ವಿದ್ಯುತ್ ಟ್ರಾನ್ಸ್ ಫಾರ್ಮರ್ ಸ್ಫೋಟ: ತಂದೆ ಸಾವು, ಸಾವು ಬದುಕಿನಲ್ಲಿ ಮಧುಮಗಳು !
ಬೆಂಗಳೂರು, ಮಾ. 23: ಹಸಮಣೆ ಏರಬೇಕಿದ್ದ ಹೆಣ್ಣು ಮಗಳು ಸುಟ್ಟು ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ. ತನ್ನ ಮಗಳೇ ಜೀವ ಎಂದು ಉಸಿರಾಡುತ್ತಿದ್ದ ಆಕೆಯ ತಂದೆ ಮಗಳ ಮದುವೆ ಕಣ್ಣು ತುಂಬಿಕೊಳ್ಳುವ ಮೊದಲೇ ಸುಟ್ಟು ಕರಕಲಾಗಿ ಉಸಿರು ಬಿಟ್ಟಿದ್ದಾರೆ. ಬೆಸ್ಕಾಂ ವಿದ್ಯುತ್ ಟ್ರಾನ್ಸ್ ಫರ್ಮರ್ ಸ್ಫೋಟಿಸಿ ತಂದೆ ಮಗಳು ಸುಟ್ಟು ಕರಕಲಾಗಿದ್ದಾರೆ. ನವ ಮಧು ಮಗಳು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದು, ಆಕೆಯ ಗಾಯಾಳು ತಂದೆ ಕೊನೆಯುಸಿರು ಎಳೆದಿದ್ದಾರೆ.
ಇಂತಹ ಹೃದಯ ವಿದ್ರಾವಕ ಘಟನೆ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗನಹಳ್ಳಿ ಬ್ರಿಡ್ಜ್ ಸಮೀಪ ಈ ಘಟನೆ ನಡೆದಿದೆ. ಶಿವರಾಜ್ ಮೃತಪಟ್ಟ ವ್ಯಕ್ತಿ. ಚೈತನ್ಯಾ ಗಾಯಾಳು ಹೆಣ್ಣು ಮಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ.
ಚೈತನ್ಯಾಗೆ ಮದುವೆ ನಿಶ್ಚಯವಾಗಿತ್ತು. ಬರುವ ಏಪ್ರಿಲ್ ತಿಂಗಳಿನಲ್ಲಿ ನಿಶ್ಚಿತಾರ್ಥ ಏರ್ಪಡಿಸಲಾಗಿತ್ತು. ಇದರ ಜತೆಗೆ ಮುಂದಿನ ವಾರ ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮವಿತ್ತು. ಹೀಗಾಗಿ ತನ್ನ ತಂದೆ ಜತೆ ಬಟ್ಟೆ ಖರೀದಿ ಮಾಡಲು ಮಧ್ಯಾಹ್ನ ತೆರಳಿದ್ದಳು. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗನಹಳ್ಳಿ ಬ್ರಿಡ್ಜ್ ಸಮೀಪ ಹೋಗುವಾಗ ಇದ್ದಕ್ಕಿದ್ದಂತೆ ವಿದ್ಯುತ್ ಟ್ರಾನ್ಸ್ ಫರ್ಮರ್ ಸ್ಫೋಟಿಸಿದೆ. ಸ್ಫೋಟದ ರಭಸಕ್ಕೆ ಅದರಲ್ಲಿದ್ದ ಆಯಿಲ್ ಬೈಕ್ ನಲ್ಲಿ ಚಲಿಸುತ್ತಿದ್ದ ಶಿವರಾಜ್ ಮತ್ತು ಚೈತನ್ಯಾ ಅವರ ಮೇಲೆ ಬಿದ್ದು ಬೆಂಕಿ ಹೊತ್ತುಕೊಂಡಿದೆ.
