, ಕಾವ್ಯಾರ ಕೆಲಸದ ಅವಧಿ ಮುಗಿದಮೇಲೂ ಇತರೆ ಕೆಲಸಗಳನ್ನು ಹೇಳಿ ಕಾವ್ಯಾರಿಗೆ ಮತದಾನಕ್ಕೆ ಹೋಗಲು ಅನುಮತಿ ನೀಡದೆ ಸತಾಯಿಸಿದ್ದಾರೆ. ಕಾವ್ಯಾ ಅವರ ಇಂದಿನ ಕೆಲಸದ ಅವಧಿಯು ಬೆಳಿಗ್ಗೆ 8 ರಿಂದ ಸಂಜೆ ಐದು ಗಂಟೆ ವರೆಗೆ ಇತ್ತು.
ಘಟನೆಯ ಬಗ್ಗೆ ಸಂಸ್ಥೆಯ ಮುಖ್ಯಸ್ಥರ ಗಮನಕ್ಕೂ ತಂದ ನಂತರ ಮುಖ್ಯಸ್ಥರು ಕಾವ್ಯಾ ಅವರಿಗೆ ಮತದಾನ ಮಾಡಲು ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಮಯ ಮುಗಿಯುವ ಮುನ್ನವೇ ಕಾವ್ಯಾ ಅವರು ಮತದಾನ ಮಾಡಿದ್ದಾರೆ.