ಬೆಂಗಳೂರು ಹಿಂಸಾಚಾರ: ಕೆಜಿ ಹಳ್ಳಿ ಕಾರ್ಪೋರೇಟರ್ ಪತಿ ಕಲೀಂ ಪಾಷಾ ಬಂಧನ
ಬೆಂಗಳೂರು, ಆಗಸ್ಟ್.14: ಬೆಂಗಳೂರಿನ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಮತ್ತು ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ)ಯಲ್ಲಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಜಿ.ಹಳ್ಳಿ ಕಾರ್ಪೋರೇಟರ್ ಇರ್ಷಾದ್ ಬೇಗಂ ಅವರ ಪತಿ ಕಲೀಂ ಪಾಷಾರನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್.11ರಂದು ನಡೆದ ಗಲಾಟೆಗೂ ಮುನ್ನ ಕಲೀಂ ಪಾಷಾ ಮೊದಲು ಠಾಣೆಯ ಬಳಿ ತೆರಳಿ ಪ್ರಚೋದನಕಾರಿಯಾಗಿ ಮಾತನಾಡಿದ್ದರು ಎನ್ನಲಾಗಿದೆ. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಕೊಂಡು ದಾಂಧಲೆ ಶುರುವಾಗುತ್ತಿದ್ದಂತೆ ಅಲ್ಲಿಂದ ಕಲೀಂ ಪಾಷಾ ಪರಾರಿಯಾಗಿದ್ದರು.
ಎಸ್ಡಿಪಿಐ ಕಾರ್ಯದರ್ಶಿ ಬಂಧನ: ಗೃಹ ಸಚಿವ ಬೊಮ್ಮಾಯಿ
ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ಪರಿಸ್ಥಿತಿ ಕೊಂಚ ಹತೋಟಿಗೆ ಬಂದ ಬಳಿಕ ಮತ್ತೆ ಸ್ಥಳಕ್ಕೆ ತೆರಳಿ ಪೊಲೀಸರಿಗೆ ಸಹಕಾರ ನೀಡುವಂತೆ ನಟಿಸಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆ.ಜಿ.ಹಳ್ಳಿ ಕಾರ್ಪೋರೇಟರ್ ಇರ್ಷಾದ್ ಬೇಗಂ ಅವರ ಪತಿ ಕಲೀಂ ಪಾಷಾರನ್ನು ಬಂಧಿಸಿರುವ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಆಗಸ್ಟ್.11ರಂದು ನಡೆದ ದಾಂಧಲೆ ಸ್ವರೂಪ:
ಬೆಂಗಳೂರಿನ ಕಾವಲ್ ಬೈರಸಂದ್ರದಲ್ಲಿ ಇರುವ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಎದುರು ಮೊದಲು ಗಲಾಟೆ ಶುರುವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮುಂದಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಉದ್ರಿಕ್ತರ ಗುಂಪು ಸೇರಿತು. ಪೊಲೀಸರ ಮೇಲೆಯೇ ಕಲ್ಲು ಮತ್ತು ಬಾಟಲಿ ತೂರಾಟ ನಡೆಸಿದರು. ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ವಾಹನಕ್ಕೆ ಬೆಂಕಿ ಹಚ್ಚಿದರು, ಡಿ.ಜಿ.ಹಳ್ಳಿಯಲ್ಲೂ ಉದ್ರಿಕ್ತರ ಆಕ್ರೋಶಕ್ಕೆ ಬೀದಿ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳೆಲ್ಲ ಹೊತ್ತಿ ಉರಿದವು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು, ಗಾಳಿಯಲ್ಲಿ ಗುಂಡು ಹಾರಿಸಿದ್ದರು.