ಕಾಂಗ್ರೆಸ್ ಮುಖವಾಡದ ಬಗ್ಗೆ ಸಚಿವ ಡಾ.ಕೆ.ಸುಧಾಕರ್ ಟ್ವೀಟ್
ಬೆಂಗಳೂರು, ಆಗಸ್ಟ್.14: ಬೆಂಗಳೂರಿನ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಮತ್ತು ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ)ಯಲ್ಲಿ ದಾಂಧಲೆ ಪ್ರಕರಣದಿಂದ ಕಾಂಗ್ರೆಸ್ ಮುಖವಾಡ ಕಳಚಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಿಡಿ ಕಾರಿದ್ದಾರೆ.
"ಕ್ರೌರ್ಯದ ಮನಸ್ಥಿತಿಯ ದ್ಯೋತಕವಾಗಿ ಪುಂಡಾಟಿಕೆ ಮೆರೆದಿದ್ದ ಬಿಬಿಎಂಪಿ ಸದಸ್ಯೆ ಇರ್ಷಾದ್ ಬೇಗಂ ಪತಿ ಕಲೀಂ ಪಾಷರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೀಚಕರ ಹಡೆಮುರಿ ಕಟ್ಟುವಲ್ಲಿ ನಮ್ಮ ಸರ್ಕಾರ ಸಮರ್ಥವಿದೆ. ಕಾಂಗ್ರೆಸ್ನವರಿಗೆ ಈಗಲಾದ್ರೂ ನಿಜಸತ್ಯದ ಅರಿವಾಯಿತೇ" ಎಂದು ಟ್ವಿಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು ಹಿಂಸಾಚಾರ: ಕೆಜಿ ಹಳ್ಳಿ ಕಾರ್ಪೋರೇಟರ್ ಪತಿ ಕಲೀಂ ಪಾಷಾ ಬಂಧನ
ಗುರುವಾರ ತಡರಾತ್ರಿಯಷ್ಟೇ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ 60 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಕೆಜಿ ಹಳ್ಳಿ ಕಾರ್ಪೋರೇಟರ್ ಇರ್ಷಾದ್ ಬೇಗಂ ಪತಿ ಕಲೀಂ ಪಾಷಾರನ್ನು ಕೂಡ ಪೊಲೀಸರು ಬಂಧಿಸಿದ್ದರು.
ಕಲೀಂ ಪಾಷಾ ಬಂಧನದ ವಿಡಿಯೋ ಪೋಸ್ಟ್:
ಬಿಬಿಎಂಪಿ ಸದಸ್ಯೆ ಇರ್ಷಾದ್ ಬೇಗಂ ಪತಿ ಕಲೀಂ ಪಾಷಾರನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಾಂಗ್ರೆಸ್ ವಿರುದ್ಧ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಆಗಸ್ಟ್.11ರಂದು ನಡೆದ ಗಲಾಟೆಗೂ ಮುನ್ನ ಕಲೀಂ ಪಾಷಾ ಮೊದಲು ಠಾಣೆಯ ಬಳಿ ತೆರಳಿ ಪ್ರಚೋದನಕಾರಿಯಾಗಿ ಮಾತನಾಡಿದ್ದರು ಎನ್ನಲಾಗಿದೆ. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಕೊಂಡು ದಾಂಧಲೆ ಶುರುವಾಗುತ್ತಿದ್ದಂತೆ ಅಲ್ಲಿಂದ ಕಲೀಂ ಪಾಷಾ ಪರಾರಿಯಾಗಿದ್ದರು.
ಡಿಜೆಹಳ್ಳಿ, ಕೆಜೆಹಳ್ಳಿ ಗಲಭೆಯಲ್ಲಿಕಾಂಗ್ರೆಸ್ ಪಕ್ಷದ ಮುಖವಾಡ ಕಳಚಿದೆ. ಕ್ರೌರ್ಯದ ಮನಃಸ್ಥಿತಿಯ ದ್ಯೋತಕವಾಗಿ ಪುಂಡಾಟಿಕೆ ಮೆರೆದಿದ್ದ ಬಿಬಿಎಂಪಿ ಸದಸ್ಯೆ ಇರ್ಷಾದ್ ಬೇಗಂ ಪತಿ ಕಲೀಂಪಾಷರನ್ನುಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೀಚಕರ ಹಡೆಮುರಿಕಟ್ಟುವಲ್ಲಿ ನಮ್ಮಸರ್ಕಾರ ಸಮರ್ಥವಿದೆ. ಕಾಂಗ್ರೆಸ್ನವರಿಗೆ ಈಗಲಾದ್ರೂ ನಿಜಸತ್ಯದ ಅರಿವಾಯಿತೇ pic.twitter.com/jwEdHiYQ7M
— Dr Sudhakar K (@mla_sudhakar) August 14, 2020
ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ಪರಿಸ್ಥಿತಿ ಕೊಂಚ ಹತೋಟಿಗೆ ಬಂದ ಬಳಿಕ ಮತ್ತೆ ಸ್ಥಳಕ್ಕೆ ತೆರಳಿ ಪೊಲೀಸರಿಗೆ ಸಹಕಾರ ನೀಡುವಂತೆ ನಟಿಸಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಕಲೀಂ ಪಾಷಾರನ್ನು ಬಂಧಿಸಿರುವ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.