ಭಾರತ್ ಬಂದ್; ಬೆಂಗಳೂರಲ್ಲಿ ಸಂಚಾರ ಮಾರ್ಗ ಬದಲು
ಬೆಂಗಳೂರು, ಸೆಪ್ಟೆಂಬರ್ 26: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಭಾರತ್ ಬಂದ್ ಗೆ ಕರೆ ನೀಡಿದೆ. ಬೆಂಗಳೂರಿನಲ್ಲಿ ಸಹ ಬಂದ್ಗೆ ಬೆಂಬಲಿಸಿ ಬೃಹತ್ ಜಾಥಾ ನಡೆಸಲಾಗುತ್ತದೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುವ ನಿರೀಕ್ಷೆ ಇದೆ.
ಬೆಂಗಳೂರು ಸಂಚಾರಿ ಪೊಲೀಸರು ಸೆಪ್ಟೆಂಬರ್ 27ರಂದು ರೈತರು ಜಾಥಾ ಹಮ್ಮಿಕೊಂಡಿರುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ. ಮೆಜೆಸ್ಟಿಕ್, ಆನಂದ್ ರಾವ್ ವೃತ್ತ, ಫ್ರೀಡಂ ಪಾರ್ಕ್ ಸುತ್ತಮುತ್ತ ಸಂಚಾರ ನಡೆಸುವುದನ್ನು ವಾಹನ ಸವಾರರು ಸಂಚಾರ ಮಾರ್ಗ ಬದಲಾವಣೆ ಬಗ್ಗೆ ಮಾಹಿತಿ ತಿಳಿಯುವುದು ಅಗತ್ಯವಾಗಿದೆ.
ಭಾರತ್ ಬಂದ್: ನಾವೆಲ್ಲಾ ಕೃಷಿ ಮೇಲೇಯೇ ಬದುಕುತ್ತಿರುವುದು; ಸುನಂದ ಜಯರಾಂ
ಕೆ. ಜಿ. ರಸ್ತೆಯಲ್ಲಿ ಹಲಸೂರು ಪೊಲೀಸ್ ಠಾಣೆ ಕಡೆಯಿಂದ ಬಂದು ಪೊಲೀಸ್ ಕಾರ್ನರ್ ಬಳಿ ಎಡ ತಿರುವು ಪಡೆದುಕೊಂಡು ಕೆ. ಜಿ. ರಸ್ತೆ ಕಡೆಗೆ ಸಾಗುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ನಾವೆಲ್ಲರೂ ಸೇರಿ ಸೆ.27ರ ಭಾರತ್ ಬಂದ್ ಯಶಸ್ವಿಗೊಳಿಸೋಣ: ಎಚ್. ಆರ್. ಬಸವರಾಜಪ್ಪ
ಹಾಗೆಯೇ ನೃಪತುಂಗ ರಸ್ತೆ ಮೂಲಕ ಬಂದು ಪೊಲೀಸ್ ಕಾರ್ನರ್ ಬಳಿ ಬಲ ತಿರುವು ಪಡೆದು ಕೆ. ಜಿ. ರಸ್ತೆ ಸಾಗುವ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಾಂಕ: 27.09.2021 ರಂದು ಕಿಸಾನ್ ಮೋರ್ಚಾ ಸಂಘಟನೆಯ ವತಿಯಿಂದ ಕೇಂದ್ರ ಸರ್ಕಾರ ಜಾರಿ ಗೊಳಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದರಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿರುತ್ತದೆ. @DgpKarnataka @CPBlr @AddlCPTraffic @jointcptraffic @blrcitytraffic pic.twitter.com/MWECyopTEa
— DCP Traffic East (@DCPTrEastBCP) September 25, 2021
ಪರ್ಯಾಯ ವ್ಯವಸ್ಥೆ; ಹಲಸೂರು ಗೇಟ್ ಪೊಲೀಸ್ ಠಾಣೆ ಕಡೆಯಿಂದ ಬಂದು ಪೊಲೀಸ್ ಕಾರ್ನರ್ ಬಳಿ ಎಡ ತಿರುವು ಪಡೆದುಕೊಂಡು ಕೆ. ಜಿ. ರಸ್ತೆ ಕಡೆಗೆ ಸಾಗುವ ವಾಹನಗಳು ಪೊಲೀಸ್ ಕಾರ್ನರ್ ವೃತ್ತದಿಂದ ನೇರವಾಗಿ ನೃಪತುಂಗ ರಸ್ತೆಗೆ ಪವೇಶ ತೆಗೆದುಕೊಂಡು ನೃಪತುಂಗ ರಸ್ತೆಯಲ್ಲಿ ಸಾಗಿ ಕೆ. ಆರ್. ವೃತ್ತ ತಲುಪಿ ಮುಂದುವರೆಯಲು ಅನುವು ಮಾಡಿಕೊಡಲಾಗಿದೆ.
300 ದಿನ ಕಳೆದ ರೈತ ಚಳವಳಿ; ಸೆಪ್ಟೆಂಬರ್ 27ರಂದು ಭಾರತ್ ಬಂದ್
ಕೆ. ಆರ್. ಸರ್ಕಲ್ನಿಂದ ನೃಪತುಂಗ ರಸ್ತೆಯಲ್ಲಿ ಬಂದು ಪೊಲೀಸ್ ಕಾರ್ನರ್ ಬಳಿ ಬಲ ತಿರುವು ಪಡೆದು ಕೆ. ಜಿ. ರಸ್ತೆಗೆ ಸಾಗುವ ಸಂಚಾರವನ್ನು ನಿಷೇಧಿಸಿರುವುದರಿಂದ ಕೆ. ಆರ್. ವೃತ್ತದಿಂದ ಶೇಷಾದ್ರಿ ರಸ್ತೆಯಲ್ಲಿ ಸಾಗಿ ಮುಂದುವರೆಯಲು ವ್ಯವಸ್ಥೆ ಮಾಡಲಾಗಿದೆ.
ಸಾರಿಗೆ ನೌಕರರ ಬೆಂಬಲವಿಲ್ಲ; ಭಾರತ್ ಬಂದ್ಗೆ ಹಲವು ಸಂಘಟನೆಗಳು ಬೆಂಬಲ ನೀಡಿವೆ. ಆದರೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರು ಬೆಂಬಲವನ್ನು ನೀಡಿಲ್ಲ. ಸೋಮವಾರ ಎಂದಿನಂತೆ ಬಸ್ಗಳು ಸಂಚಾರ ನಡೆಸಲಿವೆ.
ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಈ ಕುರಿತು ಮಾಹಿತಿ ನೀಡಿದ್ದಾರೆ, "ಸಾರಿಗೆ ಸಂಸ್ಥೆ ಬಸ್ಗಳು ಎಂದಿನಂತೆ ಸಂಚಾರ ನಡೆಸಲಿವೆ. ಬಸ್ ಮತ್ತು ಸಂಸ್ಥೆಯ ಯಾವುದೇ ಆಸ್ತಿಗೆ ಹಾನಿಯಾಗದಂತೆ ಭದ್ರತೆ ಒದಗಿಸಬೇಕು ಎಂದು ಪೊಲೀಸ್ ಇಲಾಖೆಯನ್ನು ಕೋರಲಾಗಿದೆ" ಎಂದು ಹೇಳಿದ್ದಾರೆ.
ಬಿಎಂಟಿಸಿ ಬಸ್ಗಳ ಸಂಚಾರದಲ್ಲಿಯೂ ಯಾವುದೇ ವ್ಯತ್ಯಯವಾಗುವುದಿಲ್ಲ. ಬಸ್ಗಳಿಗೆ ಭದ್ರತೆ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಮೆಟ್ರೋ ಸಂಚಾರ; ಭಾರತ್ ಬಂದ್ ದಿನವಾದ ಸೋಮವಾರ ನಮ್ಮ ಮೆಟ್ರೋ ರೈಲುಗಳು ಎಂದಿನಂತೆ ಸಂಚಾರ ನಡೆಸಲಿವೆ. "ಮೆಟ್ರೋ ರೈಲು ಸಂಚಾರ ಎಂದಿನಂತೆ ಇರಲಿದೆ. ಹೆಚ್ಚಿನ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಯನ್ನು ಕೋರಲಿದ್ದೇವೆ" ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಹೇಳಿದ್ದಾರೆ.
ಬಸ್, ರೈಲು ತಡೆಯುತ್ತೇವೆ; ಕೋಡಿಹಳ್ಳಿ ಚಂದ್ರಶೇಖರ್ ಭಾರತ್ ಬಂದ್ ಬಗ್ಗೆ ಮಾಹಿತಿ ನೀಡಿದ್ದಾರೆ. "ಸೋಮವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ಬಂದ್ ನಡೆಯಲಿದೆ. ಬಸ್, ರೈಲು ಸಂಚಾರವನ್ನು ತಡೆಯಲಾಗುತ್ತದೆ" ಎಂದು ಹೇಳಿದ್ದಾರೆ.
