ಬೆಂಗಳೂರು: 'ಎಣ್ಣೆ' ಖರೀದಿಸಲು ಹೋಗಿ 1.27 ಲಕ್ಷ ಕಳೆದುಕೊಂಡ ಟೆಕ್ಕಿ
ಬೆಂಗಳೂರು, ಜನವರಿ 25: ನಗರದಲ್ಲಿ ಟೆಕ್ಕಿಯೊಬ್ಬನ ಮದ್ಯದ ಆಸೆ 1.27 ಲಕ್ಷ ಹಣ ಕಳೆದುಕೊಳ್ಳುವಂತೆ ಮಾಡಿದೆ.
ಯೆಲೇನಹಳ್ಳಿಯ ನಿವಾಸಿ ಅರ್ಜುನ್ ಜಗನ್ನಾಥನ್ ಎಂಬ ಸಾಫ್ಟ್ವೇರ್ ಉದ್ಯೋಗಿ ಜನವರಿ 19 ರಂದು ಆನ್ಲೈನ್ನಲ್ಲಿ ಮದ್ಯ ಖರೀದಿಗೆ ಯತ್ನಿಸಿದ್ದಾರೆ.
ಮದ್ಯ ಪ್ರಿಯರಿಗೆ ಕರ್ನಾಟಕ ಸರ್ಕಾರದಿಂದ ಸಿಹಿ ಸುದ್ದಿ?
ತಮ್ಮ ಮನೆಯಲ್ಲಿ ಪಾರ್ಟಿ ಮಾಡಿದ್ದ ಅರ್ಜುನ್ ಜಗನ್ನಾತನ್ ಆನ್ಲೈನ್ ಮದ್ಯ ಡೆಲಿವರಿಗಾಗಿ ಗೂಗಲ್ನಲ್ಲಿ ಹುಡುಕಾಡಿದಾಗ ಕೊತ್ತನೂರು ಬಳಿಯ ಹೋಟೆಲ್ ಒಂದು ಆನ್ಲೈನ್ನಲ್ಲಿ ಮದ್ಯ ಡೆಲಿವರಿ ಮಾಡುವುದಾಗಿ ಜಾಹೀರಾತು ಸಿಕ್ಕಿದೆ.
ಕೂಡಲೇ ಜಾಹೀರಾತಿನಲ್ಲಿ ದೊರೆತ ಸಂಖ್ಯೆಗೆ ಕರೆ ಮಾಡಿ ಮದ್ಯ ಆರ್ಡರ್ ಮಾಡಿದ್ದಾರೆ, 1500 ಬಿಲ್ ಆಗಿದ್ದು, ವೆಬ್ಸೈಟ್ನಲ್ಲಿ ತಂತ್ರಜ್ಞಾನ ದೋಷ ಇರುವ ಕಾರಣ ನೀವು ಕಾರ್ಡ್ ಮಾಹಿತಿ ಕೊಡಿ ಎಂದು ಅತ್ತ ಕಡೆಯಿಂದ ಫೋನಿನಲ್ಲಿ ಮಾತನಾಡಿದ ವ್ಯಕ್ತಿ ಹೇಳಿದ್ದಾನೆ.
ಆತನ ಮಾತನ್ನು ನಂಬಿದ ಟೆಕಿ, ಕ್ರೆಡಿಟ್ ಕಾರ್ಡ್ ಮಾಹಿತಿ ನೀಡಿದ್ದಾರೆ, ಓಟಿಪಿಯನ್ನೂ ನೀಡಿದ್ದಾರೆ, ಮೊದಲಿಗೆ 1500 ರೂಪಾಯಿ ಖಾತೆಯಿಂದ ಕಟ್ ಆಗಿರುವ ಬಗ್ಗೆ ಸಂದೇಶ ಬಂದಿದೆ. ನಂತರ ಮತ್ತೆ ಕರೆ ಮಾಡಿದ ಮೋಸಗಾರ ತಾಂತ್ರಿಕ ಸಮಸ್ಯೆಯಿಂದಾಗಿ ವ್ಯವಹಾರ ಪೂರ್ಣಗೊಂಡಿಲ್ಲ ಈಗ ಮತ್ತೊಂದು ಓಟಿಪಿ ಬಂದಿದೆ ಅದನ್ನು ಕಳಿಸಿ ಎಂದಿದ್ದಾನೆ.