ಕೂಡಲೇ ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಆಯಿಲ್ ಬಿದ್ದ ಪರಿಣಾಮ ಸಂಪೂರ್ಣ ಸುಟ್ಟಿದ್ದಾರೆ. ಇಬ್ಬರನ್ನು ವಿಕ್ಟೋರಿಯಾ ಸುಟ್ಟ ಗಾಯಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶಿವರಾಜ್ ಸಾವನ್ನಪ್ಪಿದ್ದಾರೆ. ಚೈತನ್ಯಾ ಸುಟ್ಟ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ಸಂಬಂಧ ಜ್ಞಾನ ಭಾರತಿ ಪೊಲೀಸರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬೆಸ್ಕಾಂ ನಿರ್ಲಕ್ಷ್ಯವಲ್ಲ; ಕೊಲೆ:
ಬೆಸ್ಕಾಂ ನಿರ್ಲಕ್ಷ್ಯವಲ್ಲ, ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಅಭಿಯೋಜನೆಗೆ ಒಳಪಡಿಸಬೇಕಿದೆ. ಮಂಗನಹಳ್ಳಿ ಸಮೀಪದ ವಿದ್ಯುತ್ ಟ್ರನ್ಸ್ ಫಾರ್ಮರ್ ನಲ್ಲಿ ಬೆಂಕಿ ಬರುತ್ತಿದ್ದ ವಿಚಾರವನ್ನು ಸ್ಥಳೀಯರು ಬೆಸ್ಕಾಂ ಕಚೇರಿಗೆ ಕರೆ ಮಾಡಿ ತಿಳಿಸಿದ್ದಾರೆ. ಅಷ್ಟಾಗಿಯೂ ಅದನ್ನು ಸರಿ ಪಡಿಸುವ ಪ್ರಯತ್ನ ಮಾಡಿಲ್ಲ. ಏನೂ ಅರಿಯದ ಮುಗ್ಧ ತಂದೆ ಮಗಳು ಬೈಕ್ ನಲ್ಲಿ ಹೋಗುವಾಗ ಅದೇ ಟ್ರಾನ್ಸ್ ಫರ್ಮರ್ ಸ್ಫೋಟಿಸಿ ಒಬ್ಬರ ಜೀವ ಬಲಿ ಪಡೆದಿದೆ. ಚೈತನ್ಯಾ ಬದುಕೇ ಕತ್ತಲಿಗೆ ದೂಡಿದೆ.
ಎಸ್ ಟಿ ಸೋಮಶೇಖರ್ ಸೂಚನೆ:
ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವಂತೆ ಜ್ಞಾನಭಾರತಿ ಪೊಲೀಸರಿಗೆ ಹೇಳಿದ್ದಾಗಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ವಿಪರ್ಯಾಸವೆಂದರೆ ಇಂತಹ ಒಂದಲ್ಲಾ ಒಂದು ಅವಘಡ ಸಂಭವಿಸುತ್ತಲೇ ಇವೆ. ಮುಗ್ಧ ಜೀವಗಳನ್ನು ಬೆಸ್ಕಾಂ, ಬಿಬಿಎಂಪಿ, ಜಲಮಂಡಳಿ, ಬಿಎಂಟಿಸಿ ಬಲಿ ಪಡೆಯುತ್ತಲೇ ಇವೆ. ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವ ತೆಗೆದರೆ, ಕೊಲೆ, ದಿನ ನಿತ್ಯ ಮುಗ್ಧ ಜನರ ಜೀವ ತೆಗೆಯುತ್ತಿರುವ ಬೆಸ್ಕಾಂ ವಿದ್ಯುತ್ ತಂತಿಗಳು, ಬಿಬಿಎಂಪಿ ಗುಂಡಿಗಳು, ಜಲಮಂಡಳಿ ಕಾಮಗಾರಿಗಳು, ಬಿಬಿಎಂಪಿ ಕಸದ ಲಾರಿಗಳು, ಬಿಎಂಟಿಸಿ ಬಸ್ ಗಳು ಮಾತ್ರ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಈ ರೀತಿ ಸಂಭವಿಸುವ ಪ್ರಕರಣಗಳಿಗೆ ಸಂಬಂಧಿದಂತೆ ನಿರ್ಲಕ್ಷದಡಿ ಕೇಸು ದಾಖಲಿಸುವ ಬದಲಿಗೆ ಕೊಲೆ ಪ್ರಕರಣ ದಾಖಲಿಸಬೇಕು ಆಗ ಮಾತ್ರ ಬುದ್ಧಿ ಕಲಿಯುತ್ತಾರೆ ಅಲ್ಲವೇ?