ಸಹಾಯ ನೆಪದಲ್ಲಿ ಅಪಹರಿಸಿ ಸುಲಿಗೆ ಮಾಡುವ ಗ್ಯಾಂಗ್ ಗಳಿವೆ ಹುಷಾರ್ !
ಬೆಂಗಳೂರು, ಫೆಬ್ರವರಿ 22: ರಾತ್ರಿ ವೇಳೆ ರಾಜಧಾನಿಯಲ್ಲಿ ಓಡಾಡುವಾಗ ಹುಷಾರ್. ಸಹಾಯ ಕೇಳುವ ನೆಪದಲ್ಲಿ ಬಂದು ಅಪಹರಿಸಿ ಹಣ ದೋಚುವ ಗ್ಯಾಂಗ್ ಸಕ್ರಿಯವಾಗಿದೆ. ಇಂತದ್ದೊಂದು ಗ್ಯಾಂಗ್ ನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಅಪಘಾತವಾದವರಂತೆ ನಟನೆ ಮಾಡುತ್ತಾರೆ. ಅವರನ್ನು ನೋಡಿ ಅಪ್ಪಿ ತಪ್ಪಿ ಏನಾದರೂ ವಾಹನ ನಿಲ್ಲಿಸಿ ಸಹಾಯ ಮಾಡಲು ಹೋದರೆ ಕಿರಾತಕ ಗ್ಯಾಂಗ್ ಬಂದು ಅಪ್ಪಳಿಸುತ್ತದೆ. ಸಹಾಯ ಮಾಡಲು ಬಂದವರನ್ನು ಅಪಹರಿಸಿ ಇರುವ ಹಣ, ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಾರೆ. ಇಂತದ್ದೇ ಕೃತ್ಯಗಳನ್ನು ಎಸಗುತ್ತಿದ್ದ ಕಿರಾತಕರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಟಿಪ್ಪು ಸುಲ್ತಾನ್, ಜಾಫರ್, ವಿಶಾಲ್, ದೀಪಕ್ ನವೀನ್ ಬಂಧಿತ ಆರೋಪಿಗಳು. ರಾತ್ರಿ ವೇಳೆ ಕಾರು ಹಾಗೂ ಬೈಕ್ ಸವಾರರ ಬಳಿ ಸಹಾಯ ಕೇಳುವ ನೆಪದಲ್ಲಿ ದೋಚುವುದು ಇವರ ಕಾಯಕ. ಅಂದಹಾಗೆ ಇವರ ವಿರುದ್ಧ ದಾಖಲಾದ ಒಂದು ದೂರನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರು ಈವರೆಗೂ ಮಾಡಿರುವ ಕೃತ್ಯಗಳ ವಿವರ ಪಡೆಯುತ್ತಿದ್ದಾರೆ.
Recommended Video
ನಡೆದಿದ್ದೇನು ? : ಇತ್ತೀಚೆಗೆ ಬನಶಂಕರಿ ನಿವಾಸಿಯೊಬ್ಬರು ಬೈಕ್ ನಲ್ಲಿ ಹೋಗುತ್ತಿದ್ದರು. ಕಾಲಿಗೆ ಏಟು ಮಾಡಿಕೊಂಡು ಬ್ಯಾಂಡೇಜ್ ಸುತ್ತಿಕೊಂಡು ರಸ್ತೆ ಬದಿ ಸಹಾಯ ಕೇಳುತ್ತಿದ್ದ. ಅಯ್ಯೋ ಪಾಪ ಅಂತ ಬೈಕ್ ನಿಲ್ಲಿಸಿದ ಬನಶಂಕರಿ ನಿವಾಸಿ ಏನಾಗಿದೆ ಎಂದು ಕೇಳಿದ್ದರು. ಅಷ್ಟರಲ್ಲಿ ನಾಲ್ಕೈದು ಮಂದಿ ಬಂದು ಅಪಹರಣ ಮಾಡಿದ್ದಾರೆ. ಬಳಿಕ ಮಂಡ್ಯದ ಮಳವಳ್ಳಿ ವರೆಗೂ ಸುತ್ತಾಡಿಸಿ ಪೋಷಕರ ಮೊಬೈಲ್ ನಂಬರ್ ಗೆ ಕರೆ ಮಾಡಿಸಿದ್ದಾರೆ. ಅಪಘಾತವಾಗಿದ್ದು, ತುರ್ತಾಗಿ ಹಣ ಹಾಕಿ ಎಂದು ಕೇಳಿಸಿದ್ದಾರೆ. ಗಾಬರಿಗೊಂಡ ಮನೆಯವರು ಹದಿನೈದು ಸಾವಿರ ಹಣವನ್ನೂ ಹಾಕಿದ್ದಾರೆ. ಹಣ ಪಡದ ಕಿರಾಕತರು, ಬನಶಂಕರಿ ನಿವಾಸಿಯನ್ನು ಬಿಟ್ಟು ಕಳಿಸಿದ್ದಾರೆ. ಮಳವಳ್ಳಿಯಿಂದ ಮನೆಗೆ ಬಂದ ವ್ಯಕ್ತಿ ಬನಶಂಕರಿ ಪೊಲೀಸರಿಗೆ ದೂರು ನೀಡಿದ್ದರು. ದೂರನ್ನಾಧರಿಸಿ ಐವರು ಆರೋಪಿಗಳನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ರಾತ್ರಿ ವೇಳೆ ಸಹಾಯ ಕೇಳುವ ಅಪರಿಚಿತರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ರಾತ್ರಿ ವೇಳೆ ಪ್ರಯಾಣ ಎಚ್ಚರಿಕೆಯಿಂದ ಮಾಡುವಂತೆ ಪೊಲೀಸರು ಸಲಹೆ ಮಾಡಿದ್ದಾರೆ.