ಚಂಡಮಾರುತ ಪ್ರಭಾವ, ಬಿಬಿಎಂಪಿ ವ್ಯಾಪ್ತಿಯಲ್ಲಿ 2 ದಿನ ಮಳೆ
ಬೆಂಗಳೂರು, ಡಿ. 6: ಚೆನ್ನೈ ಮತ್ತು ಕೇರಳ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಇನ್ನೆರಡು ದಿನಗಳಲ್ಲಿ ಯೆಲ್ಲೂ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬಂಗಾಳ ಕೊಲ್ಲಿ ವಾಯುಭಾರ ಕುಸಿತದಿಂದ ಈ ರಾಜ್ಯಗಳಲ್ಲಿ ಮತ್ತೆ ಮಳೆಯಾಗಲಿದ್ದು, ಜೊತೆಗೆ ಬೆಂಗಳೂರಿನಲ್ಲೂ ಇನ್ನೆರಡು ದಿನ ಜೋರಾಗಿ ಗಾಳಿ ಬೀಸಲಿದ್ದು, ಹೆಚ್ಚು ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಯು ಭಾರ ಕುಸಿತದಿಂದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ದಕ್ಷಿಣ ಒಳನಾಡಿನ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಕೊಡಗು, ತುಮಕೂರು, ಮೈಸೂರು, ರಾಮನಗರ, ಮಂಡ್ಯದಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬುರೆವಿ ಚಂಡಮಾರುತ : ತಮಿಳುನಾಡಿನಲ್ಲಿ ಹೆಚ್ಚು ಮಳೆ ಸಾಧ್ಯತೆ
ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿ ಚಂಡಮಾರುತದ ಪ್ರಭಾವ ತಗ್ಗಿದೆ. ಆದರೂ ತಮಿಳುನಾಡು, ಕೇರಳ ಕರಾವಳಿ ಭಾಗ, ಕರ್ನಾಟಕದ ಗಡಿಭಾಗದ ಜಿಲ್ಲೆಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಯಂತ್ರಣ ಇಲಾಖೆ ಸೂಚನೆ ನೀಡಿದೆ.
ಮಳೆ ಮುನ್ಸೂಚನೆ: ರಾಜ್ಯದ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧರಣ ಮಳೆ. ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಬಿಬಿಎಂಪಿ ಮಳೆ ಮುನ್ಸೂಚನೆ: ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಚಳಿ ಹೆಚ್ಚಳ: ಬೆಂಗಳೂರಿನಲ್ಲಿ 21 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಇನ್ನೆರಡು ದಿನ ಮೋಡ ಕವಿದ ವಾತಾವರಣ ಹಾಗೂ ಇದೇ ತಾಪಮಾನ ಇರಲಿದೆ. ದಾವಣಗೆರೆಯಲ್ಲಿಅತಿ ಕಡಿಮೆ ಅಂದರೆ 11.0 ಡಿಗ್ರಿ ಸೆಕ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಉತ್ತರ ಭಾಗದಲ್ಲಿ ಒಣಹವೆ ಮುಂದುವರೆದಿದೆ.
Recommended Video