Breaking: ಶಾಲಾ- ಕಾಲೇಜುಗಳಲ್ಲಿ ಈ ವರ್ಷದಿಂದಲೇ ಭಗವದ್ಗೀತೆ ಬೋಧನೆ; ಸಚಿವ ಬಿಸಿ ನಾಗೇಶ್
ಬೆಂಗಳೂರು, ಸೆಪ್ಟೆಂಬರ್, 19: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಭಗವದ್ಗೀತೆ ಬೋಧನೆ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ವಿಧಾನ ಪರಿಷತ್ನಲ್ಲಿ ಈ ವಿಚಾರವನ್ನು ಸದಸ್ಯ ಎಂ.ಕೆ.ಪ್ರಾಣೇಶ್ ಪ್ರಸ್ತಾಪಿಸಿದರು. ಭಗವದ್ಗೀತೆ ಬೋಧನೆ ಪ್ರಸ್ತಾಪ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಈ ಹಿಂದೆ ಭಗವದ್ಗೀತೆ ಬೋಧನೆಗೆ ಸಮಿತಿ ರಚಿಸುವ ಬಗ್ಗೆ ಹೇಳಲಾಗಿತ್ತು. ಆದರೆ ಈಗ ಬೇರೆ ರೀತಿಯ ಹೇಳಿಕೆ ಹೊರಬಂದಿದೆ. ಭಗವದ್ಗೀತೆ ಬೋಧಿಸಲು ಸರ್ಕಾರಕ್ಕೆ ಏನಾದರೂ ಮುಜುಗರ ಇದೆಯೇ? ಮೊದಲು ಇದ್ದ ಆಸಕ್ತಿ ಈಗ ಏಕೆ ಇಲ್ಲ? ಎಂದು ಪ್ರಶ್ನಿಸಿದರು. ಇದಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿ, ಈ ವರ್ಷದಿಂದಲೇ ನೈತಿಕ ಶಿಕ್ಷಣ ವಿಭಾಗದಲ್ಲಿ ಭಗವದ್ಗೀತೆ ಬೋಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಮಿತಿ ರಚನೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಈ ಹಿಂದೆ ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಕಿಚ್ಚು ಹೊತ್ತಿತ್ತು. ಗುಜರಾತ್ನಲ್ಲಿ 6ನೇ ತರಗತಿಯಿಂದ ಪಿಯುಸಿ ಹಂತದವರೆಗೆ ಪಠ್ಯಪುಸ್ತಕದಲ್ಲಿ ಭಗವದ್ಗೀತೆಯನ್ನು ಅಳವಡಿಸಲಾಗಿದೆ. ಇದೀಗ ಕರ್ನಾಟಕದಲ್ಲಿ ಇದೇ ಮಾದರಿಯನ್ನು ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ. ಆರನೇ ತರಗತಿಯಿಂದ ಪಿಯುಸಿವರೆಗೆ ಪಠ್ಯಪುಸ್ತಕಗಳಲ್ಲಿ ಮಕ್ಕಳಿಗೆ ಭಗವದ್ಗೀತೆ, ರಾಮಾಯಣ, ಮಹಾಭಾರತದಲ್ಲಿರುವ ಕೆಲವು ಪ್ರಮುಖ ಅಂಶಗಳನ್ನು ಅಳವಡಿಸಲು ತೀರ್ಮಾನಿಸಿತ್ತು. ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು, ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದ್ದರು. ಭಗವದ್ಗೀತೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದ್ದರು.
ಗುಜರಾತ್ ಬೋಧನಾ ರೀತಿ ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆಸಿ ರಾಜ್ಯದಲ್ಲೂ ಅಳವಡಿಸಲು ಮುಂದಾಗಬೇಕೆಂದು ಖುದ್ದು ನಾಗೇಶ್ ಅವರೇ ಸೂಚನೆ ಕೊಟ್ಟಿದ್ದರೆನ್ನುವ ಮಾಹಿತಿಯೂ ಲಭ್ಯ ಆಗಿತ್ತು. ಗುಜರಾತ್ನ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತ ಸೇರಿಸಲಾಗಿದ್ದು, ರಾಜ್ಯದಲ್ಲಿಯೂ ಶಾಲಾ ಪಠ್ಯ ಭಗವದ್ಗೀತೆ ಸೇರ್ಪಡೆ ಮಾಡಿ ಭೋಧನೆ ಸಂಬಂಧ ಈಗಾಗಲೇ ಸಮಿತಿಯನ್ನು ರಚನೆ ಮಾಡಿದ್ದರು. ನೈತಿಕ ಪಾಠ ಅಡಿಯಲ್ಲಿ ಭಗವದ್ಗೀತೆ ಪಠ್ಯ ಜಾರಿಗೆ ಚಿಂತನೆ ನಡೆಸಿರುವ ಇಲಾಖೆಯು ಸದ್ಯ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಸಲು ಮುಂದಾಗಿತ್ತು.
ಮಕ್ಕಳಿಗೆ ಭಗವದ್ಗೀತೆ, ರಾಮಯಣ ಮಹಾಭಾರತದ ತತ್ವಗಳು ಮತ್ತು ಮೌಲ್ಯಗಳನ್ನು ಕಲಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈಗಾಗಲೇ ಸಕಲ ಹಿಂದುಗಳ ಧರ್ಮಗ್ರಂಥ ಎಂದೇ ಹೇಳಲಾಗುವ ಭಗವದ್ಗೀತೆಯನ್ನು ಗುಜರಾತ್ನ ಶಾಲೆಗಳಲ್ಲಿ ಪಠ್ಯಕ್ರಮವಾಗಿ ಸೇರಿಸಲಾಗುವುದು ಎಂದು ಗುಜರಾತ್ನ ಶಿಕ್ಷಣ ಸಚಿವ ಜಿತು ವಾಘನಿ ಘೋಷಣೆ ಮಾಡಿದ್ದರು. ಗುಜರಾತ್ ಶಾಲೆಯ 6ರಿಂದ 12ನೇ ತರಗತಿಯ ಮಕ್ಕಳು ಪಠ್ಯಕ್ರಮದ ಭಾಗವಾಗಿ ಶ್ರೀಮದ್ ಭಗವದ್ಗೀತೆಯ ಸಾರವನ್ನು ಕಲಿಯಲಿದ್ದಾರೆ ಎಂದು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದ ಹೊಸ ಶಿಕ್ಷಣ ನೀತಿಯಲ್ಲಿ ತಿಳಿಸಲಾಗಿತ್ತು. ಭಗವದ್ಗೀತೆಯ ತತ್ವಗಳು ಹಾಗೂ ಮೌಲ್ಯಗಳನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ 6 ರಿಂದ 12ನೇ ತರಗತಿಯ ಮಕ್ಕಳಿಗೆ ಕಲಿಸಲಾಗುತ್ತದೆ ಎಂದು ಹೇಳಲಾಗಿತ್ತು. ಅದರಂತೆಯೇ ಇದೀಗ ರಾಜ್ಯದಲ್ಲಿಯೂ ಸಹ ಇದೇ ವರ್ಷದಿಂದಲೇ ಶಾಲಾ- ಕಾಲೇಜುಗಳಲ್ಲಿ ಭಗವದ್ಗೀತೆ ಬೋಧನೆಗೆ ಚಿಂತನೆ ನಡೆಸಲಾಗಿದೆ ಎಂದು ಸಚಿವ ಬಿಸಿ ನಾಗೇಶ್ ಮಾಹಿತಿಯನ್ನು ನೀಡಿದರು.