ಹೊಸ ವರ್ಷಾಚರಣೆ ಕುಡುಕರಿಗೆ ಡ್ರಾಪ್ ಭಾಗ್ಯ!
ಬೆಂಗಳೂರು, ಡಿಸೆಂಬರ್, 29: ಹೊಸ ವರ್ಷದ ಸಂಭ್ರಮಾಚರಣೆ ಬೆಂಗಳೂರು ಪೊಲೀಸರಿಗೂ ತಲೆನೋವು ತರಿಸಿದೆ. ಅಪಘಾತ ತಡೆಯುವ ನಿಟ್ಟಿನಲ್ಲಿ ಮಹತ್ವದ ಆದೇಶ ಹೊರಡಿಸಿದೆ. ಮದ್ಯಪಾನ ಮಾಡಿ ಹಿಂದಿರುಗುವ ಗ್ರಾಹಕರಿಗೆ ಮನೆಗೆ ಮರಳಲು ಟ್ಯಾಕ್ಸಿ ವ್ಯವಸ್ಥೆ ಮಾಡಬೇಕು ಎಂದು ಬೆಂಗಳೂರು ನಗರ ಪೊಲೀಸರು ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳ ಮಾಲೀಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಸುತ್ತೋಲೆ ಹೊರಡಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಡಾ. ಎಂ.ಎ. ಸಲೀಂ, ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುವುದು ಅಪಘಾತಕ್ಕೆ ಕಾರಣವಾಗಬಹುದು. ಮದ್ಯಪಾನ ಮಾಡುವವರು ತಮ್ಮ ವಾಹನಗಳಿಗೆ ಮದ್ಯಪಾನ ಮಾಡದಿರುವವರನ್ನು ಚಾಲಕರಾಗಿ ಹೊಂದಿರಬೇಕು. ಇಲ್ಲವಾದಲ್ಲಿ, ಅಂಥ ಗ್ರಾಹಕರನ್ನು ಮನೆಗೆ ತಲುಪಿಸಲು ಪಬ್, ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರೇ ಟ್ಯಾಕ್ಸಿ ಸೇವೆ ಒದಗಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.[ಸಂಚಾರ ನಿಯಮ ಮುರಿದು ಪೊಲೀಸರಿಗೆ ಧಮ್ಕಿ ಹಾಕಿದ್ರೆ ಜೈಲೂಟ!]
ಡಿಸೆಂಬರ್ 31ರ ರಾತ್ರಿ 10 ರಿಂದ ತಡರಾತ್ರಿ 3.30ರ ವರೆಗೆ ನಗರದ ಎಲ್ಲ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಸಂಚಾರ ಪೊಲೀಸ್ ಸಿಬ್ಬಂದಿ ವಾಹನ ಚಾಲನೆ ತಪಾಸಣೆ ಮಾಡಲಿದ್ದಾರೆ. ಕುಡಿದು ವಾಹನ ಚಲಾಯಿಸುವುದು ಕಂಡು ಬಂದರೆ ಸಿಬ್ಬಂದಿ ವಾಹನ ಜಪ್ತಿ ಮಾಡಿಕೊಂಡು ದಂಡ ವಿಧಿಸಲಿದ್ದಾರೆ. ಜತೆಗೆ ಚಾಲನಾ ಪರವಾನಗಿ ವಶಕ್ಕೆ ಪಡೆದು ಅದನ್ನು ಅಮಾನತು ಮಾಡಲಾಗುವುದು ಎಂದು ಸಲೀಂ ಎಚ್ಚರಿಕೆ ನೀಡಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ನೀಡಿರುವ ಸೂಚನೆಗಳು ಏನು? ನೋಡಿಕೊಂಡು ಬನ್ನಿ....
