ಬೆಲೆಬಾಳುವ ಶೂ ಕಳೆದುಕೊಂಡ ಟೆಕ್ಕಿ ಮಾಡಿದ್ದೇನು?
ಬೆಂಗಳೂರು, ಡಿಸೆಂಬರ್ 25: ಯಾರಾರೋ ಯಾವುದಾವುದೋ ಕಾರಣಕ್ಕೆ ಪೊಲೀಸ್ ಠಾಣೆ ಮೆಟ್ಟಿಲು ಏರಿ ಸಾಕಷ್ಟು ನೋವು ಕಂಡಿರುತ್ತಾರೆ. ಒಮ್ಮೆ ಪೊಲೀಸ್ ಠಾಣೆಗೆ ಹೋಗಿ ಬಂದವರು ಇನ್ನೊಂದು ಸಾರಿ ಪೊಲೀಸ್ ಠಾಣೆಗೆ ಹೋಗುವುದು ಬೇಡಪ್ಪಾ ಎಂದುಕೊಳ್ಳುತ್ತಾರೆ.
ಆದರೆ, ಬೆಂಗಳೂರಿನ ಟೆಕ್ಕಿಯೊಬ್ಬರು ವಿಚಿತ್ರ ಕಾರಣಕ್ಕೆ ಪೊಲೀಸ್ ಠಾಣೆ ಮೆಟ್ಟಿಲು ಏರಿ ಸುದ್ದಿಯಾಗಿದ್ದಾರೆ. 48 ಸಾವಿರ ರುಪಾಯಿಯ ಶೂ ಕಳವು ಆಗಿದೆ ಎಂದು ಶ್ರೀಸತ್ಯ ಎನ್ನುವರು ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರಂಭದಲ್ಲಿ ಪೊಲೀಸರಿಗೆ ತಲೆ ನೋವಾಗಿದ್ದ ಈ ಪ್ರಕರಣದಲ್ಲಿ ಕಡೆಗೂ ಎಫ್ಐಆರ್ ದಾಖಲಾಗಿದೆ. ಈಗ ಶೂ ಕಳ್ಳನನ್ನು ಹುಡುಕುವ ಸರದಿ ಪೊಲೀಸರದು.
ಚಪ್ಪಲಿ, ಶೂ ಕಳೆದಿದೆ ಹುಡುಕಿಕೊಡಿ ಎಂದು ದೂರು ನೀಡಿದ ಉದ್ಯಮಿ
ಶ್ರೀ ಸತ್ಯ ಅವರು ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿ ನಾರಾಯಣಪುರದ ಆಕಾಶನಗರ ಅಪಾರ್ಟಮೆಂಟ್ ನಿವಾಸಿಯಾಗಿದ್ದು, ಡಿಸೆಂಬರ್ 13 ರಂದು ಬೆಳಗಿನಜಾವ ಕಳ್ಳನೊಬ್ಬ ಅವರ ಬೆಲೆಬಾಳುವ ಶೂಗಳನ್ನು ಕದ್ದು ಪರಾರಿಯಾಗಿದ್ದಾನೆ. ಶ್ರೀ ಸತ್ಯ ಅವರು ಡಿ 24 ರಂದು ಪೊಲೀಸರಿಗೆ ದೂರು ನೀಡಿ, ತನ್ನ ಶೂಗಳನ್ನು ಹುಡುಕಿ ಕೊಡಿ ಎಂದು ಅಲವತ್ತುಕೊಂಡಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.