ಡೆಂಘೀ ಮಹಾಮಾರಿಯ ಆಕ್ರಮಣ, ನಿದ್ರೆಯಿಂದೇಳದ ಬಿಬಿಎಂಪಿ
ಬೆಂಗಳೂರು, ಆಗಸ್ಟ್ 09: ಬೆಂಗಳೂರಿನಲ್ಲಿ ಕುಳಿತು ಚಂದ್ರನಲ್ಲಿ ಜನರು ವಾಸಿಸಲು ಯೋಗ್ಯವಾದ ವಾತಾವರಣ ಇದೆಯೇ ಎಂದು ಸಂಶೋಧನೆ ನಡೆಸುತ್ತಿರುವ ಈ ಕಾಲದಲ್ಲಿ, ಬೆಂಗಳೂರಿನಲ್ಲಿಯೇ ಬದುಕಲು ಆಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ. ಬಿಬಿಎಂಪಿಯ ಕಣ್ಣು ಮತ್ತು ಕಿವಿಗಳು ವೈಪಲ್ಯವಾಗಿ, ಕೈ-ಕಾಲುಗಳು ಊನವಾಗಿರುವುದರಿಂದಾಗಿ ಬೆಂಗಳೂರಿನಾದ್ಯಂತ ಕಸದ ರಾಶಿ, ಕೊಳಚೆಯದ್ದೇ ಅಧಿಪತ್ಯ ಶುರುವಾಗಿದೆ ಎಂದು ಆಮ್ ಆದ್ಮಿ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.
ಗುಂಡಿ ಬಿದ್ದ ರಸ್ತೆಗಳಲ್ಲಿ ಮಳೆಯ ನೀರು ನಿಂತು, ರಸ್ತೆಗಳೇ ಸೊಳ್ಳೆಗಳು ಮತ್ತು ಸಾಂಕ್ರಮಿಕ ವೈರಾಣುಗಳ ವಾಸಸ್ಥಾನವಾಗಿ ಪರಿಣಮಿಸುತ್ತಿವೆ. ಇದರಿಂದಾಗಿ ಬೆಂಗಳೂರಿನಾದ್ಯಂತ ಡೆಂಗ್ಯೂ ಜ್ವರ ಮಹಾಮಾರಿಯಂತೆ ತಾಂಡವವಾಡುತ್ತಿದೆ. ಈಗಾಗಲೇ 2019ರ ಜನವರಿಯಿಂದ ಇಲ್ಲಿಯವರೆಗೆ 3,994 ಡೆಂಘೀ ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಪತ್ತೆಯಾಗಿವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಡೆಂಘೀ ಜ್ವರಕ್ಕೆ ಬಲಿಯಾಗುತ್ತಿದ್ದರೂ ಸೂಕ್ತ ಕ್ರಮಗಳನ್ನು ಕೈಗೊಂಡು ಡೆಂಘೀ ವೈರಾಣುವನ್ನು ನಿಯಂತ್ರಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ.
ಬೆಂಗಳೂರಲ್ಲಿ ಡೆಂಗ್ಯೂ ಹೆಚ್ಚಳ: ಎನ್ಎಸ್1 VS ಎಲಿಸಾ ಪರೀಕ್ಷೆ
ಈಗಾಗಲೇ ಬೆಂಗಳೂರಿನ 62 ವಾರ್ಡ್ಗಳು ಡೆಂಘೀ ಪೀಡಿತ ವಾರ್ಡ್ಗಳೆಂದು ಘೋಷಿಸಲ್ಪಟ್ಟಿವೆ. ಒಂದು ಕೋಟಿಗೂ ಅಧಿಕ ಜನರಿರುವ ಬೆಂಗಳೂರಿನಲ್ಲಿ ಶೇ.50ಕ್ಕೂ ಹೆಚ್ಚು ಜನರು ಆರ್ಥಿಕ ಅಸಮರ್ಥತೆಯಿಂದ ಬದುಕುತ್ತಿದ್ದು, 15 ಲಕ್ಷ ಜನರು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ನಗರದಲ್ಲಿ ವಾಸಿಸುತ್ತಿರುವ ಜನರ ಆರೋಗ್ಯಕ್ಕಾಗಿ ಬಿಬಿಎಂಪಿಯು 2018-19ನೇ ಸಾಲಿನಲ್ಲಿ 100ಗಿಂತ ಹೆಚ್ಚು ಅನುದಾನವನ್ನು ಮೀಸಲಿಟ್ಟಿದ್ದು ಕೇವಲ 31 ಕೋಟಿ ರೂಗಳನ್ನು ಖರ್ಚುಮಾಡಿದೆ.