ಅಕ್ರಮ ಮದ್ಯ ಮಾರಾಟ; ಪೊಲೀಸರಿಂದ ದಾಳಿ
ಆತನ ಮಾತು ನಂಬಿ ಮತ್ತೆ ಓಟಿಪಿಯನ್ನು ಟೆಕಿ ಜಗನ್ನಾಥ್ ಹಂಚಿಕೊಂಡಿದ್ದಾನೆ, ಈ ಬಾರಿ 6000 ಹಣ ಕಟ್ ಆಗಿದೆ. ಮತ್ತೆ ಕರೆ ಮಾಡಿದ ಮೋಸಗಾರ ತಾಂತ್ರಿಕ ತೊಂದರೆ ಆಗಿದೆ ಕೆಲವು ಓಟಿಪಿಗಳು ಬರುತ್ತವೆ ಅವನ್ನು ಕಳುಹಿಸಿ ಎಂದು ಹೇಳಿ ಒಟ್ಟಿಗೆ 78,742 ರೂಪಾಯಿ ಹಣ ಎಗುರಿಸಿದ್ದಾನೆ.
ನಂತರ ಮತ್ತೆ ಟೆಕಿಗೆ ಕರೆ ಮಾಡಿದ ಆ ವ್ಯಕ್ತಿ, ಏನೋ ತಾಂತ್ರಿಕ ಸಮಸ್ಯೆಯಿಂದಾಗಿ ಹೀಗೆಲ್ಲಾ ಆಗಿದೆ ಎಂದು ಹೇಳಿ, ಎಲ್ಲ ಹಣವನ್ನು ನಿಮಗೆ ವಾಪಸ್ ನೀಡುತ್ತೇನೆ ಎಂದು ಹೇಳಿ ವಾಟ್ಸ್ಆಫ್ಗೆ ಕ್ಯೂ ಆರ್ ಕೋಡ್ ಒಂದನ್ನು ರವಾನಿಸಿದ್ದಾನೆ.
ಹಣ ವಾಪಸ್ ಬರುತ್ತದೆಂಬ ಆಸೆಯಿಂದ ವಾಟ್ಸ್ಪ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ್ದೇ ತಡ ಮತ್ತೆ 48,000 ಸಾವಿರ ಹಣ ಹೊರಟು ಹೋಗಿದೆ. ಜಗನ್ನಾಥ್ ಕೆಲವೇ ನಿಮಿಷದಲ್ಲಿ 1.27 ಲಕ್ಷ ಹಣ ಕಳೆದುಕೊಂಡಿದ್ದಾರೆ.
ಕೂಡಲೇ ಬ್ಯಾಂಕ್ ಗೆ ಕರೆ ಮಾಡಿ ತನ್ನ ಖಾತೆಯ ವ್ಯವಹಾರವನ್ನು ರದ್ದು ಮಾಡುವಂತೆ ಮನವಿ ಮಾಡಿದ್ದಾರೆ, ಆದರೆ ಕ್ರೆಡಿಟ್ ಕಾರ್ಡ್ ನಿಂದ ಮಾಡಿದ ವ್ಯವಹಾರವನ್ನು ರದ್ದು ಮಾಡಲಾಗದು ಎಂಬ ಉತ್ತರ ದೊರೆತಿದೆ. ಅಲ್ಲಿಂದ ಪೊಲೀಸ್ ಠಾಣೆಗೆ ತೆರಳಿದ ಜಗನ್ನಾಥ್ ದೂರು ದಾಖಲಿಸಿದ್ದಾರೆ.
ಪೊಲೀಸರ ತನಿಖೆ ಪ್ರಕಾರ ಜಗನ್ನಾಥ್ ಅವರ ಖಾತೆಯಿಂದ ಕಟ್ ಆಗಿರುವ ಹಣ ಕಾಶ್ಮೀರದಲ್ಲಿರುವ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆಯಂತೆ.