ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರ ಮಿಡ್ ನೈಟ್ ಕಾರ್ಯಾಚರಣೆ ರಹಸ್ಯ!
ಬೆಂಗಳೂರು, ಆಗಸ್ಟ್.14: ಬೆಂಗಳೂರಿನ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಮತ್ತು ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ)ಯಲ್ಲಿ ದಾಂಧಲೆ ಪ್ರಕರಣಕ್ಕೆ ಸಂಬಂಧ ಆರೋಪಿಗಳ ಬಂಧನಕ್ಕೆ ಪೊಲೀಸರು ಮಿಡ್ ನೈಟ್ ಕಾರ್ಯಾಚರಣೆ ನಡೆಸಿದ್ದರು.
ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ಡಿಸಿಪಿ ರವಿಕುಮಾರ್ ಹಾಗೂ ಸಿಸಿಬಿ ಡಿಸಿಪಿ ಕುಲ್ ದೀಪ್ ಕುಮಾರ್ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆಯನ್ನು ನಡೆಸಲಾಯಿತು. ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು 60 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಹುದ್ದೆಗಳು ಬಿಕರಿಯಾದ ನಂತರ 'ಊರಿಗೆ ಬಿದ್ದ ಬೆಂಕಿ'ಯ ಕುರಿತು...!
ಕೆ ಜಿ ಹಳ್ಳಿ ಮತ್ತು ಡಿ ಜೆ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ದಾಂಧಲೆ ನಡೆಸಿದ ಆರೋಪಿಗಳ ಬಂಧನಕ್ಕೆ ತೆರಳಿದ್ದ ವೇಳೆ ಬಿಗ್ ಹೈಡ್ರಾಮಾ ನಡೆದಿದೆ. ಪೊಲೀಸರ ಎದುರಿನಲ್ಲೇ ಆರೋಪಿಗಳು ಕಣ್ಣಾಮುಚ್ಚಾಲೆ ಆಡಿರುವ ವಿಚಾರ ಬೆಳಕಿಗೆ ಬಂದಿದೆ.
ಎರಡು ಏರಿಯಾಗಳ ಗಲ್ಲಿಗಲ್ಲಿ ಸುತ್ತಿದ ಪೊಲೀಸರು
ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ದಾಂಧಲೆಗೆ ಸಂಬಂಧಿಸಿದಂತೆ ಆರೋಪಿಗಳ ಬಂಧಿಸಲು ಪೊಲೀಸರು ತಡರಾತ್ರಿ ಎರಡೂ ನಗರದ ಗಲ್ಲಿಗಲ್ಲಿಗಳಲ್ಲೂ ಸುತ್ತಿದರು. ಬೆಳಗಿನ ಹೊತ್ತಿನಲ್ಲಿ ಆರೋಪಿಗಳು ಬೇರೆ ಪ್ರದೇಶಗಳಲ್ಲಿ ತಪ್ಪಿಸಿಕೊಳ್ಳುವ ಸಾಧ್ಯತೆಯಿದ್ದು, ರಾತ್ರಿ ಹೊತ್ತಿನಲ್ಲಿ ಆರೋಪಿಗಳು ಮರಳಿ ಮನೆಗೆ ವಾಪಸ್ಸಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮಿಡ್ ನೈಟ್ ಕಾರ್ಯಾಚರಣೆ ನಡೆಸಿದ್ದರು.
ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿ ಆರೋಪಿ ಬಂಧನ
ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಎದುರು, ಕೆಜಿ ಹಳ್ಳಿ ಠಾಣೆ ಎದುರು ಮತ್ತು ಡಿಜೆ ಹಳ್ಳಿಯಲ್ಲಿ ದಾಂಧಲೆಗೆ ಸಂಬಂಧಿಸಿದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿ ಕಾರ್ಯಾಚರಣೆಗೆ ಇಳಿದಿದ್ದರು. ವಿಡಿಯೋದಲ್ಲಿ ಕಲ್ಲು ತೂರಿದ, ಬಾಟಲಿಗಳನ್ನು ಎಸೆದವರನ್ನು ಗುರುತು ಮಾಡಿಕೊಳ್ಳಲಾಗಿತ್ತು. ಅದನ್ನು ಆಧರಿಸಿಯೇ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಒಬ್ಬರಿಂದ ಒಬ್ಬರಿಗೆ ಮೊಬೈಲ್ ನಲ್ಲಿ ಎಚ್ಚರಿಕೆ ರವಾನೆ
ಗುರುವಾರ ತಡರಾತ್ರಿ ಗಲ್ಲಿಗಲ್ಲಿಗಳಲ್ಲೂ ಬೀಟ್ ಹಾಕಿದ ಪೊಲೀಸರು ಮನೆಗೆ ನುಗ್ಗಿ ಆರೋಪಿಗಳನ್ನು ಬಂಧಿಸಿದರು. ಈ ವೇಳೆ ಕೆಲವರು ಮೊಬೈಲ್ ನಲ್ಲಿ ಕೆಲವರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿರುವ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಬಂಧಿಸಲು ಮನೆಗಳಿಗೆ ನುಗ್ಗುತ್ತಿದ್ದಾರೆ. ಯಾರೂ ಮನೆಯ ಬಾಗಿಲುಗಳನ್ನು ತೆರೆಯಬೇಡಿ. ಒಂದು ವೇಳೆ ಮನೆ ಬಾಗಿಲು ತೆರೆದರೆ, ಯಾರ ಕೈಗೂ ಸಿಗದಂತೆ ಬಚ್ಚಿಟ್ಟುಕೊಳ್ಳಿರಿ. ಮನೆಯಲ್ಲಿರುವ ಮಹಿಳೆಯರನ್ನು ಮುಂದೆ ಬಿಡಿ ಎಂಬ ಎಚ್ಚರಿಕೆ ಸಂದೇಶಗಳು ಹರಿದಾಡಿರುವುದು ಗೊತ್ತಾಗಿದೆ.
ಒಟ್ಟು 206 ಆರೋಪಿಗಳನ್ನು ಬಂಧಿಸಿದ ಪೊಲೀಸರು
ಇನ್ನು, ಆಗಸ್ಟ್.11ರಂದು ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುದಿನವೇ 146 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಆಗಸ್ಟ್.13ರ ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ 60 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದುವರೆಗೂ 206 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.