ಬೆಂಗಳೂರು ವಿವಿ ಕುಲಪತಿಗಳ ಅಲ್ಮೆರಾ ಕಥೆ
ಬೆಂಗಳೂರು, ಡಿಸೆಂಬರ್ 30: ಕರೋನಾಗೆ ತತ್ತರಿಸಿ ಶಾಲಾ ಕಾಲೇಜುಗಳ ಬೀಗ ತೆಗೆದು ವರ್ಷ ಸಮೀಪಿಸುತ್ತಿದೆ. ಶಾಲಾ ಕಾಲೇಜು ಕೊಠಡಿಗಳಲ್ಲಿ ಜೇಡರ ಬಲೆ ಬಿಟ್ಟಿವೆ. ಪರಿಸ್ಥಿತಿ ಹೀಗಿದ್ದರೂ ಬೆಂಗಳೂರು ವಿಶ್ವ ವಿದ್ಯಾಲಯದ ಕುಲಪತಿಗಳು ಸುಮಾರು 65 ಲಕ್ಷ ರೂಪಾಯಿ ಖರ್ಚು ಮಾಡಿ ವಿಶ್ವ ವಿದ್ಯಾಲಯದ ಅಧೀನ ಕಾಲೇಜುಗಳಿಗೆ ಅಲ್ಮೆರಾ ಮಾಡಿಸಿಕೊಟ್ಟಿದ್ದಾರೆ. ಯಾವೊಂದು ಕಮಿಟಿಯ ಗಮನಕ್ಕೂ ತರದೇ ಕುಲಪತಿ ಮಾಡಿಸಿರುವ ಅಲ್ಮೆರಾ ಖರೀದಿ ಟೆಂಡರ್ ಬಗ್ಗೆ ಸಂಶಯ ವ್ಯಕ್ತವಾಗಿದೆ. ಕುಲಪತಿಗಳು ಸ್ವಯಂ ನಿರ್ಧಾರದಿಂದ ಹಾಕಿರುವ ಅಲ್ಮೆರಾಳ ಬಿಲ್ ಪಾವತಿ ಮಾಡದಂತೆ ಬೆಂಗಳೂರು ವಿಶ್ವ ವಿದ್ಯಾಲಯದ ವಿತ್ತಾಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದೆ.
ಬೆಂಗಳೂರು ವಿಶ್ವ ವಿದ್ಯಾಲಯದ ಆಡಳಿತ ಸಂಬಂಧ ನಾನಾ ಸಮಿತಿಗಳನ್ನು ರಚಿಸಲಾಗಿದೆ. ಅದರಂತೆ ಎಸ್ಸಿಎಸ್ಟಿ ಅಮೆಲಿಯೇಷನ್ ಕಮಿಟಿ ರಚನೆ ಮಾಡಿದ್ದು, ಅದರ ಅಧ್ಯಕ್ಷರು ಕುಲಪತಿ ಆಗಿರುತ್ತಾರೆ. ಬೆಂಗಳೂರು ವಿವಿಯಲ್ಲಿ ಕಮಿಟಿಗಳ ರಚನೆಯಾದರೂ, ಅದರ ಸದಸ್ಯ ಕಾರ್ಯದರ್ಶಿಗಳು ಯಾರು, ಅವರ ಹೆಸರು ಏನು, ವಿಳಾಸ ಯಾವುದು ಎಂಬ ಸಣ್ಣ ವಿವರಗಳು ಇಲ್ಲ. ಕಮಿಟಿ ರಚನೆಯಾಗಿ ಆರು ತಿಂಗಳು ಕಳೆದರೂ ಒಂದು ಸಭೆಯನ್ನು ಕರೆಯದೇ ನೆಪಕ್ಕೆ ಸಮಿತಿ ರಚನೆ ಮಾಡಿ ಕೈತೊಳೆದುಕೊಂಡಂತೆ ಕಾಣುತ್ತಿದೆ.