"ರೈತ ಸಂಘಟನೆಗಳು, ಕಾರ್ಮಿಕ, ದಲಿತ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ವರ್ತಕರು, ಕನ್ನಡ ಸಂಘಟನೆಗಳು, ಆಟೋ ಚಾಲಕರ ಸಂಘ, ಟ್ಯಾಕ್ಸಿ ಚಾಲಕರು ಬಂದ್ಗೆ ಬೆಂಬಲ ನೀಡಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
ದೇಶಾದ್ಯಂತ ನಡೆಯುತ್ತಿರುವ ಬಂದ್ಗೆ ಕಾಂಗ್ರೆಸ್ ಪಕ್ಷ ಬೆಂಬಲವನ್ನು ಘೋಷಣೆ ಮಾಡಿದೆ. ಆದ್ದರಿಂದ ಕೆಲವು ಕಾಂಗ್ರೆಸ್ ನಾಯಕರು ಜಾಥಾದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕನ್ನಡ ಸಂಘಟನೆಗಳಲ್ಲಿ ಕೆಲವು ಬೆಂಬಲ ಘೋಷಣೆ ಮಾಡಿವೆ.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಮಾತನಾಡಿದ್ದು, "ರಾಜ್ಯಾದ್ಯಂತ ಸಂಚಾರ ನಡೆಸಿ ಸೋಮವಾರದ ಬಂದ್ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ರೈತ ಸಂಘಟನೆಗಳ ಭಾರತ್ ಬಂದ್ ಯಶಸ್ವಿಯಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋಡಿಹಳ್ಳಿ ಚಂದ್ರಶೇಖರ್ ಶನಿವಾರ ಬೆಂಗಳೂರಿನ ಕೆ. ಆರ್. ಮಾರ್ಕೆಟ್ನಲ್ಲಿ ಸಂಚಾರ ನಡೆಸಿ ವ್ಯಾಪಾರಿಗಳನ್ನು ಭೇಟಿ ಮಾಡಿದರು. ಸೋಮವಾರದ ಬಂದ್ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಮಲ್ಲೇಶ್ವರಂ ಮಾರುಕಟ್ಟೆ ವರ್ತರು ಬಂದ್ ಬೆಂಬಲಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
"ರೈತರು ಕರೆ ನೀಡಿರುವ ಬಂದ್ಗೆ ಪ್ರಗತಿಪರರು, ದಲಿತ ಪರ ಸಂಘಟನೆಗಳು, ಕಾರ್ಮಿಕರು ಬೆಂಬಲ ನೀಡಿದ್ದಾರೆ. ಬಂದ್ ಯಶಸ್ವಿಯಾಗಲಿದೆ. ಜನರು ದೂರ ಪ್ರಯಾಣ ಇದ್ದರೆ ಮುಂದೂಡುವುದು ಉತ್ತಮ ಎಂದು" ರೈತ ಮುಖಂಡ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಹಲವು ಆಟೋ ಚಾಲಕರು ಬಂದ್ಗೆ ಬೆಂಬಲ ನೀಡಿದ್ದಾರೆ. ಆದರೆ ಆಟೋಗಳನ್ನು ಓಡಿಸಲಿದ್ದಾರೆ. ಕೋವಿಡ್, ಬೆಲೆ ಏರಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದೇವೆ. ಆಟೋಗಳ ಸಂಚಾರ ಬಂದ್ ಮಾಡುವುದಿಲ್ಲ ಬಂದ್ಗೆ ನೈತಿಕ ಬೆಂಬಲ ಕೊಡುತ್ತೇವೆ ಎಂದು ಕೆಲವು ಚಾಲಕರು ಹೇಳಿದ್ದಾರೆ.
ಯಾರ ಬೆಂಬಲ; ಬೆಂಗಳೂರು ನಗರದಲ್ಲಿ ಹೋಟೆಲ್ ಮಾಲೀಕರ ಸಂಘ ಬಂದ್ಗೆ ನೈತಿಕ ಬೆಂಬಲ ನೀಡಿದೆ. ಹೋಟೆಲ್ಗಳನ್ನು ಬಂದ್ ಮಾಡುವುದಿಲ್ಲ.
ಲಾರಿ ಮಾಲೀಕರ ಸಂಘ ಸಹ ಭಾರತ್ ಬಂದ್ಗೆ ನೈತಿಕ ಬೆಂಬಲ ನೀಡಿದೆ. ಲಾರಿಗಳು ಎಂದಿನಂತೆ ಸಂಚಾರ ನಡೆಸಲಿವೆ. ರಾಜ್ಯದ ಟ್ಯಾಕ್ಸಿ ಮಾಲೀಕರ ಸಂಘ ಸಹ ಬಂದ್ ಬೆಂಬಲಿಸಿಲ್ಲ. ಓಲಾ ಮತ್ತು ಊಬರ್ ಟ್ಯಾಕ್ಸಿಗಳು ಸಂಚಾರ ನಡೆಸಲಿವೆ.
ಬಂದ್ಗೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳ ಯೂನಿಯನ್, ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ, ಎಪಿಎಂಸಿ ವರ್ತಕರ ಸಂಘ ಬೆಂಬಲ ಕೊಟ್ಟಿದೆ.
Recommended Video
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬಂದ್ ಬೆಂಬಲಿಸಿದ್ದಾರೆ. ಸೋಮವಾರ 11.30ಕ್ಕೆ ಅತ್ತಿಬೆಲೆ ಗಡಿ ಬಂದ್ ಮಾಡಿ ಬಂದ್ಗೆ ಸಹಕಾರ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.