ಗೌರಿ ಅರುಣ್ ಮೂರ್ತಿ ಭರತನಾಟ್ಯ ರಂಗಪ್ರವೇಶ
ಬೆಂಗಳೂರು, ನವೆಂಬರ್ 22 : ಬಹುಮುಖ ಪ್ರತಿಭೆಯ ಯುವ ನೃತ್ಯಗಾರ್ತಿ ಕುಮಾರಿ ಗೌರಿ ಅರುಣ್ ಮೂರ್ತಿಯ ಭರತನಾಟ್ಯ ರಂಗಪ್ರವೇಶ ನವೆಂಬರ್ 26, ಭಾನುವಾರ ಬೆಳಗ್ಗೆ 10ಕ್ಕೆ ನಗರದ ಚೌಡಯ್ಯ ಸ್ಮಾರಕ ಭವನದ ಸಭಾಂಗಣದಲ್ಲಿ ನಡೆಯಲಿದೆ.
ಗೌರಿ ಎ ಮೂರ್ತಿ ನಾಡಿನ ಹೆಸರಾಂತ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕೂಚುಪುಡಿ ನೃತ್ಯಪಟು ಡಾ ವೀಣಾಮೂರ್ತಿ ವಿಜಯ್ ಅವರ ಶಿಷ್ಯೆ. ವೀಣಾಮೂರ್ತಿ ಅವರಲ್ಲೇ ತನ್ನ ನಾಟ್ಯಾಭ್ಯಾಸವನ್ನು ತನ್ನ 7ನೇ ವಯಸ್ಸಿನಲ್ಲೇ ಪ್ರಾರಂಭಿಸಿದ ಗೌರಿ, ಭರತನಾಟ್ಯ ಕಲೆಯಲ್ಲಿ ಎಲ್ಲಾ ಮಜಲುಗಳಲ್ಲೂ ಪ್ರಾವೀಣ್ಯತೆಯನ್ನು ಪಡೆದಿದ್ದಾಳೆ.
ಪ್ರಸ್ತುತ ಮೌಂಟ್ ಕಾರ್ಮೆಲ್ ಕಾಲೇಜಿನ ಕಲಾ ವಿಭಾಗದಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿ ಮನಃಶಾಸ್ತ್ರದ ಬಗ್ಗೆ ವ್ಯಾಸಂಗ ಮಾಡುತ್ತಿದ್ದಾಳೆ. ಯೋಗಾಭ್ಯಾಸದಲ್ಲೂ ಪರಿಣಿತಿಯನ್ನು ಪಡೆದಿದ್ದು, ಕಾಲೇಜಿನ ಆಟಪಾಠಗಳಲ್ಲೂ ಮುಂದಿದ್ದಾಳೆ. ಅತ್ಯುತ್ತಮ ಬ್ಯಾಸ್ಕೆಟ್ ಬಾಲ್ ಆಟಗಾರ್ತಿಯಾಗಿ ಕಾಲೇಜನ್ನು ಪ್ರತಿನಿಧಿಸುತ್ತಿದ್ದಾಳೆ.
ಇಂದಿನ ಅವಳ ರಂಗಪ್ರವೇಶಕ್ಕೆ ಹಿರಿಯ ನಾಟ್ಯಗುರು ಬಿ ಭಾನುಮತಿ ಮತ್ತು ಹಿರಿಯ ವೀಣಾವಾದಕಿ ಡಾ ಸುಮಾ ಸುಧೀಂದ್ರ, ಯಕ್ಷಗಾನ ಕಲಾವಿದರಾದ ಮಂಟಪ್ ಪ್ರಭಾಕರ್ ಉಪಾಧ್ಯಾಯ ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಲಾವಿದರನ್ನು ಆಶೀರ್ವದಿಸಲಿದ್ದಾರೆ.
ಹಿಮ್ಮೇಳದಲ್ಲಿ ವೀಣಾಮೂರ್ತಿಯವರ ನಟುವಾಂಗ, ವಿ ದೀಪ್ತಿ ಶ್ರೀನಾಥ್ - ಗಾಯನ, ಲಿಂಗರಾಜು - ಮೃದಂಗ, ವಿ ಗೋಪಾಲ್ - ವೀಣೆ, ರಘುನಂದನ್ - ಕೊಳಲು ಹಾಗೂ ಕಾರ್ತಿಕ್ ರವರ - ರಿದಂ ಪ್ಯಾಡ್ ನಲ್ಲಿ ಭಾಗವಹಿಸಲಿದ್ದಾರೆ. ಹಿರಿಯ ನಾಟ್ಯ ವಿದುಷಿ ಶಮಾಕೃಷ್ಣ ಅವರು ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.
ಕಲಾ ಪೋಷಕರೂ ಮಹಾದಾನಿಗಳೂ ಆಗಿರುವ ಪಿ ಎನ್ ಎಸ್ ಮೂರ್ತಿ ಮತ್ತು ಯಶೋದಾಮೂರ್ತಿಯವರ ಹಾಗೂ ಹಿರಿಯ ಗಮಕಿಗಳು ಪತ್ರಕರ್ತರೂ ಆಗಿರುವ ಡಾ ಎಂಎ ಜಯರಾಮ್ ರಾವ್ ಮತ್ತು ರುಕ್ಮಿಣಿ ಜಯರಾಮ್ ರಾವ್ ರವರ ಮೊಮ್ಮಗಳು. ಕಿರುತೆರೆ ನಟಿ, ನಿರೂಪಕಿ ಕುಮುದವಲ್ಲಿ ಹಾಗೂ ಅರುಣ್ ಮೂರ್ತಿಯವರ ಮಗಳು ಹಾಗೂ ಪೃಥ್ವಿ ಮೂರ್ತಿಯ ಅವಳಿ ಸೋದರಿ!