ಮಕ್ಕಳನ್ನು ಬೈಕ್ ಮುಂದೆ ಕೂರಿಸಬೇಡಿ ಎಂದ ಪೊಲೀಸರಿಗೆ ಜನರ ಉತ್ತರ ಇದು
ಬೆಂಗಳೂರು, ನವೆಂಬರ್ 22 : ಬೆಂಗಳೂರು ಪೊಲೀಸರು ಯಾವುದರಲ್ಲಿ ಸಕ್ರಿಯರಾಗಿದ್ದಾರೊ ಇಲ್ಲವೊ ಆದರೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಅದರಲ್ಲಿಯೂ ಬೆಂಗಳೂರು ಪೊಲೀಸ್ ಉನ್ನತಾಧಿಕಾರಿಗಳು ಸಾಮಾಜಿಕ ಜಾಲತಾಣಗಳನ್ನು ಸಾರ್ವಜನಿಕರೊಂದಿಗೆ ಸಂವಹನಕ್ಕಾಗಿ ಪರಿಣಾಮಕಾರಿಯಾಗಿಯೇ ಬಳಸುತ್ತಿದ್ದಾರೆ.
ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ, 25 ನಿಮಿಷದ ವಿಡಿಯೋ ನೋಡುವ ಶಿಕ್ಷೆ
ಬೆಂಗಳೂರು ಸಿಟಿ ಪೊಲೀಸ್ ಅವರ ಟ್ವಿಟರ್ ಖಾತೆಯಿಂದ ದಿನವೊಂದಕ್ಕೆ 10 ಕ್ಕೂ ಹೆಚ್ಚು ಟ್ವೀಟ್ಗಳನ್ನು ಮಾಡಲಾಗುತ್ತದೆ , ರಸ್ತೆ ನಿಯಮಗಳ ಪಾಲನೆ ಬಗ್ಗೆ ಹಾಸ್ಯದ ಮೂಲಕ ಜಾಗರೂಕತೆ ಮೂಡಿಸಲು ಪ್ರಯತ್ನ, ಕಳ್ಲಕಾಕರ ಎಚ್ಚರಿಕೆ, ಪೊಲೀಸರ ನೂತನ ಯೋಜನೆಗಳನ್ನು ಓಈ ಖಾತೆಯ ಮೂಲಕ ಸಾರ್ವಜನಿಕರಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ.
ಹಾಸ್ಯಮಯ ಮೀಮ್ ಗಳ ಮೂಲಕ ಜಾಗೃತಿ ಮೂಡಿಸುವಲ್ಲಿಯೂ ಬೆಂಗಳೂರು ಸಿಟಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇತ್ತಿಚೆಗೆ ಇಂಗ್ಲಿಷ್ ಸಿನಿಮಾ 'ಥೋರ್' ನ ಚಿತ್ರವನ್ನು ಟ್ವಿಟರ್ ನಲ್ಲಿ ಪ್ರಕಟಿಸಿ ಥೋರ್ ಕೆಲಸಕ್ಕೆ ಹೋಗಬೇಕಾದರೆ ತಪ್ಪದೆ ಹೆಲ್ಮೆಟ್ ಧರಿಸುತ್ತಾನೆ ನೀವು ಅವನನ್ನೇ ಅನುಸರಿಸಿ ಎಂದು ಟ್ವೀಟ್ ಮಾಡಿದ್ದಾರೆ. ಈ ರೀತಿಯ ನಗು ಉಕ್ಕಿಸುವ ಜೊತೆಗೆ ಮಾಹಿತಿಯನ್ನೂ ದಾಟಿಸುವ ಟ್ವೀಟ್ ಗಳನ್ನು ಸದಾ ಮಾಡುತ್ತಿರುತ್ತದೆ ಬೆಂಗಳೂರು ಸಿಟಿ ಪೊಲೀಸ್ ಟ್ವೀಟ್ ತಂಡ.
ಸಂಚಾರ ನಿಯಮ ಪಾಲಿಸದಿದ್ದರೆ ದಂಡ, ಈಶಾನ್ಯ ವಲಯ ಐಜಿಪಿ ಎಚ್ಚರಿಕೆ
ಆದರೆ ಇತ್ತೀಚೆಗೆ ಬೆಂಗಳೂರು ಸಿಟಿ ಪೊಲೀಸ್ ಮಾಡಿದ್ದ ರೀಟ್ವೀಟ್ ಒಂದಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಸಂಚಾರಿ ವಿಭಾಗದ ಹೆಚ್ವುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಅವರು ಮಗುವೊಂದು ಬೈಕ್ ನ ಟ್ಯಾಂಕ್ ಮೇಲೆ ಕೂತು ಸವಾರಿ ಹೊರಟಿರುವ ಚಿತ್ರವನ್ನು ಹಾಕಿ, 'ಮಕ್ಕಳನ್ನು ಟ್ಯಾಂಕ್ ಮೇಲೆ ಕೂರಿಸಿಕೊಂಡು ಸಂಚರಿಸಬೇಡಿ' ಎಂದು ಮಾಡಿದ್ದ ಟ್ವೀಟ್ ಅನ್ನು ಬೆಂಗಳೂರು ಸಿಟಿ ಪೊಲೀಸ್ ಟ್ವಿಟರ್ ಖಾತೆಯಿಂದ ರಿಟ್ವೀಟ್ ಮಾಡಲಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
— R Hithendra, IPS. (@AddlCPTraffic) 22 November 2017
ತರಹೇವಾರಿ ಕಮೆಂಟ್ ಮಾಡಿರುವ ಸಾರ್ವಜನಿಕರು ಬೆಂಗಳೂರು ಸಿಟಿ ಪೊಲೀಸರ ಕಾಲೆಳೆದಿದ್ದಾರೆ. ಕೆಲವರು ಟ್ವೀಟ್ ವಿರೋಧಿಸಿ ಎದುರುಟ್ವೀಟ್ ಮಾಡಿದ್ದಾರೆ. ಕೆಲವರು ಪೊಲೀಸರ ಈ ನಿಯಮವನ್ನು ಬುದ್ಧಿಹೀನ ಎಂದು ಕರೆದು ಸರಿಯಾಗಿಯೇ ಮಂಗಳಾರತಿ ಮಾಡಿದ್ದಾರೆ.
