ಬೆಸ್ಕಾಂ ನಿರ್ಲಕ್ಷ್ಯ: 12 ವರ್ಷದ ಬಾಲಕಿ ಜೀವನ ಕರಾಳ!
ಬೆಂಗಳೂರು, ಜನವರಿ 27: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ಶಾರ್ಟ್ ಸರ್ಕೂಟ್ ಗೆ ಒಳಗಾಗಿ ಕೈ ಮತ್ತು ದೇಹ ಸುಟ್ಟುಕೊಂಟಿರುವ ಹನ್ನೆರಡು ವರ್ಷದ ಬಾಲಕಿ ಜೀವನ ಕರಾಳವಾಗಿದೆ. ಮುಗುವಿಗೆ ಚಿಕಿತ್ಸೆ ಕೊಡಿಸಲಾಗದೇ ಪೋಷಕರು ಪರದಾಡುತ್ತಿದ್ದರೆ, ತುತ್ತು ಅನ್ನ ತಿನ್ನಲು ಆಗದೇ ಮುದ್ದು ಕಂದಮ್ಮ ನೋವಿನಲ್ಲೇ ದಿನ ದೂಡುತ್ತಿದ್ದಾಳೆ.
ನತ ದೃಷ್ಟ ಬಾಲಕಿಯ ಹೆಸರು ಡಾಲಿ ಏಂಜರ್. ವೈಟ್ಫೀಲ್ಡ್ ಸಮೀಪದ ಗಾಂಧಿಪುರಂ ನಿವಾಸಿ. ಕಳೆದ ನವೆಂಬರ್ ನಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಏಂಜಲ್ ನ ಪೋಷಕರು ದಿನ ನಿತ್ಯ ಕಣ್ಣೀರು ಹಾಕುತ್ತಿದ್ದಾರೆ. ಏಂಜಲ್ ಮನೆ ಮೇಲೆಯೇ ಹನ್ನೊಂದು ಕೆವಿ ವೋಲ್ಟ್ ವಿದ್ಯುತ್ ತಂತಿ ಹಾದು ಹೋಗಿತ್ತು. ಮನೆಯ ಮಹಡಿ ಮೇಲೆ ನಿಂತಿದ್ದ ಬಾಲಕಿಯನ್ನು ಚಾರ್ಜರ್ ನೀಡುವಂತೆ ಸಹೋದರ ಕೇಳಿದ್ದ. ಕೆಳಗೆ ನಿಂತಿದ್ದ ಸಹೋದರಿಗೆ ಚಾರ್ಜರ್ ಕೊಡಲೆಂದು ಮೇಲಿನಿಂದ ವಿದ್ಯುತ್ ಚಾರ್ಜರ್ ಏಂಜಲ್ ಎಸೆದಿದ್ದಳು. ಆಕೆ ಎಸೆದ ಚಾರ್ಜರ್ ವಿದ್ಯುತ್ ತಂತಿಗೆ ಸಿಲುಕಿತ್ತು. ಈ ವೇಳೆ ವಿದ್ಯುತ್ ಶಾಕ್ ಹೊಡೆದು ಬಾಲಕಿಯ ಕೈ ಮತ್ತು ಹೊಟ್ಟೆ ಭಾಗ ಸಂಪೂರ್ಣ ಸುಟ್ಟು ಹೋಗಿದೆ.
ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈವರೆಗೂ ಐದು ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ. ಆದರೂ ಸಹ ಪೂರ್ಣ ಪ್ರಮಾಣದಲ್ಲಿ ಗುಣಮುಖವಾಗಿಲ್ಲ. ವೃತ್ತಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಬಾಲಕಿ ತಂದೆ ಸುಧಾಕರ್ ಸಾಲ ಹೊದ್ದು ಮಲಗಿದ್ದಾರೆ. ಮುದ್ದು ಮಗಳ ಭವಿಷ್ಯ ಹೀಗಾಯಿತಲ್ಲಾ ಅಂತ ಕಣ್ಣೀರು ಹಾಕುತ್ತಿದ್ದಾರೆ.
ಜನ ವಸತಿ ಇರುವ ಪ್ರದೇಶದಲ್ಲಿ ಹನ್ನೊಂದು ಕೆವಿ ವಿದ್ಯುತ್ ತಂತಿ ಹಾಕಬಾರದು ಎಂಬ ನಿಯಮ ವಿದ್ದರೂ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ವೈಟ್ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಏಂಜಲ್ ಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗದೇ ಕುಟುಂಬ ಕಂಗಾಲಾಗಿದೆ.