ಅವಧಿ ಮೀರಿ ಮದ್ಯ ಮಾರಾಟ ಇಲ್ಲ
ತಡರಾತ್ರಿ 1 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಇದಕ್ಕೂ ಮೀರಿ ಮದ್ಯ ಮಾರಾಟ ಮಾಡಿದರೆ ಬಾರ್ಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಬಾರ್ ಮಾಲೀಕರಿಗೂ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಫ್ಲೈಓವರ್ಗಳಿಗೆ ಪ್ರವೇಶ ನಿಷಿದ್ಧ
ಬೆಂಗಳೂರಿನ ಡಿ. 31 ರಾತ್ರಿ 9ರಿಂದ ಜ.1ರ ಬೆಳಗ್ಗೆ 6 ಗಂಟೆವರೆಗೆ ವಾಹನ ಸಂಚಾರ ನಿಷೇಧಿಸಲು ಸಂಚಾರ ಪೊಲೀಸರು ತೀರ್ಮಾನಿಸಿದ್ದಾರೆ. -ಓವರ್ಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಬ್ಯಾರಿಕೇಡ್ ಇರಿಸಿ, ವಾಹನಗಳು ಪ್ರವೇಶಿಸದಂತೆ ಸಂಚಾರ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ.
ವ್ಹೀಲಿಂಗ್ ತಡೆಗೆ ಮಫ್ತಿ ಪೊಲೀಸ್
ಡಿ.31ರ ರಾತ್ರಿ ಬೈಕ್ ವ್ಹೀಲಿಂಗ್ ಮತ್ತು ಡ್ರ್ಯಾಗ್ ರೇಸ್ ಮಾಡುವವರನ್ನು ತಡೆಯಲು ಸಂಚಾರ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಇವರೆಲ್ಲರೂ ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ವ್ಹೀಲಿಂಗ್ ಮತ್ತು ಡ್ರ್ಯಾಗ್ ರೇಸ್ ಮಾಡಿ ಸಿಕ್ಕಿಬೀಳುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತದೆ. ಜತೆಗೆ ಅವರ ಪಾಲಕರ ವಿರುದ್ಧವೂ ಕೇಸ್ ದಾಖಲಿಸಲಾಗುವುದೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಒಂದೆ ಕಡೆಗೆ ನಡಿಗೆ!
ಹೊಸ ವರ್ಷದ ಸ್ವಾಗತಕ್ಕಾಗಿ ಪ್ರತಿಷ್ಠಿತ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಈ ಪ್ರದೇಶದಲ್ಲಿನ ನೂಕು ನುಗ್ಗಲನ್ನು ತಡೆಯಲು ಈ ರಸ್ತೆಗಳಲ್ಲಿ ಏಕಮುಖ ಕಾಲ್ನಡಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಬ್ರಿಗೇಡ್ ರಸ್ತೆಗೆ ತೆರಳುವವರು ಎಂ.ಜಿ.ರಸ್ತೆಯ ವೃತ್ತದಿಂದ ಒಪೇರಾ ಜಂಕ್ಷನ್ ಕಡೆಗೆ ಕಾಲ್ನಡಿಗೆಯಲ್ಲಿ ತೆರಳಬೇಕು. ಬ್ರಿಗೇಡ್ ರಸ್ತೆಯಿಂದ ಎಂ.ಜಿ. ರಸ್ತೆಗೆ ಬರುವಾಗ ರೆಸಿಡೆನ್ಸಿ ರಸ್ತೆ ಕ್ರಾಸ್ನ (ಶಂಕರ್ನಾಗ್ ಚಿತ್ರಮಂದಿರ) ಮಾರ್ಗವಾಗಿ ಕಾಲ್ನಡಿಗೆಯಲ್ಲಿ ಬರುವುದು ಕಡ್ಡಾಯವಾಗಿದೆ.
ಭದ್ರತೆಗೆ 20 ಸಾವಿರ ಪೊಲೀಸರು
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ. ಭದ್ರತೆಗಾಗಿ ನಗರಾದ್ಯಂತ 20 ಸಾವಿರ ಪೊಲೀಸರು ನಿಯೋಜನೆಗೊಳ್ಳಲಿದ್ದಾರೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳ ಸುತ್ತಮುತ್ತ 2 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.