'ಸ್ವರಾಟ್' ನಾಟ್ಯ ನಿನಾದ ಸಂಸ್ಥೆಯ ವಾರ್ಷಿಕೋತ್ಸವ
ಬೆಂಗಳೂರು. ಮೇ. 1: ಭರತನಾಟ್ಯದ ಹೊಸ ಪ್ರತಿಭೆಗಳಾದ ಕುಮಾರಿ ಶ್ವೇತ.ಕೆ.ಪುರೋಹಿತ್ ಮತ್ತು ಸಿಂಧು.ಕೆ.ಪುರೋಹಿತ್ ಸಹೋದರಿಯರ 'ಸ್ವರಾಟ್' ನಾಟ್ಯ ನಿನಾದ ಸಂಸ್ಥೆಯ 'ಝೇಂಕಾರ' ದ ಪ್ರಥಮ ವಾರ್ಷಿಕೋತ್ಸವ ಮೇ 3 ರಂದು ನಡೆಯಲಿದೆ.
ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಸಂಜೆ 6.00 ಗಂಟೆಗೆ ಶಾಲಾ ಮಕ್ಕಳೊಂದಿಗೆ ಕಾರ್ಯಕ್ರಮ ನಡೆಯಲಿದೆ. ಬಾಲ್ಯದಲ್ಲೇ ಗುರು ಶ್ರೀಮತಿ ಮೀರಾರವರಿಂದ ಭರತನಾಟ್ಯ ಕಲಿಕೆಯನ್ನು ಆರಂಭಿಸಿ ಗುರು ಶ್ರೀಮತಿ ರಾಧಾ ಶ್ರೀಧರ್ ರವರಲ್ಲಿ ಹೆಚ್ಚಿನ ಪರಿಣತಿ ಮತ್ತು ಮಾರ್ಗದರ್ಶನವನ್ನು ಪಡೆಯುತ್ತಿರುವ ಇವರು 2011 ರಲ್ಲಿ ರಂಗ ಪ್ರವೇಶ ಮಾಡಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.[ವಚನಾಂಜಲಿಯಲ್ಲಿ ವೈಜಯಂತಿ ಕಾಶಿ ನೃತ್ಯಾಭಿನಯ]
ಕರ್ನಾಟಕ ಸರ್ಕಾರದ ಪ್ರತಿಭಾ ಪುರಸ್ಕಾರವನ್ನು ಶ್ವೇತಾ 2011 ರಲ್ಲಿ ಪಡೆದಿದ್ದಾರೆ. 2012 ರಲ್ಲಿ ಶ್ವೇತ ಮತ್ತು ಸಿಂಧು ಅರುಣೋದಯ ಕಲ್ಪವೃಕ್ಷ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲದೇ 2013ರ ಆರ್ಯಭಟ ಪ್ರಶಸ್ತಿಯೂ ದೊರೆತಿದೆ. ಸಹೋದರಿಯರು ದೂರದರ್ಶನದ 'ಬಿ ಗ್ರೇಡ್' ಕಲಾವಿದರಾಗಿ ಆಯ್ಕೆಯಾಗಿದ್ದಾರೆ.
'ಸ್ವರಾಟ್' ನಾಟ್ಯ ನಿನಾದ ಸಂಸ್ಥೆಯನ್ನು ಪ್ರಾರಂಭಿಸಿ ಆಸಕ್ತ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ 9482456312 ಸಂಪರ್ಕಿಸಿಬಹುದು.