ಬೆಂಗಳೂರು ಗಲಭೆ: ಸತ್ಯ ಶೋಧನಾ ಸಮಿತಿ ವರದಿಯಲ್ಲಿ ಏನಿದೆ?
ಬೆಂಗಳೂರು, ಸೆಪ್ಟೆಂಬರ್ 4: ಡಿಜೆ ಹಳ್ಳಿ ಮತ್ತು ಕೆಜಿಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ರಚಿಸಿದ್ದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮದನ್ ಗೋಪಾಲ್ ನೇತೃತ್ವದ ಸತ್ಯ ಶೋಧನಾ ಸಮಿತಿಯು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಶುಕ್ರವಾರ ವರದಿ ಸಲ್ಲಿಸಿತು.
Recommended Video
ಸುಮಾರು 48 ಪುಟಗಳ ತನ್ನ ವರದಿಯಲ್ಲಿ ಸಮಿತಿಯು ಆಗಸ್ಟ್ 11ರ ರಾತ್ರಿ ನಡೆದ ಘಟನೆಯ ಸುತ್ತಲಿನ ಅಂಶಗಳು, ತನ್ನ ಗ್ರಹಿಕೆಗಳು, ಶಿಫಾರಸುಗಳು, ಘಟನೆ ಕುರಿತಾದ ಮಾಧ್ಯಮ ಸುದ್ದಿಗಳು ಹಾಗೂ ಸ್ಥಳೀಯರು ಮತ್ತು ಅಧಿಕಾರಿಗಳೊಂದಿಗೆ ನಡೆಸಿದ ಸಂವಹನದಿಂದ ಕಂಡುಕೊಂಡ ಸಂಗತಿಗಳನ್ನು ಪ್ರಸ್ತಾಪಿಸಿದೆ. ಇಡೀ ಘಟನೆಯನ್ನು ವಿಶ್ಲೇಷಣೆ ಮಾಡಿದೆ.
ಡಿಜೆ ಹಳ್ಳಿ ಗಲಭೆ ಪ್ರಕರಣ: ಮೂರು ಎಸ್ಡಿಪಿಐ ಕಚೇರಿಗಳ ಮೇಲೆ ಸಿಸಿಬಿ ದಾಳಿ
ಸುಮಾರು 36 ಸರ್ಕಾರಿ ವಾಹನಗಳು, 300 ಖಾಸಗಿ ವಾಹನಗಳು ಹಾಗೂ ಅನೇಕ ಮನೆಗಳಿಗೆ ಹಾನಿಯಾಗಿದೆ. ಈ ಹಾನಿಯ ಮೊತ್ತು ಅಂದಾಜು 10-15 ಕೋಟಿ ರೂ ಎಂದು ಸಮಿತಿ ಹೇಳಿದೆ. ಸಮಿತಿಯು ಗಲಭೆ ಪೀಡಿತ ಪ್ರದೇಶಕ್ಕೆ ತೆರಳಿ ಅದರಿಂದ ಸಂತ್ರಸ್ತರಾದ ಅನೇಕ ಜನರು ಮತ್ತು ಪ್ರಮುಖ ವ್ಯಕ್ತಿಗಳ ಜತೆ ಮಾತುಕತೆ ನಡೆಸಿದೆ. ಲಭ್ಯವಿರುವ ಸಾಕ್ಷ್ಯಗಳನ್ನು ಪರಿಗಣಿಸಿ ವರದಿ ನೀಡಿರುವುದಾಗಿ ಸಮಿತಿ ತಿಳಿಸಿದೆ.
ಗಲಭೆಗೆ ಸಂಬಂಧಿಸಿದಂತೆ ಸಮಿತಿ ಕಂಡುಕೊಂಡಿರುವ ವಿಷಯಗಳು ಮತ್ತು ಅದು ನೀಡಿರುವ ಸಲಹೆಗಳ ವಿವರ ಇಲ್ಲಿದೆ
ಸಮಿತಿ ಗ್ರಹಿಸಿದ ಸಂಗತಿಗಳು
* ಈ ಗಲಭೆ ಪೂರ್ವ ನಿರ್ಧಾರಿತ ಮತ್ತು ಸಂಘಟಿತ.
* ಈ ಪ್ರದೇಶದ ಕೆಲವು ನಿರ್ದಿಷ್ಟ ಹಿಂದೂಗಳನ್ನು ಗುಂಪು ಮುಖ್ಯವಾಗಿ ಗುರಿಯನ್ನಾಗಿರಿಸಿಕೊಂಡಿತ್ತು.