ಇದರಲ್ಲಿ ಸರಾಸರಿ 29 ರೂಗಳನ್ನಷ್ಟೇ ಒಬ್ಬ ವ್ಯಕ್ತಿಯ ಆರೋಗ್ಯಕ್ಕೆ ಖರ್ಚು ಮಾಡಿದ್ದು ಆಸ್ಪತ್ರೆಗಳು, ಉಪಕರಣಗಳು, ಔಷಧಿಗಳ ಖರ್ಚನ್ನೂ ಈ ಹಣವೇ ಒಳಗೊಂಡಿದೆ. ಬಿಬಿಎಂಪಿಯು ಆರೋಗ್ಯ ಕ್ಷೇತ್ರದಲ್ಲಿ ಹೊಂದಿರುವ ಇಂತಹ ಬೇಜವಾಬ್ದಾರಿತನ ಧೋರಣೆಯಿಂದಾಗಿ ಜನರು ಅನರೋಗ್ಯಕ್ಕೆ ತುತ್ತಾಗುತ್ತಿದ್ದು, ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಎಎಪಿ ಬೆಂಗಳೂರಿನ ಅಧ್ಯಕ್ಷರಾದ ಮೋಹನ್ ದಾಸರಿಯವರು ಆರೋಪಿಸಿದ್ದಾರೆ.
ಡೆಂಗ್ಯೂ ರೋಗದ ಲಕ್ಷಣ, ಮುನ್ನೆಚ್ಚರಿಕೆ, ಚಿಕಿತ್ಸೆ ಕುರಿತು ಮಾಹಿತಿ
ಡೆಂಘೀ ಸೋಂಕಿನ ಅಬ್ಬರ ಈ ಹಂತಕ್ಕೆ ತಲುಪಿದ್ದರೂ ಬೆಂಗಳೂರಿನ ಪರಿಸ್ಥಿತಿಯನ್ನು ನಿಯಂತ್ರಿಸದೆ ಅಧಿಕಾರದ ಹಮಲಿನಲ್ಲಿ ತೇಲಿತ್ತಿರುವ ಬಿಬಿಎಂಪಿ ಡೆಂಘೀ ನಿಯಂತ್ರಣಕ್ಕೆ ಮುಂದಾಗಬೇಕು. ರಸ್ತೆಗಳಲ್ಲಿರುವ ಗುಂಡಿಗಳನ್ನು ತುರ್ತಾಗಿ ಮುಚ್ಚಬೇಕು. ಫುಟ್ಪಾತ್ಗಳು ಕಿತ್ತು ಕೆಸರು ಗದ್ದೆಗಳಂತಾಗಿದ್ದು, ಅವುಗಳನ್ನೂ ಸರಿಪಡಿಸಬೇಕು. ಕಸವನ್ನು ಪ್ರತಿನಿತ್ಯ ವಿಲೇವಾರಿ ಮಾಡಬೇಕು. ಬೀದಿಗಳಲ್ಲಿ ಕೊಳಚೆ ನೀರು ನಿಲ್ಲದಂತೆ ಬೀದಿಗಳನ್ನು ಸ್ವಚ್ಛಗೊಳಿಸಬೇಕು.
ಮಂಗಳೂರಿನಲ್ಲಿ ಬೇವಿನ ಎಣ್ಣೆಗೆ ಭಾರಿ ಡಿಮ್ಯಾಂಡ್; ಯಾಕಿರಬಹುದು?
ಡೆಂಘೀ ವೈರಾಣುವನ್ನು ನಾಶಪಡಿಸುವ ಔಷಧಿಗಳನ್ನು ಸಿಂಪಡಿಸಬೇಕು. ಆರೋಗ್ಯಕ್ಕೆ ಅನುದಾವನ್ನು ಹೆಚ್ಚಿಸಿ, ಸಮರ್ಪಕವಾಗಿ ಬಳಸಬೇಕು. ಶೀಘ್ರವೇ ಈ ಕೆಲಸಗಳನ್ನು ಮಾಡದಿದ್ದಲ್ಲಿ ಬಿಬಿಎಂಪಿಗೆ ಚುರುಕು ಮುಟ್ಟಿಸುಂತಹ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಆಮ್ ಆದ್ಮಿ ಪಾರ್ಟಿ ಎಚ್ಚರಿಕೆ ನೀಡಿದೆ.