ಜಯಶ್ರೀ ರಾಮಯ್ಯ ಡೆತ್ ನೋಟ್, ಎರಡು ಡೈರಿಯಲ್ಲಿ ಏನಿದೆ?
ಬೆಂಗಳೂರು, ಜನವರಿ 25: ಬಿಗ್ ಬಾಸ್ ಕನ್ನಡ 3ನೇ ಆವೃತ್ತಿಯ ಸ್ಪರ್ಧಿಯಾಗಿ ಜನಪ್ರಿಯತೆ ಗಳಿಸಿದ್ದ ರೂಪದರ್ಶಿ, ನೃತ್ಯಗಾರ್ತಿ ಜಯಶ್ರೀ ರಾಮಯ್ಯ ಅವರ ನಿಧನಕ್ಕೆ ಆಪ್ತರು, ಸ್ನೇಹಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆ ಕಾರಣ ಇನ್ನೂ ನಿಗೂಢವಾಗಿದ್ದು, ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ, ಡೆತ್ ನೋಟ್ ವಿವರಗಳನ್ನು ಪೊಲೀಸರು ಇನ್ನೂ ಸಂಪೂರ್ಣವಾಗಿ ಹಂಚಿಕೊಂಡಿಲ್ಲ. ಹಾಗಾಗಿ, ಆತ್ಮಹತ್ಯೆಯ ನಿಖರ ಕಾರಣಕ್ಕಾಗಿ ಇನ್ನೂ ಕಾಣಬೇಕಾಗುತ್ತದೆ.
Recommended Video
ಮಾಗಡಿ ರಸ್ತೆಯಲ್ಲಿರುವ ಸಂಧ್ಯಾಕಿರಣ ಪುನವರ್ಸತಿ ಕೇಂದ್ರದಲ್ಲಿ ಕಳೆದ ಒಂದು ತಿಂಗಳಿನಿಂದ ಜಯಶ್ರೀ ನೆಲೆಸಿದ್ದರು. ನಿನ್ನೆ ಸಂಜೆ ಚಹಾ ಸೇವಿಸಿದ್ದು ಬಿಟ್ಟರೆ, ರಾತ್ರಿ ಊಟ ಕೂಡಾ ಮಾಡಿರಲಿಲ್ಲ, ಬೆಳಗ್ಗೆ ತಿಂಡಿ ತಿನ್ನಲು ಬಂದಿರಲಿಲ್ಲ. ಪ್ರತ್ಯೇಕ ಕೊಠಡಿಯಲ್ಲಿದ್ದ ಜಯಶ್ರೀ ಅವರನ್ನು ಕರೆ ತರಲು ಬಂದ ಸಿಬ್ಬಂದಿಗೆ ನೇಣುಬಿಗಿದ ಸ್ಥಿತಿಯಲ್ಲಿ ಜಯಶ್ರೀ ಕಾಣಿಸಿಕೊಂಡಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ರೂಪದರ್ಶಿ ಜಯಶ್ರೀ ರಾಮಯ್ಯ ಆತ್ಮಹತ್ಯೆ
ಘಟನಾ ಸ್ಥಳಕ್ಕೆ ಜಯಶ್ರೀ ಚಿಕ್ಕಮ್ಮ ಹಾಗೂ ಸಹೋದರ ಅಜಯ್ ಆಗಮಿಸಿ ಕಂಬನಿ ಮಿಡಿದಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ಕುಟುಂಬಸ್ಥರು ಹಾಗೂ ಆಪ್ತರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ
ಮೃತದೇಹವನ್ನು ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗುತ್ತಿದ್ದು, ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ. ಸದ್ಯಕ್ಕೆ ಜಯಶ್ರೀ ಶವ ಪತ್ತೆಯಾದ ರೂಮಿನಲ್ಲಿ ಒಂದು ಡೆತ್ ನೋಟ್, ಎರಡು ಡೈರಿ ಪುಸ್ತಕ, ಒಂದು ಫೋನ್ ಸಿಕ್ಕಿದೆ ಎಂದು ಪೊಲೀಸರು ಹೇಳಿದರು.
ಡೆತ್ ನೋಟ್ ವಿವರ ಏನಿದೆ?:
ಜಯಶ್ರೀ ರಾಮಯ್ಯ ಅವರು ಡೆತ್ನೋಟ್ನಲ್ಲಿ ಮುಖ್ಯವಾಗಿ ಸಾಲ ತೀರಿಸುವ ಬಗ್ಗೆ ಬರೆದುಕೊಂಡಿದ್ದಾರೆ. ಯಾರು ಯಾರಿಗೆ ಎಷ್ಟು ಮೊತ್ತ ನೀಡಬೇಕು ಎಂದು ಹೆಸರು ಹಾಗೂ ಹಣದ ವಿವರ ಬರೆದಿದ್ದಾರೆ. ಸಾಲ ಪಡೆದಿದ್ದವರಿಗೆ ಹಣ ಮರಳಿಸುವಂತೆ ಸೋದರನಿಗೆ ಕೋರಿದ್ದಾರೆ.
ಸೋದರ ಅಜಯ್ ಅವರಿಗೆ ಮನವಿ
ಈ ಬಗ್ಗೆ ಆಕೆಯ ಡೈರಿಯೊಂದರಲ್ಲೂ ಉಲ್ಲೇಖವಿದೆ. ಜೊತೆಗೆ ರೂಮ್ ಬಾಡಿಗೆ, ರೂಮ್ ಮೇಟ್ ಬಳಿ ಪಡೆದಿದ್ದ ಸಾಲ, ವೈದ್ಯರಿಗೆ ಶುಲ್ಕ ಎಲ್ಲವನ್ನು ಪಾವತಿಸುವಂತೆ ಸೋದರ ಅಜಯ್ ಅವರಿಗೆ ಜಯಶ್ರೀ ಮನವಿ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಕಾರಣ ಇನ್ನೂ ನಿಗೂಢ
ಜಯಶ್ರೀ ರೂಮಿನಲ್ಲಿ ಸಿಕ್ಕಿರುವ ದಾಖಲೆಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ಪರಿಶೀಲನೆ ಅಗತ್ಯವಿದೆ. ಸದ್ಯಕ್ಕೆ ಐಫೋನ್ನಲ್ಲಿರುವ ಮಾಹಿತಿ ಇನ್ನೂ ತಿಳಿದಿಲ್ಲ, ಡೈರಿಯಲ್ಲಿ ಹಲವು ವಿಚಾರಗಳನ್ನು ಬರೆದುಕೊಂಡಿದ್ದಾರೆ. ಈ ಬಗ್ಗೆ ಕೂಡಾ ಪರಿಶೀಲಿಸಲಾಗುವುದು ಎಂದಿದ್ದಾರೆ.