ವಿಕ್ರಮ್ ಎನ್ನುವರೊಬ್ಬರು 'ಮಕ್ಕಳನ್ನು ಮುಂದೆ ಕೂರಿಸಿಕೊಳ್ಳದೆ, ರಾಣಿ ಚೆನ್ನಮ್ಮನ ರೀತಿಯಲ್ಲಿ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಡ್ರೈವ್ ಮಾಡಬೇಕಾ' ಎಂದು ವ್ಯಂಗ್ಯದ ಮೂಲಕ ತಿವಿದಿದ್ದಾರೆ. ಮತ್ತೊಬ್ಬರು ಮಕ್ಕಳಿಗೆ ಅಪ್ಪನ ಗಾಡಿಯ ಮುಂದೆ ಹೋಗುವುದು ಖುಷಿ ಅವರ ಖುಷಿಗೆ ಯಾಕೆ ಕಲ್ಲು ಹಾಕುತ್ತೀರ ಎಂದು ಪೊಲೀಸರ ಟ್ವೀಟ್ ಅನ್ನು ಭಾವನಾತ್ಮಾಕವಾಗಿ ಟೀಕಿಸಿದ್ದಾರೆ.
'ಪೊಲೀಸರ ಕಾಯ್ದೆಗಳು ಸದಾ ಬಡವರ ವಿರುದ್ಧವಾಗಿಯೇ ಇರುತ್ತವೆ, ಅವರು ಸದಾ ಮಧ್ಯಮ ವರ್ಗದ ಜನರನ್ನೇ ಗುರಿಯಾಗಿರಿಸಿಕೊಂಡು ನಿಯಮ ರೂಪಿಸುತ್ತಾರೆ' ಎಂದು ಪೊಲೀಸರು ಮಾಡುವ ತಾರತಮ್ಯದೆಡೆಗೆ ಹೋರಾಟದ ಮಾದರಿಯಲ್ಲಿ ಟೀಕಿಸಿರುವವರು ಶ್ರೀಕಾಂತ್.
ಇನ್ನು ಕೆಲವರು ಪೊಲೀಸರ ಟ್ವೀಟ್ ಗೆ ಬೆಂಬಲಿಸಿದ್ದಾರೆ ಆದರೆ ಜೊತೆಗೆ ಸ್ವಲ್ಪ ಬದಲಾವಣೆಯನ್ನೂ ಸೂಚಿಸಿದ್ದಾರೆ. ಮಕ್ಕಳನ್ನು ಮುಂದೆ ಕೂರಿಸಿಕೊಂಡರೆ ತಪ್ಪಿಲ್ಲ ಆದರೆ ಅವರಿಗೆ ಹೆಲ್ಮೆಟ್ ಹಾಕಿದರೆ ಉತ್ತಮ, ಆದರೆ ಕೆಲವು ಪೋಷಕರು ತಾವಷ್ಟೆ ಹೆಲ್ಮೆಟ್ ಹಾಕಿಕೊಂಡು ಮಕ್ಕಳನ್ನು ಹಾಗೆ ಬಿಟ್ಟಿರುತ್ತಾರೆ ಎಂದಿದ್ದಾರೆ ರಾಕೇಶ್ ಕಸಬಾ.
ಯುವಕ ಶ್ರೀನಿವಾಸ ನೀಲಮೇಘ "ಮಕ್ಕಳನ್ನು ಬೈಕ್ ನಲ್ಲಿ ಕೂರಿಸಿಕೊಳ್ಳಬಾರದು ಎಂದಾದರೆ ಅದಕ್ಕಾಗಿ ಕಾರು ತಗೋಬೇಕಾ ಹೇಗೆ?' ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ.
ಪಾಪ ಪೊಲೀಸರು ಮಕ್ಕಳ ಹಿತ ಗಮನದಲ್ಲಿಟ್ಟುಕೊಂಡು ಮಾಡಿದ ಟ್ವೀಟ್ ಈಗ ಅವರಿಗೆ ಮುಳುವಾಗಿದೆ.