ಹುಬ್ಬಳ್ಳಿ-ಬೆಂಗಳೂರು ರೈಲು ಪ್ರಯಾಣದ ಅವಧಿ ಇಳಿಕೆ
ಬೆಂಗಳೂರು, ಜನವರಿ 15: ಹುಬ್ಬಳ್ಳಿ-ಬೆಂಗಳೂರು ರಾಜ್ಯದ ಪ್ರಮುಖ ರೈಲು ಮಾರ್ಗವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ತುಮಕೂರು-ಬೆಂಗಳೂರು ನಡುವೆ ನಡೆಯುತ್ತಿರುವ 70 ಕಿಲೋ ಮೀಟರ್ ರೈಲು ಮಾರ್ಗದ ವಿದ್ಯುದೀಕರಣವನ್ನು (electrification) ಈ ವರ್ಷಾಂತ್ಯಕ್ಕೆ ಪೂರ್ಣಗೊಳಿಸುವುದಾಗಿ ನೈರುತ್ಯ ರೈಲ್ವೆ ತಿಳಿಸಿದೆ. ವಿದ್ಯುದೀಕರಣದಿಂದ ರೈಲಿನ ವೇಗದಲ್ಲಿ ಹೆಚ್ಚಳವಾಗುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮೊದಲಿನ ಪ್ರಯಾಣದ ಅವಧಿಗಿಂತ ಸುಮಾರು 30 ನಿಮಿಷ ಉಳಿತಾಯವಾಗಲಿದೆ.
ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ 16.22 ಲಕ್ಷ ದಂಡ ವಸೂಲಿ
ಸದ್ಯ ಈ ಮಾರ್ಗದಲ್ಲಿ ಸಂಚರಿಸಲು ಎಕ್ಸಪ್ರೆಸ್ ರೈಲು 1.30 ಗಂಟೆ ಸಮಯ ತೆಗೆದುಕೊಂಡರೆ, ಪ್ಯಾಸೆಂಜರ್ ರೈಲು 1.50 ಗಂಟೆ ತೆಗೆದುಕೊಳ್ಳುತ್ತದೆ. ವಿದ್ಯುದೀಕರಣ ಪೂರ್ಣಗೊಂಡರೆ ಒಂದು ಗಂಟೆಯಲ್ಲಿ ಎಕ್ಸಪ್ರೆಸ್ ರೈಲು ಬೆಂಗಳೂರು-ತುಮಕೂರು ನಡುವೆ ಸಂಚರಿಸಲಿದೆ. ಪ್ಯಾಸೆಂಜರ್ ರೈಲು 1.20 ಗಂಟೆ ತೆಗೆದುಕೊಳ್ಳಲಿದೆ. ಒಟ್ಟಾರೆ ಪ್ರಯಾಣಿಕರಿಗೆ 30 ನಿಮಿಷ ಪ್ರಯಾಣದ ಅವಧಿಯಲ್ಲಿ ಉಳಿತಾಯವಾಗಲಿದೆ.
''ಈಗಾಗಲೇ ಬೆಂಗಳೂರಿನಿಂದ ಚಿಕ್ಕಬಾಣಾವರದವರೆಗೆ ರೈಲು ವಿದ್ಯುದೀಕರಣ ಪೂರ್ಣಗೊಂಡಿದ್ದು, ತುಮಕೂರುವರೆಗಿನ ಕಾಮಗಾರಿ, ಟೆಂಡರ್ ಪ್ರಕ್ರಿಯೆ ವಿಳಂಬದಿಂದ ಕುಂಠಿತಗೊಂಡಿತ್ತು. ಟೆಂಡರ್ ಪ್ರಕ್ರಿಯೆ ಮುಗಿದಿರುವುದರಿಂದ ಕಾಮಗಾರಿಗೆ ವೇಗ ದೊರೆಯಲಿದೆ'' ಎಂದು ನೈರುತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.