ಜಿಂಕೆಗೆ ಡಿಕ್ಕಿ ಹೊಡೆದು ಮೃತಪಟ್ಟ ಬೈಕ್ ಸವಾರ!
ಬೆಂಗಳೂರು, ಜನವರಿ 15 : ಬೈಕ್ಗೆ ಜಿಂಕೆಯೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಹಾಗೂ ಜಿಂಕೆ ಸಾವನ್ನಪ್ಪಿರುವ ಅಚ್ಚರಿದಾಯಕ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ನಡೆದಿದೆ.
ಬೈಕ್ ಸವಾರ ಹರೀಶ್ ಸ್ಥಳದಲ್ಲಿಯೇ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅಪ್ಪಗೊಂಡನಹಳ್ಳಿ ಬಳಿ ಹರೀಶ್ ನಸುಕಿನ 5.30 ರಲ್ಲಿ ನೆಲಮಂಗಲ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮಂಜಿನ ಕಾರಣದಿಂದ ರಸ್ತೆ ದಾಟುತ್ತಿದ್ದ ಜಿಂಕೆಯನ್ನು ಗುರುತಿಸದೇ ಬೈಕ್ ಸವಾರ ಹಾಗೂ ಜಿಂಕೆ ನಡುವೆ ಈ ಅಪಘಾತವಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಜಿಂಕೆ ಕೆಲ ಹೊತ್ತಿನ ನಂತರ ಮೃತಪಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ.
ತಲೆಯ ಭಾಗಕ್ಕೆ ತೀವ್ರಕರವಾದ ಪೆಟ್ಟು ಬಿದ್ದಿದ್ದರಿಂದ ಹರೀಶ್ ಸಾವನ್ನಪ್ಪಿದ್ದಾನೆ. ನೆಲಮಂಗಲದ ಶವಾಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ನೆಲಮಂಗಲ ಬಳಿ ಜಿಂಕೆಗಳು ಕಾಣುವುದು ಅಪರೂಪವಾದರೂ ಈ ಘಟನೆ ಸ್ಥಳೀಕರಲ್ಲಿ ಅಚ್ಚರಿ ಮೂಡಿಸಿತ್ತು. ಈ ಕುರಿತು ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.