ಬೆಂಗಳೂರಿನ ಟ್ರಾಫಿಕ್ಗೆ ಮುಕ್ತಿಯೇ ಇಲ್ಲ, ಏಕೆ ಗೊತ್ತೇ?
ಬೆಂಗಳೂರು, ಸೆಪ್ಟೆಂಬರ್ 6: ನಗರದ ಟ್ರಾಫಿಕ್ ಸಮಸ್ಯೆ ಉಲ್ಬಣಕ್ಕೆ ಮೆಟ್ರೋ ರೈಲು ಮದ್ದು ಎಂಬ ಭಾವನೆ ಮೂಡಿತ್ತು. ಮೆಟ್ರೋದಲ್ಲಿ ನಿತ್ಯವೂ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಹಾಗೆಂದು ಬಿಎಂಟಿಸಿ ಬಸ್ಗಳಲ್ಲಿ ಓಡಾಡುವ ಪ್ರಯಾಣಿಕರ ಸಂಖ್ಯೆಯೇನೂ ಕಡಿಮೆ ಇಲ್ಲ. ಮೆಟ್ರೋ ಬಂದಾದ ಮೇಲೆ ವಾಹನದಟ್ಟಣೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಮಿಗಿಲಾಗಿ ಸಂಚಾರ ದಟ್ಟಣೆ ಹೆಚ್ಚುತ್ತಲೇ ಇದೆ.
ಮೆಟ್ರೋದಲ್ಲಿ ಪ್ರಯಾಣಿಸುವ ಮಂದಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬೇಗನೆ ತಲುಪುತ್ತಾರೆ. ಆದರೆ, ಮೆಟರೋ ನಿಲ್ದಾಣದವರೆಗೆ ತಲುಪುವುದಕ್ಕೂ ಅವರು ಸಾಹಸ ಪಡಬೇಕು. ಇನ್ನು ಕೆಲವೆಡೆ ಮೆಟ್ರೋ ಸಂಪರ್ಕ ಆರಂಭವಾಗಿಲ್ಲ. ಹಾಗೆಯೇ ಮೆಟ್ರೋ ಲಭ್ಯವಿದ್ದರೂ ಸ್ವಂತ ವಾಹನಗಳಲ್ಲಿ ಓಡಾಡುವವರ ಸಂಖ್ಯೆ ಕೂಡ ಕಡಿಮೆಯಾಗಿಲ್ಲ. ಹೀಗಾಗಿ ದಶಕಗಳಿಂದ ಇರುವ ಟ್ರಾಫಿಕ್ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಸಿಗುವ ಸೂಚನೆಗಳೂ ಸದ್ಯಕ್ಕೆ ಕಾಣಿಸುತ್ತಿಲ್ಲ.
ಬೆಂಗಳೂರಲ್ಲಿ 500 ಕಡೆ ಸ್ವಯಂ ಚಾಲಿತ ಸಿಗ್ನಲ್ಗಳ ವ್ಯವಸ್ಥೆ, ಎಲ್ಲೆಲ್ಲಿ?
ಟ್ರಾಫಿಕ್ ಕುರಿತಾದ ಚರ್ಚೆಗಳು ಮನೆ, ಕಚೇರಿ, ಊಟದ ಟೇಬಲ್, ಸಾಮಾಜಿಕ ಜಾಲತಾಣ, ವಾಟ್ಸಾಪ್ ಮುಂತಾದೆಡೆ ನಡೆಯುತ್ತಲೇ ಇರುತ್ತವೆ. ಕೊನೆಗೆ ಇಷ್ಟೊಂದು ಟ್ರಾಫಿಕ್ಗೆ ಕಾರಣವೇನು? ಎಂಬ ಪ್ರಶ್ನೆಗೆ ಹತ್ತಾರು ಬಗೆಯ ಉತ್ತರ ಹುಡುಕಿ ಸುಮ್ಮನಾಗುತ್ತೇವೆ.
ನಿಜ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಕಾರಣಗಳು ಹಲವು. ಇದರಲ್ಲಿ ಹೆಚ್ಚುತ್ತಿರುವ ಕಾರ್ಗಳ ಸಂಖ್ಯೆ ಮತ್ತು ಅಧಿಕ ಒನ್ ವೇ ಸಂಚಾರ ಮುಖ್ಯವಾದವು ಎಂದು 'ದಿ ನ್ಯೂಸ್ ಮಿನಿಟ್' ವರದಿ ಹೇಳುತ್ತದೆ.
ತೆರೆದ ಐಟಿ ಬಾಗಿಲು
1999ರ ವೇಳೆ ಆಗಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಐಟಿ ಮತ್ತು ಬಿಟಿ ಕ್ಷೇತ್ರಗಳಿಗೆ ಮುಕ್ತ ಬಾಗಿಲು ತೆರೆದರು. ಈ ಕುರಿತ ಅನೇಕ ನೀತಿಗಳು ಸಿದ್ಧವಾದವು. ಪರಿಣಾಮವಾಗಿ ಸಾಫ್ಟ್ವೇರ್ ಉದ್ದಿಮೆ ಬೆಂಗಳೂರಿನಲ್ಲಿ ಒಂದೇ ಸಮನೆ ಬೆಳೆಯತೊಡಗಿತು. ದೇಶದ ಬೇರೆ ಬೇರೆ ರಾಜ್ಯಗಳ ಜನರೂ ಉತ್ತಮ ಅವಕಾಶ ಅರಸಿ ಬೆಂಗಳೂರಿಗೆ ಕಾಲಿಡತೊಡಗಿದರು. ನಗರದ ಟ್ರಾಫಿಕ್ ವ್ಯವಸ್ಥೆಯ ಸ್ಥಿತಿ ಏಕಾಏಕಿ ಬದಲಾಗತೊಡಗಿತು.
ಎಷ್ಟು ವಾಹನಗಳು ನೋಂದಣಿಯಾಗುತ್ತಿದೆ ಗೊತ್ತೇ?
ಕರ್ನಾಟಕ ಸಾರಿಗೆ ಇಲಾಖೆಯ ಪ್ರಕಾರ 2019ರ ವೇಳೆಗೆ ಬೆಂಗಳೂರಿನಲ್ಲಿ ನೋಂದಣಿಯಾದ ಸಾರಿಗೆ (ಟ್ರಕ್, ಲಾರಿ ಮತ್ತು ಟ್ಯಾಕ್ಸಿಗಳು) ಹಾಗೂ ಸಾರಿಗೆಯೇತರ (ದ್ವಿಚಕ್ರ ವಾಹನ, ಕಾರುಗಳು, ಓಮ್ನಿ ಬಸ್) ವಾಹನಗಳ ಸಂಖ್ಯೆ 82,53,218. ಇವುಗಳಲ್ಲಿ 15,72,185 ಕಾರುಗಳು ಮತ್ತು 57,30,388 ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ವಾಹನಗಳ ಸಂಖ್ಯೆ 23 ಲಕ್ಷಕ್ಕೂ ಹೆಚ್ಚಾಗಿದೆ ಎನ್ನುವುದನ್ನು ಅಂಕಿ ಅಂಶಗಳು ತಿಳಿಸುತ್ತವೆ. 2018ರ ಡಿಸೆಂಬರ್ ಅಂತ್ಯಕ್ಕೆ ಬೆಂಗಳೂರಿನಲ್ಲಿ 78,84,998 ವಾಹನಗಳು ನೋಂದಣಿಯಾಗಿದ್ದವು. 2017ರ ಡಿಸೆಂಬರ್ ಅಂತ್ಯಕ್ಕೆ 72,58,889, 2016 ಡಿಸೆಂಬರ್ನಲ್ಲಿ 66,65,980 ಮತ್ತು 2015ರ ಡಿಸೆಂಬರ್ ಅಂತ್ಯಕ್ಕೆ 59,49,816 ವಾಹನಗಳು ನೋಂದಣಿಯಾಗಿದ್ದವು.
2019ರಲ್ಲಿ ನೋಂದಣಿಯಾಗುತ್ತಿರುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಮಾಸಿಕ ಸುಮಾರು 50 ಸಾವಿರ ವಾಹನಗಳು ನೋಂದಣಿಯಾಗುತ್ತಿವೆ. ಅವುಗಳಲ್ಲಿ 35,000 ದ್ವಿಚಕ್ರ ವಾಹನಗಳು ಮತ್ತು 8,000 ಕಾರ್ಗಳು ಪ್ರತಿ ತಿಂಗಳು ನೋಂದಣಿಯಾಗುತ್ತಿವೆ.
ಟ್ರಾಫಿಕ್ ಸಮಸ್ಯೆ ರಸ್ತೆಯಲ್ಲಿಲ್ಲ, ನಮ್ಮಲ್ಲೇ ಇದೆ! ಪರಿಹಾರವೇನು?
ಬೇಡಿಕೆಗೂ ಪೂರೈಕೆಗೂ ವ್ಯತ್ಯಾಸ ಹಿರಿದು
ಬೆಳೆಯುತ್ತಿರುವ ವಾಹನಗಳ ಬಳಕೆಯಲ್ಲಿ ಮೂಲಸೌಕರ್ಯದ ಬೇಡಿಕೆಗೂ ಮತ್ತು ಪೂರೈಕೆಗೆ ಅಗಾಧ ವ್ಯತ್ಯಾಸವಿದೆ. ಹೆಚ್ಚುತ್ತಿರುವ ವಾಹನಗಳ ಪ್ರಮಾಣಕ್ಕೆ ತಕ್ಕಂತೆ ರಸ್ತೆಗಳು ಬೆಳೆದಿಲ್ಲ. ಒಂದು ಗಂಟೆಯಲ್ಲಿ ನಿರ್ದಿಷ್ಟ ರಸ್ತೆಯಲ್ಲಿ ಗರಿಷ್ಠ ಸಂಖ್ಯೆಯ ವಾಹನಗಳು ಸಾಗುವಷ್ಟು ಅನುಕೂಲಕರವಾದ ವಿಶಾಲ ಅವಕಾಶ ಸಿಗುತ್ತಿಲ್ಲ.
ಬೆಂಗಳೂರಿನ ರಸ್ತೆಗಳ ಅಗಲ ಯಾವಾಗಲೂ ಒಂದೇ ರೀತಿಯಿರುತ್ತವೆ. ಇವುಗಳನ್ನು ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಇದೇ ರಸ್ತೆಗಳಲ್ಲಿ ಓಡಾಡುವ ವಾಹನಗಳ ಸಂಖ್ಯೆ ಮಾತ್ರ ದೊಡ್ಡದಾಗಿದೆ. ಶೇ 66ರಷ್ಟು ರಸ್ತೆಗಳು ಬೆಂಗಳೂರು ಬೃಹತ್ ನಗರದ ಸ್ವರೂಪ ಪಡೆದುಕೊಳ್ಳುವ ಮುಂಚೆ ಇದ್ದಷ್ಟೇ ಕಿರಿದಾಗಿ ಉಳಿದಿವೆ.
ಹಾಗೆಂದು ಕೆಲವು ಕಡೆ ಅವಕಾಶವಿದ್ದಲ್ಲಿ ರಸ್ತೆ ವಿಸ್ತರಣೆ ಮಾಡಿದ್ದರೂ ಅಷ್ಟೇನೂ ಬದಲಾವಣೆ ಕಂಡುಬರುತ್ತಿಲ್ಲ. ರಸ್ತೆ ಅಗಲ ಹೆಚ್ಚಾದಷ್ಟೂ ಆ ಮಾರ್ಗದಲ್ಲಿ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ. ಹಿರಿದಾದ ರಸ್ತೆಗಳಲ್ಲಿ ವಾಹನಗಳು ಕ್ಷಣಮಾತ್ರದಲ್ಲಿ ತುಂಬಿಕೊಳ್ಳುತ್ತವೆ.
ಸಂಚಾರ ದಟ್ಟಣೆ ತಗ್ಗಿಸಲು ಏನು ಮಾಡುವುದು?
ಟ್ರಾಫಿಕ್ ಸಂಕಟವನ್ನು ತಗ್ಗಿಸಲು ಸಿಕ್ಕ ಉಪಾಯ ಫ್ಲೈಓವರ್ ಮತ್ತು ಅಂಡರ್ಪಾಸ್ಗಳ ನಿರ್ಮಾಣ. ಇವು ಅನೇಕ ಪ್ರತಿಭಟನೆ, ವಿರೋಧಗಳ ನಡುವೆಯೇ ನಡೆದವು. ಈಗಲೂ ನಡೆಯುತ್ತಿವೆ. ಬೆಂಗಳೂರಿನಲ್ಲಿ ಪ್ರಸ್ತುತ ಸುಮಾರು 55 ಮೇಲ್ಸೇತುವೆಗಳಿವೆ. ಫ್ಲೈಓವರ್ಗಳು ಕೂಡ ವಾಹನಗಳಿಂದ ತುಂಬಿಕೊಂಡಿರುತ್ತವೆ. ಫ್ಲೈ ಓವರ್ ಮೇಲೆ ಕೂಡ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಪರಿಸ್ಥಿತಿಗೆ ಉಂಟಾಗಿದೆ.
ಬೆಂಗಳೂರಿನಲ್ಲಿ ಅಧಿಕ ಸಂಖ್ಯೆಯ ಏಕಮುಖ ಸಂಚಾರ (ಒನ್ ವೇ) ರಸ್ತೆಗಳಿರುವುದು ಕೂಡ ಸಂಚಾರ ದಟ್ಟಣೆಯ ಹೆಚ್ಚಳಕೆ ಕಾರಣ ಎಂದು ಅನೇಕ ತಜ್ಞರು ಅಭಿಪ್ರಾಯಪಡುತ್ತಾರೆ. ಕೆಲವೆಡೆ ಸಿಗ್ನಲ್ಗಳಿದ್ದರೂ ಪಾದಚಾರಿಗಳಿಗೆ ರಸ್ತೆ ಅಥವಾ ಒಂದು ವೃತ್ತವನ್ನು ದಾಟುವುದು ಸುಲಭವಾಗುವುದಿಲ್ಲ. ಒನ್ ವೇ ಮಾರ್ಗಗಳಲ್ಲಂತೂ ಪಾದಚಾರಿಗಳು ನಡೆದು ಸಾಗುವುದು ಸಾಹಸ ಮಾತು. ಹೀಗಾಗಿ ಇಲ್ಲಿ ನಡೆಯುವ ಬದಲು ವಾಹನವನ್ನೇ ಹೆಚ್ಚಾಗಿ ಬಳಸುತ್ತಾರೆ.
ಸಾರ್ವಜನಿಕ ವಾಹನದ ಬಳಕೆ ಅನಿವಾರ್ಯ
ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಇರುವುದು ಒಂದೇ ಪರಿಹಾರ ಎಂದರೆ ಸಾರ್ವಜನಿಕ ಸಾರಿಗೆಗಳ ಬಳಕೆ. ನಗರದ ಮೂಲೆ ಮೂಲೆಗೂ ತಲುಪಿಸುವ ಬಸ್ ವ್ಯವಸ್ಥೆ ಬೆಂಗಳೂರಿನಲ್ಲಿದೆ. 2019ರ ಜುಲೈ ವೇಳೆ ಬೆಂಗಳೂರಿನಲ್ಲಿರುವ ಬಿಎಂಟಿಸಿ ಬಸ್ಗಳ ಸಂಖ್ಯೆ 6,419. ಆದರೆ, ಬಸ್ ದರ ಹೆಚ್ಚಳದ ಕಾರಣಕ್ಕೆ ಸ್ವಂತ ವಾಹನಗಳನ್ನು ಬಳಸುವುದೇ ಲೇಸು ಎಂದು ಹೆಚ್ಚಿನವರು ಭಾವಿಸುತ್ತಿದ್ದಾರೆ.
ಮುಂಬೈ, ಚೆನ್ನೈ ಮತ್ತು ಕೋಲ್ಕತಾ ನಗರಗಳಲ್ಲಿ ಉಪನಗರ ರೈಲ್ವೆ ಸಂಪರ್ಕ ಚೆನ್ನಾಗಿದೆ. ಆದರೆ ಬೆಂಗಳೂರಿನಲ್ಲಿ ಈ ವ್ಯವಸ್ಥೆ ತುಂಬಾ ದೂರದಲ್ಲಿದೆ. ಬೆಂಗಳೂರಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹೋಗಲು ರೈಲು ವ್ಯವಸ್ಥೆ ಇಲ್ಲ. ನಮ್ಮ ಮೆಟ್ರೋ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಲೇ ಇದೆ. ಇದರ ಜತೆಗೆ ಹೊರವಲಯ ವರ್ತುಲ ರಸ್ತೆಯ ಎರಡನೆಯ ಎ ಹಂತ ಮತ್ತು ಬಿ ಹಂತ (ಕೆಆರ್ ಪುರಂದಿಂದ ವಿಮಾನ ನಿಲ್ದಾಣ) ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಅಥವಾ ಔಟರ್ ರಿಂಗ್ ರೋಡ್ನಲ್ಲಿ ಕೆಲಸ ಮಾಡುವ ಸುಮಾರು 10 ಲಕ್ಷ ಮಂದಿ ಇಲ್ಲಿ ಓಡಾಡಕ್ಕೆ ಈಗಲೂ ಖಾಸಗಿ ಅಥವಾ ಸ್ವಂತ ವಾಹನಗಳನ್ನೇ ಅವಲಂಬಿಸುವಂತಾಗಿದೆ.