ಜೀವವೈವಿಧ್ಯವನ ಭಾಗ 10: ನೀರು ಇಂಗಿಸುವ ಭಗೀರತ ಪ್ರಯತ್ನ-ಯಶ ಕಂಡಾಗ
ಸಿಂಡಿಕೇಟ್ ಸಭೆಯ ತೀರ್ಮಾನದಂತೆ ಬೆಂಗಳೂರು ವಿಶ್ವ ವಿದ್ಯಾಲಯದ ವಿವಿಧ ಭಾಗಗಳು ಮತ್ತು ಅಧೀನ ಕಾಲೇಜುಗಳಿಗೆ ಅಲ್ಮೆರಾ ಹಾಕುವ ಬಗ್ಗೆ ಟೆಂಡರ್ ಕರೆಯಲಾಗಿದೆ. ಫೆಬ್ರವರಿಯಲ್ಲಿ ಆರ್ಥಿಕ ಬಿಡ್ ಕರೆದು ಮೇನಲ್ಲಿ ಕುಲಪತಿಗಳು ಅನುಮೋದನೆ ನೀಡಿದ್ದಾರೆ. ಅದರಂತೆ ಕೇಂದ್ರ ಖರೀದಿ ಸಮಿತಿ ಮತ್ತು ಸಿಂಡಿಕೇಟ್ ಅನುಮೋದನೆ ಕಾಯ್ದಿರಿಸಿ 65, 28000 ಮೊತ್ತದಲ್ಲಿ 340 ಅಲ್ಮೆರಾಗಳನ್ನು ಖರೀದಿಸಲಾಗಿದೆ. ಅಲ್ಮೆರಾ ಕೊಳ್ಳುವ ವಿಚಾರದ ಬಗ್ಗೆ ಎಸ್ಸಿ ಎಸ್ಟಿ ಕಮಿಟಿಯಲ್ಲಿ ಚರ್ಚೆಯೇ ನಡೆಸಿಲ್ಲ.
ಕರೋನಾ ದಿಂದ ಕಾಲೇಜುಗಳು ಕಳೆದ ಮಾರ್ಚ್ ನಲ್ಲೇ ಬಾಗಿಲು ಮುಚ್ಚಿ ಕೊಂಡಿದ್ದು, ಮೇ ನಲ್ಲಿ ಅಲ್ಮೇರಾಗಳನ್ನು ಖರೀದಿಸುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಉದ್ಭವಿಸಿದೆ. ಕುಲಪತಿ ವೇಣುಗೋಪಾಲ್ ಅವರ ಏಕ ಪಕ್ಷೀಯ ನಿರ್ಧಾರಗಳಿಂದ ವಿಶ್ವ ವಿದ್ಯಾಲಯ ಅದೋಗತಿಗೆ ಇಳಿಯುತ್ತಿದೆ ಎಂದು ಎಸ್ಸಿಎಸ್ಟಿ ಸಮಿತಿ ಸದಸ್ಯರಾದ ಡಾ. ಗೋವಿಂದರಾಜು ಆರೋಪಿಸಿದ್ದಾರೆ.
Recommended Video
ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ವೆಚ್ಚ ಮಾಡಿ ಅಲ್ಮೆರಾ ಹಾಕಿರುವ ಬಗ್ಗೆ ಬೆಂಗಳೂರು ವಿಶ್ವ ವಿದ್ಯಾಲಯದ ವಿತ್ತಾಧಿಕಾರಿಗಳಿಗೆ ಡಾ. ಗೋವಿಂದರಾಜ್ ದೂರು ಸಲ್ಲಿಸಿದ್ದಾರೆ. ಎಸ್ಸಿಎಸ್ಟಿ ಅಮೆಲಿಯೇಷನ್ ಸಮಿತಿಯ ಗಮನಕ್ಕೆ ತರದೇ ಇಷ್ಟು ಆತುರದಲ್ಲಿ ಅಲ್ಮೆರಾ ಖರೀದಿಸಿದ್ದು, ಬಿಲ್ ಪಾವತಿ ಮಾಡಬಾರದು. ಅಲ್ಮೆರಾ ಖರೀದಿ ಪ್ರಕ್ರಿಯೆ ಟೆಂಡರ್ ಕುರಿತ ಸಮಗ್ರ ಮಾಹಿತಿಯನ್ನು ನೀಡುವಂತೆ ದೂರುದಾರ ಡಾ. ಗೋವಿಂದರಾಜು ಮನವಿ ಮಾಡಿದ್ದಾರೆ. ಈ ಅಕ್ರಮ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.