* ಸರ್ಕಾರದ ಮೇಲಿನ ಜನರ ನಂಬಿಕೆಯನ್ನು ಕುಗ್ಗಿಸುವಂತೆ ಮಾಡುವ ಉದ್ದೇಶ ಇದರ ಹಿಂದೆ ಇದ್ದಿದ್ದರಿಂದ ಇಡೀ ಘಟನೆಯನ್ನು ಸರ್ಕಾರದ ವಿರುದ್ಧ ನಡೆದ ಗಲಭೆ ಎಂದು ಪರಿಗಣಿಸಬಹುದಾಗಿದೆ.
ಸ್ಥಳೀಯರಿಗೆ ಮಾಹಿತಿ ಇತ್ತು
* ಈ ಗಲಭೆಯಲ್ಲಿ ಸ್ಥಳೀಯ ಜನರೂ ಭಾಗಿಯಾಗಿದ್ದರು ಎನ್ನುವುದನ್ನು ಎಫ್ಐಆರ್ಗಳು ಹಾಗೂ ಕೆಲವು ಸಂತ್ರಸ್ತರೊಂದಿಗಿನ ಮಾತುಕತೆಯಿಂದ ತಿಳಿಯಬಹುದಾಗಿದೆ. ಈ ಗಲಭೆಯಲ್ಲಿ ಸ್ಥಳೀಯರು ಭಾಗಿಯಾಗಿರುವುದು ಮಾತ್ರವಲ್ಲ, ಅವರಿಗೆ ಇದರ ಬಗ್ಗೆ ಮೊದಲೇ ಮಾಹಿತಿ ಇತ್ತು ಎನ್ನುವುದು ಸಮಿತಿಯ ಅಭಿಪ್ರಾಯವಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ಗೆ ಕುಮಾರಸ್ವಾಮಿ ಬಹಿರಂಗ ಪತ್ರ
ಇದು ಕೋಮು ದ್ವೇಷದ ಕೃತ್ಯ
* ರಾಜಕೀಯ ದ್ವೇಷದ ಕಾರಣದಿಂದ ಈ ಘಟನೆ ನಡೆದಿದೆ ಎಂದು ಬಿಂಬಿಸಲು ಪ್ರಯತ್ನಿಸಿದರೂ ಇದು ಖಡಾಖಂಡಿತವಾಗಿ ಕೋಮು ಪ್ರಚೋದಿತ ಉದ್ದೇಶ ಹೊಂದಿತ್ತು. ದಾಳಿಗೆ ಒಳಗಾಗಿರುವ ಮನೆಗಳು ಮತ್ತು ಗುರಿಯಾಗಿರಿಸಿಕೊಂಡ ಜನರ ಆಧಾರದಲ್ಲಿ, ಜನಸಂಖ್ಯಾ ಅಸ್ತಿತ್ವವನ್ನು ಬದಲಿಸುವ ಮತ್ತು ಈ ಪ್ರದೇಶವನ್ನು ಮುಸ್ಲಿಂ ಬಾಹುಳ್ಯದ ಪ್ರದೇಶವನ್ನಾಗಿ ಬದಲಿಸುವ ಎಂಬ ಉದ್ದೇಶವನ್ನು ಹೊಂದಿರುವ ಭಯವೂ ವ್ಯಕ್ತವಾಗಿದೆ.
* ಈ ಘಟನೆಯ ಸಂಚು ರೂಪಿಸುವಲ್ಲಿ ಮತ್ತು ಗಲಭೆ ನಡೆಸುವುದರಲ್ಲಿ ಎಸ್ಡಿಪಿಐ ಹಾಗೂ ಪಿಎಫ್ಐ ಭಾಗಿಯಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಸಮಿತಿಯ ಶಿಫಾರಸುಗಳು
* ಸಾರ್ವಜನಿಕ ಮತ್ತು ಖಾಸಗಿ ವ್ಯಕ್ತಿಗಳಿಗೆ ಸೇರಿದ ಆಸ್ತಿಗಳಿಗೆ ಉಂಟಾದ ಎಲ್ಲ ನಷ್ಟದ ಮೊತ್ತವನ್ನೂ ಗಲಭೆಕೋರರಿಂದಲೇ ವಸೂಲಿ ಮಾಡಬೇಕು.
* ಈ ಗಲಭೆಯ ಸ್ವರೂಪವು ದೆಹಲಿ ಮತ್ತು ಸ್ವೀಡನ್ನಲ್ಲಿ ನಡೆದಂತೆಯೇ ಇದೆ. ಹೀಗಾಗಿ ಈ ಘಟನೆಯನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಬೇಕು ಮತ್ತು ಇದನ್ನು ಪ್ರತ್ಯೇಕ ಅಥವಾ ಸ್ಥಳೀಯ ಮಟ್ಟದ ಗಲಭೆ ಎಂದು ಪರಿಗಣಿಸಬಾರದು.
ಬೆಂಗಳೂರು ಗಲಭೆ: ಬಂಧಿತ ವಾಜೀದ್ ಪಾಷಾಗೂ ನಮಗೂ ಸಂಬಂಧವೇ ಇಲ್ಲ ಎಂದ ಜೆಡಿಎಸ್
ಹಣ ನೀಡಿದವರನ್ನು ಪತ್ತೆ ಹಚ್ಚಬೇಕು
* ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದ ವ್ಯಕ್ತಿಗಳು ಮತ್ತು ಧಾರ್ಮಿಕ ಉಗ್ರವಾದಿ ಸಂಘಟನೆಗಳಿಗೆ ಹಣಕಾಸಿನ ನೆರವು ಒದಗಿಸಿದವರನ್ನು ಪತ್ತೆಹಚ್ಚಬೇಕು ಹಾಗೂ ಎನ್ಐಎ ನೆರವಿನೊಂದಿಗೆ ಅವರ ಮೇಲೆ ನಿರಂತರ ನಿಗಾ ವಹಿಸಬೇಕು.
ಯೋಜನೆಗಳನ್ನು ರೂಪಿಸಬೇಕು
* ಕೆಲವು ಪ್ರದೇಶಗಳು ಕೋಮು ಉದ್ವಿಗ್ನತೆ ಸಂಭವಿಸುವ ಸಾಧ್ಯತೆ ಇರುವುದರಿಂದ ಪೊಲೀಸರು ಮೊದಲೇ ಅವುಗಳನ್ನು ಗುರುತಿಸಿ ಅಂತಹ ಉದ್ವಿಗ್ನ ಸ್ಥಿತಿಯನ್ನು ಹತ್ತಿಕ್ಕಲು ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆಗಳನ್ನು ರೂಪಿಸಬೇಕು.
* ಯಾವುದೇ ಧರ್ಮ, ಜನಾಂಗ, ವರ್ಗ, ಜಾತಿ ಇತ್ಯಾದಿಗಳ ವಿರುದ್ಧ ದ್ವೇಷಪೂರಿತ ಹೇಳಿಕೆಗಳನ್ನು ಹಂಚಿಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ಬಳಸದಂತೆ ತಡೆಯಲು ಸೈಬರ್ ಘಟಕಗಳನ್ನು ಸ್ಥಾಪಿಸಬೇಕು.
ಗುಪ್ತಚರ ಇಲಾಖೆ ಬಲ
* ಮಾದಕ ವಸ್ತುಗಳ ಹಾವಳಿಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದು ಅಗತ್ಯವಾಗಿದೆ.
* ಈ ರೀತಿಯ ಯಾವುದೇ ಗಲಭೆ ಸಂಭವಿಸದಂತೆ ತಡೆಯಲು ಪೊಲೀಸ್ ಇಲಾಖೆಯ ವಿವಿಧ ಮಟ್ಟಗಳಲ್ಲಿ ಗುಪ್ತಚರ ವಿಭಾಗವನ್ನು ಬಲಪಡಿಸಬೇಕಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ ಬದಲಾವಣೆ
* ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ದಲ್ಲಿನ ಸೆಕ್ಷನ್ 66Aಅನ್ನು ರದ್ದುಗೊಳಿಸುವುದರೊಂದಿಗೆ ಯಾವುದೇ ಧರ್ಮ, ಜಾತಿ, ಜನಾಂಗ, ವರ್ಗ, ಅಥವಾ ಜನರ ಸಂಘಟನೆಯ ವಿರುದ್ಧ ನಿಂದನಕಾರಿ, ಅವಹೇಳನ ಅಥವಾ ದ್ವೇಷದ ವಿಚಾರಗಳನ್ನು ಹರಡದಂತೆ ತಡೆಯಲು ಮತ್ತು ಶಿಕ್ಷೆಗೆ ಒಳಪಡಿಸುವ ಕಾನೂನನ್ನು ಜಾರಿಗೆ ತರಬೇಕಿದೆ ಎಂದು ಸಮಿತಿ ಶಿಫಾರಸು ಮಾಡಿದೆ.