ಹಣದ ಬ್ಯಾಗ್ ಪೊಲೀಸರಿಗೆ ಕೊಟ್ಟು ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಬೆಂಗಳೂರು, ಫೆಬ್ರವರಿ 04: ಬೆಂಗಳೂರಿನಲ್ಲಿ ಆಟೋ ಚಾಲಕರು ಸುದ್ದಿಯಾಗೋದೇ ಕೆಟ್ಟ ಸಂಗತಿಗಳಿಗೆ. ದುಬಾರಿ ಹಣ ವಸೂಲಿ ಮಾಡುತ್ತಾರೆ. ಇಲ್ಲವೇ ಡಬರ್ ಮೀಟರ್ ರೀಡಿಂಗ್ ತೋರಿಸಿ ಹೆಚ್ಚು ಹಣ ಪಡೆಯುತ್ತಾರೆ. ಆದರೆ, ಇಲ್ಲೊಬ್ಬ ಆಟೋ ಚಾಲಕ ತೋರಿದ ಪ್ರಾಮಾಣಿಕತೆಯನ್ನು ಕಂಡು ಪೊಲೀಸರೇ ಪ್ರಶಂಸೆ ಮಾಡಿದ್ದಾರೆ. ಅಲ್ಲದೇ ಆ ಆಟೋ ಚಾಲಕನಿಗೆ ಸನ್ಮಾನ ಮಾಡಿ ಪೊಲೀಸರು ಗೌರವಿಸಿದ್ದಾರೆ.
ಚಾಮರಾಜಪೇಟೆಯ ಆನಂದಪುರ ನಿವಾಸಿ, ಆಟೋ ಚಾಲಕ ಮೋಹನ್ ಪ್ರಾಮಾಣಿಕತೆ ಮೆರೆದು ಪೊಲೀಸರಿಂದ ಪ್ರಶಂಸೆಗೆ ಒಳಗಾದ ವ್ಯಕ್ತಿ. ಇಂದು ಇವರು ಆಟೋವನ್ನು ಬುಕ್ ಮಾಡಿದ್ದ ವ್ಯಕ್ತಿಯೊಬ್ಬರು ಯಾವುದೋ ಜ್ಞಾನದಲ್ಲಿ ಬ್ಯಾಗ್ ನ್ನು ಆಟೋದಲ್ಲಿ ಬಿಟ್ಟು ಹೋಗಿದ್ದರು. ಸಿರ್ಸಿ ವೃತ್ತದಲ್ಲಿ ಗ್ರಾಹಕ ಬಿಟ್ಟು ಹೋಗಿದ್ದರು.
ಈ ಬ್ಯಾಗನ್ನು ಆಟೋ ಚಾಲಕ ನೋಡಿದಾಗ ಅದರಲ್ಲಿ 2.50 ಲಕ್ಷ ರೂಪಾಯಿ ನಗದು ಹಣವಿತ್ತು. ಆದರೆ, ಆ ಗ್ರಾಹಕನನ್ನು ಭೇಟಿ ಮಾಡಲು ವಿಳಾಸ ಗೊತ್ತಿರಲಿಲ್ಲ. ಹೀಗಾಗಿ ನೇರವಾಗಿ ಬ್ಯಾಗ್ ನ್ನು ಚಾಮರಾಜಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಹತ್ತು ರೂಪಾಯಿ ಹೆಚ್ಚು ಬಂದರೆ ಸಾಕು ಎಂದು ಆಲೋಚಿಸುವ ಈ ಕಾಲದಲ್ಲಿ ಇಷ್ಟು ಹಣವಿದ್ದರೂ ಅದಕ್ಕೆ ಆಸೆ ಪಡದೇ ಮೋಹನ್ ಪೊಲೀಸರಿಗೆ ಒಪ್ಪಿಸಿ ತನ್ನ ಪ್ರಾಮಾಣಿಕತೆಯನ್ನು ತೋರಿಸಿದ್ದಾರೆ.
Recommended Video
ಆಟೋ ಚಾಲಕ ಮೋಹನ್ ಅವರನ್ನು ಕಚೇರಿಗೆ ಕರೆಸಿದ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ಅವರು ಸನ್ಮಾನ ಮಾಡಿ ಗೌರವಿಸಿದ್ದಾರೆ. ಅಲ್ಲದೇ ಮೋಹನ್ ಪ್ರಾಮಾಣಿಕತೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಹಣದ ಆಸೆಗಾಗಿ ಅಡ್ಡ ಮಾರ್ಗ ಹಿಡಿಯುವ ಈ ಕಾಲದಲ್ಲಿ ಮೋಹನ್ ಬಡವರಾಗಿದ್ದರೂ ಅಷ್ಟು ಪ್ರಮಾಣದ ದುಡ್ಡಿಗೆ ಆಸೆ ಪಟ್ಟಿಲ್ಲ. ಬದಲಿಗೆ ಅಷ್ಟೂ ಮೊತ್ತದ ಹಣವನ್ನು ಪೊಲೀಸರಿಗೆ ಒಪ್ಪಿಸಿರುವುದು ಆಟೋ ಚಾಲಕರೇ ಹೆಮ್ಮೆ ಪಡುವಂತಾಗಿದೆ.