ಭಾರತ್ ಬಂದ್; ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆಗಳಿಗೆ ಅವಕಾಶವಿಲ್ಲ!
ಬೆಂಗಳೂರು, ಜ.7: ಬುಧವಾರ ವಿವಿಧ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ಗೆ ಕರೆ ನೀಡಿವೆ. ಆದರೆ, 'ಬುಧವಾರ ಬೆಂಗಳೂರಿನಲ್ಲಿ ಯಾವುದೇ ಸಂಘಟನೆಗಳಿಗೆ ಪ್ರತಿಭಟನಾ ಮೆರವಣಿಗೆಗಳಿಗೆ, ಬಹಿರಂಗ ಸಮಾವೇಶಗಳನ್ನು ಮಾಡಲು ಅವಕಾಶ ನೀಡುವುದಿಲ್ಲ' ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಬುಧವಾರ ಭಾರತ್ ಬಂದ್: ನಿಮಗೆ ತಿಳಿದಿರಬೇಕಾದ 5 ಸಂಗತಿಗಳು
ಈ ಕುರಿತು ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ಯಾವುದೇ ಸಮಾಜ ವಿರೋಧಿ ಶಕ್ತಿಗಳು ಬಂದ್ ನಲ್ಲಿ ಜನಗಳಿಗೆ ಭಾಗವಹಿಸಲು ಒತ್ತಾಯ ಮಾಡಿದರೆ ಅಥವಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಪ್ರಯತ್ನಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತವೆ. ಬುಧವಾರ ಪೊಲೀಸರು ತೀವ್ರ ನಿಗಾ ವಹಿಸಲಿದ್ದು, ಸೂಕ್ಷ್ಮ ಸ್ಥಳಗಳ ಮೇಲೆ ಹದ್ದಿನ ಕಣ್ಣಿಡಲಾಗುವುದು. ಬಂದ್ ಹೆಸರಿನಲ್ಲಿ ಅಮಾಯಕರಿಗೆ ತೊಂದರೆಯುಂಟು ಮಾಡಿದರೇ ಸಹಿಸುವುದಿಲ್ಲ' ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ತರುತ್ತಿದೆ ಎಂದು ಆರೋಪಿಸಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯಲಿದ್ದು, ಬುಧವಾರ ನೌಕರರು ಕಾರ್ಯಸ್ಥಾನದಿಂದ ದೂರವೇ ಉಳಿಯಲಿದ್ದಾರೆ. ಈ ಬಂದ್ಗೆ ವ್ಯಾಪಾರ ಒಕ್ಕೂಟಗಳು ಮಾತ್ರವಲ್ಲದೆ ದೇಶದಾದ್ಯಂತ ಅನೇಕ ಸಂಘಟನೆಗಳು, ಸಂಘ ಸಂಸ್ಥೆಗಳು, ಒಕ್ಕೂಟಗಳು, ರಾಜಕೀಯ ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿದೆ.