ಸಿಸಿಬಿ ಅಡಿಯಲ್ಲೇ ಪ್ರತ್ಯೇಕ ಉಗ್ರ ನಿಗ್ರಹ ಘಟಕ ಸ್ಥಾಪನೆ: ಬೊಮ್ಮಾಯಿ
ಬೆಂಗಳೂರು, ನವೆಂಬರ್ 05: ಬಾಂಗ್ಲಾದೇಶ ಮೂಲದ ಜಮತ್ -ಉಲ್ ಮುಜಾಹಿದ್ದೀನ್ (ಜೆಎಂಬಿ) ಉಗ್ರ ಸಂಘಟನೆಯ ಸದಸ್ಯರಿಗೆ ಬೆಂಗಳೂರು ಆಶ್ರಯ ತಾಣವಾಗಿದೆ ಎಂಬ ಆತಂಕದ ಬೆನ್ನಲ್ಲೇ ಬೆಂಗಳೂರಿನಲ್ಲಿ ಉಗ್ರ ನಿಗ್ರಹ ಘಟಕ ಸ್ಥಾಪನೆಯಾಗಲಿದೆ.
ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್ ನಗರಗಳ ಮಾದರಿಯಲ್ಲಿ ಬೆಂಗಳೂರಲ್ಲಿ ಎಟಿಎಸ್ ರಚನೆ ಮಾಡಲಾಗುತ್ತಿದೆ. ಗುಪ್ತಚರ ಇಲಾಖೆಯ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಪ್ರತ್ಯೇಕ ಉಗ್ರ ನಿಗ್ರಹ ಪಡೆ ರಚನೆಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಬೇರೂರಿರುವ ಬಾಂಗ್ಲಾ ಉಗ್ರರು
ಬೆಂಗಳೂರಿನಲ್ಲಿ ಬಾಂಗ್ಲಾ ಮೂಲದ ಜೆಎಂಬಿ ಉಗ್ರರು ಆಶ್ರಯ ಪಡೆದುಕೊಂಡಿರುವ ಕುರಿತು ಎನ್ಐಎ ಪ್ರಸ್ತಾಪಿಸಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ನಗರದ ಸೂಕ್ಷ್ಮ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ಕರಾವಳಿ ಪ್ರದೇಶದಲ್ಲಿ ಕೂಡ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಬೆಂಗಳೂರು ಸಮೀಪ ಇಬ್ಬರು ಜೆಎಂಬಿ ಉಗ್ರರನ್ನು ಬಂಧಿಸಲಾಗಿದ್ದು, ಬೋಧ್ ಗಯಾ ಸ್ಫೋಟದ ಆರೋಪಿಗಳಾಗಿದ್ದಾರೆ.
ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ ಪುನರ್ ರಚನೆ
16 ವರ್ಷಗಳ ಬಳಿಕ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪುನರ್ ರಚನೆ ಮಾಡಲಾಗಿದೆ. ಸಿಸಿಬಿ ಅಡಿಯಲ್ಲಿ ಉಗ್ರ ನಿಗ್ರಹ ಘಟಕ ಸ್ಥಾಪನೆಯಾಗಲಿದೆ. ಎಸಿಪಿ ಶ್ರೇಣಿಯ ಅಧಿಕಾರಿಯೊಬ್ಬರು ಇದರ ನೇತೃತ್ವ ವಹಿಸಲಿದ್ದಾರೆ. ಜಂಟಿ ಪೊಲೀಸ್ ಆಯುಕ್ತರಿಗೆ ವರದಿ ಮಾಡುತ್ತಾರೆ ಎಂದು ಬೊಮ್ಮಾಯಿ ಹೇಳಿದರು. ಇದಲ್ಲದೆ ಸಿಸಿಬಿ ಇನ್ನೆರಡು ಘಟಕಗಳನ್ನು ರೂಪಿಸುತ್ತಿದೆ. ಮಾದಕ ದ್ರವ್ಯ ನಿಯಂತ್ರಣ ಘಟಕ ಹಾಗೂ ಮಹಿಳಾ ಸುರಕ್ಷತಾ ಘಟಕ ಸ್ಥಾಪನೆಯಾಗಲಿದ್ದು, ಎರಡಕ್ಕೂ ಎಸಿಪಿ ಶ್ರೇಣಿಯ ಅಧಿಕಾರಿ ಮುಖ್ಯಸ್ಥರಾಗಿರುತ್ತಾರೆ. ಒಟ್ಟಾರೆ, 5 ಹೊಸ ವಿಂಗ್ ಗಳು ರೂಪುಗೊಳ್ಳಲಿವೆ.
ಉಗ್ರ ಮುನೀರ್ ಶೇಖ್ ವಿಚಾರಣೆ
ರಾಮನಗರದಲ್ಲಿ ಬಂಧಿತನಾಗಿದ್ದ ಉಗ್ರ ಮುನೀರ್ ಶೇಖ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. ಬೌದ್ಧ ಧರ್ಮಗುರು ದಲೈಲಾಮಾ ಅವರು ರೋಹಿಂಗ್ಯಾಗಳಿಗೆ ವಿರೋಧಿಯಾಗಿದ್ದರು. ರೋಹಿಂಗ್ಯಾಗಳಿಗೆ ವಿರೋಧಿಯಾಗಿದ್ದರಿಂದ ಜೆಎಂಬಿ ಉಗ್ರ ಸಂಘಟನೆ ಹತ್ಯೆಗೆ ಸಂಚು ರೂಪಿಸಿತ್ತು ಎಂಬ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ.
ಜೆಎಂಬಿ ಉಗ್ರ ಜಾಹಿದುಲ್ ಇಸ್ಲಾಂ ಅಲಿಯಾಸ್ ಕೌಸರ್
ಎನ್ಐಎ ಕಸ್ಟಡಿಯಲ್ಲಿರುವ ಜೆಎಂಬಿ ಉಗ್ರ ಜಾಹಿದುಲ್ ಇಸ್ಲಾಂ ಅಲಿಯಾಸ್ ಕೌಸರ್ ವಿಚಾರಣೆ ವೇಳೆ ಎಲೆಕ್ಟ್ರಾನಿಕ್ ಸಿಟಿಯ ಅಡಗುತಾಣ ಬಗ್ಗೆ ತಿಳಿಸಿದ್ದಾನೆ. 2014ರ ಬುರ್ದ್ವಾನ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಕೌಸರ್ ಗೆ ದಕ್ಷಿಣ ಭಾರತದಲ್ಲಿ ಅಡಗುತಾಣಗಳ ನಿರಂತರ ಸಂಪರ್ಕವಿರುವುದು ಪತ್ತೆಯಾಗಿತ್ತು. ಅತ್ತಿಬೆಲೆ, ಕಾಡುಗೋಡಿ, ಕೆ. ಆರ್ ಪುರಂ, ಚಿಕ್ಕ ಬಾಣಾವಾರ, ಶಿಕಾರಿಪಾಳ್ಯ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಉಗ್ರರಿಗೆ ನೆರವಾಗುವ ಸಹಾಯಕರು ನೆಲೆಸಿದ್ದಾರೆ. ಸ್ಲೀಪರ್ ಸೆಲ್ ಗಳಂತೆ ಈ ತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ರಾಮನಗರದಲ್ಲಿ ಸೆರೆ ಸಿಕ್ಕಿದ್ದ ಉಗ್ರ
ಬುರ್ದ್ವಾನ್ ಹಾಗೂ ಬೋಧ್ ಗಯಾ ಸ್ಫೋಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಾಹಿದುಲ್ ನನ್ನು ಆಗಸ್ಟ್ ನಲ್ಲಿ ಎನ್ಐಎ ತಂಡ ಬಂಧಿಸಿತ್ತು. ಜಮಾತ್ ಉಲ್ ಮುಜಾಹಿದ್ದೀನ್ ಆಫ್ ಬಾಂಗ್ಲಾದೇಶ್ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದ ಈತ ಬೆಂಗಳೂರಿನ ಸಮೀಪವಿರುವ ರಾಮನಗರದಲ್ಲಿ ನೆಲೆಸಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು, ಕೌಸರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.
ಭಾರತದಲ್ಲಿ ಅಕ್ರಮ ನುಸುಳುವಿಕೆ
2018ರ ಜನವರಿ 8ರಂದು ಸಂಭವಿಸಿದ ಬೋಧ್ ಗಯಾ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಸರ್ ಅಲ್ಲದೆ ಪಶ್ಚಿಮ ಬಂಗಾಳ ಮೂಲದ ಅಬ್ದುಲ್ ಕರೀಂ ಹಾಗೂ ಮುಸ್ತಫಿಜುರ್ ರೆಹ್ಮಾನ್ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಕೇರಳದ ಮಲ್ಲಪುರಂನಲ್ಲಿ ನಿರಾಶ್ರಿತ ಶಿಬಿರದಲ್ಲಿ ಬೆಂಗಾಲಿಯಲ್ಲಿ ಮಾತನಾಡುತ್ತಿದ್ದ ಇಬ್ಬರನ್ನು ಎನ್ಐಎ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.
ಗುಪ್ತಚರ ಇಲಾಖೆಯು ಅಕ್ರಮ ವಲಸಿಗರ ಬಗ್ಗೆ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅದರಲ್ಲೂ ದಕ್ಷಿಣ ಭಾರತದಲ್ಲಿ ಅಕ್ರಮ ನುಸುಳುವಿಕೆ ಹೆಚ್ಚಾಗಿದೆ. ಕಾರ್ಮಿಕರ ಸೋಗಿನಲ್ಲಿ ನಿರಾಶ್ರಿತ ಶಿಬಿರಗಳಲ್ಲಿ ಉಗ್ರರು ಸೇರಿಕೊಳ್ಳುತ್ತಿದ್ದಾರೆ ಎಂದು ಐಬಿ ಎಚ್ಚರಿಸಿದೆ.