19 ಸಾವಿರ ದಂಡ ಕಟ್ಟಿದ ಬೆಂಗಳೂರು ಬೈಕ್ ಸವಾರ!
ಬೆಂಗಳೂರು, ಮಾರ್ಚ್ 15 : ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ ಬೆಂಗಳೂರಿನ ಬೈಕ್ ಸವಾರನೊಬ್ಬ 19 ಸಾವಿರ ರೂ. ದಂಡವನ್ನು ಪಾವತಿಸಿದ್ದಾನೆ. ಹಲಸೂರು ಸಂಚಾರಿ ಪೊಲೀಸ್ ಠಾಣೆಯವರು ವಿಶೇಷ ಕಾರ್ಯಾಚರಣೆ ಕೈಗೊಂಡಾಗ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ.
ಹಲಸೂರಿನ ವಿಶ್ವನಾಥ್ 19 ಸಾವಿರ ರೂ. ದಂಡವನ್ನು ಕಟ್ಟಿ ಬೈಕ್ ತೆಗೆದುಕೊಂಡು ಹೋಗಿದ್ದಾರೆ. ವಿಶ್ವನಾಥ್ ತಡೆದ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಪ್ರಕರಗಳನ್ನು ನೋಡಿ ದಂಗಾಗಿ ಹೋಗಿದ್ದಾರೆ.
ಮೂರು ವರ್ಷಗಳ ಹಿಂದೆ ವಿಶ್ವನಾಥ್ ಹೊಂಡಾ ಆಕ್ಟಿವಾ ಬೈಕ್ ಖರೀದಿ ಮಾಡಿದ್ದರು. ನೀರು ಪೂರೈಕೆ ವ್ಯಾಪಾರ ಮಾಡುವ ಅವರು ಹಲವು ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು 85 ಪ್ರಕರಣಗಳು ದಾಖಲಾಗಿದ್ದವು.
ಹೆಲ್ಮೆಟ್ ಇಲ್ಲದೇ ಪ್ರಯಾಣ, ಸಿಗ್ನಲ್ ಜಂಪ್ ಸೇರಿದಂತೆ ಮೂರು ವರ್ಷದಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಪೊಲೀಸರು ಇದುವರೆಗೂ ಅವರನ್ನು ಹಿಡಿದಿರಲಿಲ್ಲ. ಸಂಚಾರ ನಿಯಮ ಉಲ್ಲಂಘಟನೆ ಪ್ರಕರಣಗಳನ್ನು ನೋಡಿದ ಪೊಲೀಸರು ಲೆಕ್ಕಾಹಾಕಿ 19 ಸಾವಿರ ದಂಡ ಹಾಕಿದ್ದಾರೆ.
ಬೇರೆ ದಾರಿ ಕಾಣದೆ ವಿಶ್ವನಾಥ್ 19 ಸಾವಿರ ದಂಡವನ್ನು ಕಟ್ಟಿ ಬೈಕ್ ಬಿಡಿಸಿಕೊಂಡು ಹೋಗಿದ್ದಾರೆ. ಹಳೆಯ ಪ್ರಕರಣಗಳಿಗೆ ಹಳೆಯ ನಿಯಮದಂತೆ ದಂಡ ಹಾಕಲಾಗಿದೆ. ಹೊಸ ನಿಯಮಗಳ ಪ್ರಕಾರ ದಂಡ ವಿಧಿಸಿದ್ದರೆ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
2019ರಲ್ಲಿ ಸಂಚಾರಿ ನಿಯಮಗಳಿಗೆ ಹೆಚ್ಚಿನ ಮೊತ್ತದ ದಂಡ ವಿಧಿಸುವ ಹೊಸ ನಿಯಮ ಜಾರಿಗೆ ಬಂದಿದೆ. ಈ ನಿಯಮ ಜಾರಿಗೆ ಬಂದ ಬಳಿಕ ದೆಹಲಿಯಲ್ಲಿ ಲಾರಿ ಚಾಲಕನೊಬ್ಬ 2 ಲಕ್ಷ ರೂ. ದಂಡ ಕಟ್ಟಿದ್ದನ್ನು ನೆನಪಿಸಿಕೊಳ್ಳಬಹುದು.