ಹೊರ ರಾಜ್ಯದವರನ್ನು ಮನೆ ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಹುಷಾರ್!
ಬೆಂಗಳೂರು, ಜು. 19: ಹೊರ ರಾಜ್ಯದವರನ್ನು ಮನೆಗೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಹುಷಾರ್! ಯಾಕೆಂದರೆ ಮನೆ ಕೆಲಸಕ್ಕೆ ಸೇರಿಕೊಳ್ಳುವ ಸೋಗಿನಲ್ಲಿ ಮನೆಗೆ ಕಣ್ಣು ಹಾಕುವ ಖದೀಮರೇ ಬೆಂಗಳೂರಿನಲ್ಲಿ ಹೆಚ್ಚು ತುಂಬಿ ಕೊಂಡಿದ್ದಾರೆ. ನೇಪಾಳ, ಬಾಂಗ್ಲಾದೇಶಿಯರ ಜತೆಗೆ ಇದೀಗ ಬಿಹಾರ ಮೂಲದ ಮನೆಕೆಲಸಗಾರರು ಅನ್ನ ಹಾಕುವ ಮಾಲೀಕರ ಮನೆಗಳಿಗೆ ಕನ್ನ ಹಾಕುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತದ್ದೇ ಒಂದು ಗ್ಯಾಂಗ್ ಸಿಕ್ಕಿಬಿದ್ದಿದೆ.
ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆ ಕೆಲಸಗಾರ ತನ್ನ ಸಹಚರರನ್ನು ಕರೆಸಿಕೊಂಡು ಮಾಲೀಕರ ಮನೆಯಲ್ಲಿ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ. ಕಳ್ಳತನ ಮಾಡಿದ ಆರೇ ತಾಸಿನಲ್ಲಿ ಮಾರತ್ ಹಳ್ಳಿ ಪಿಜಿಯಲ್ಲಿ ತಲೆ ಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಚೋಟು ಅಲಿಯಾಸ್ ರಾಮಬಿಂಧು, ರಂಜಿತ್, ಗೌತಮ್ ಕುಮಾರ್, ಪಂಕಜ್ ಬಂಧಿತ ಆರೋಪಿಗಳು. ಇವರಿಂದ ಸುಮಾರು 20 ಲಕ್ಷ ರೂ. ಮೌಲ್ಯದ ಆಭರಣ ವಶಪಡಿಸಿಕೊಂಡಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಶ್ಲಾಘಿಸಿದ್ದಾರೆ.
ಕೋರಮಂಗಲದ ಐದನೇ ಬ್ಲಾಕ್ನಲ್ಲಿ ಉದ್ಯಮಿ ಮನೆಯಿದೆ. ಮನೆ ಕೆಲಸಕ್ಕೆಂದು ಪರಿಚಿತರ ಮೂಲಕದ ಬಿಹಾರ ಮೂಲದ ಚೋಟು ನನ್ನು ನೇಮಿಸಿಕೊಂಡಿದ್ದರು. ಚೋಟು ಮೂಲತಃ ಬಿಹಾರದ ಮದುಬನಿಯ ನಗವಾಸ್ ನಿವಾಸಿಯಾಗಿದ್ದು, ಮಾಲೀಕರ ನಂಬಿಕೆ ಗಳಿಸಿದ್ದ. ಈತನನ್ನು ನಂಬಿ ಮನೆ ಮಾಲೀಕರು ಕುಟುಂಬ ಸಮೇತ ಹೊರಗೆ ಹೋಗಿ ಬರುತ್ತಿದ್ದರು. ಎರಡು ದಿನದ ಹಿಂದೆ ಉದ್ಯಮಿ ಕುಟುಂಬ ಹೊರ ರಾಜ್ಯಕ್ಕೆ ಪ್ರವಾಸಕ್ಕೆ ತೆರಳಿತ್ತು. ಮನೆ ಮಾಲೀಕರ ಶ್ರೀಮಂತಿಕೆ ಬಗ್ಗೆ ಅರಿತಿದ್ದ ಚೋಟು ತನ್ನ ಊರಿನವರೇ ಆದ ನಾಲ್ವರು ಸ್ನೇಹಿತರನ್ನು ಕರೆಸಿಕೊಂಡು ಮನೆಯಲ್ಲಿದ್ದ 20 ಲಕ್ಷ ರೂ. ಮೌಲ್ಯದ 12 ಕೆ.ಜಿ. ಬೆಳ್ಳಿ ಹಾಗೂ ದುಬಾರಿ ಬೆಲೆಯ ವಾಚ್ ಗಳನ್ನು ಕದ್ದು ಪರಾರಿಯಾಗಿದ್ದರು.
ಮನೆ ಮಾಲೀಕರು ವಾಪಸು ಬಂದು ನೋಡುವಷ್ಟರಲ್ಲಿ ಮನೆಯಲ್ಲಿ ಕಳ್ಳತನದ ಕೃತ್ಯ ಬಯಲಿಗೆ ಬಂದಿದ್ದು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಆರೇ ತಾಸಿನಲ್ಲಿ ಮನೆ ಕೆಲಸ ಮಾಡುತ್ತಿದ್ದ ಚೋಟು ಜಾಡು ಹಿಡಿದು ಮಾರತಹಳ್ಳಿಯಲ್ಲಿ ಪಿಜಿಯಲ್ಲಿ ತಂಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಷ್ಟೂ ಬೆಳ್ಳಿ ವಸ್ತು ವಶಪಡಿಸಿಕೊಂಡಿದ್ದಾರೆ.
Recommended Video
ಹೊಟ್ಟೆಪಾಡಿಗೆ ಕೆಲಸ ಮಾಡಲೆಂದು ಬರುವ ಹೊರ ರಾಜ್ಯದ ಕಾರ್ಮಿಕರು, ಕೆಲಸದಾತರ ಶ್ರೀಮಂತಿಕೆ ನೋಡಿ ಕನ್ನ ಹಾಕುತ್ತಾರೆ. ಇಂತಹ ಅನೇಕ ಪ್ರಕರಣಗಳು ಬೆಂಗಳೂರಿನಲ್ಲಿ ಇತ್ತೀಚೆಗೆ ವರದಿಯಾಗಿದ್ದವು. ಇದೀಗ ಅಂತದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ಹೊರ ರಾಜ್ಯ ಹಾಗೂ ಹೊರ ದೇಶದವನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.