ಬೆಂಗಳೂರು ಆಗ್ನೇಯ ಪೊಲೀಸರ ಭರ್ಜರಿ ಬೇಟೆ
ಬೆಂಗಳೂರು, ಜುಲೈ 3: ಬೆಂಗಳೂರು ನಗರ ಆಗ್ನೇಯ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಸುಮಾರು ಒಂದು ಕೋಟಿ 68ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶ ಪಡೆಸಿಕೊಂಡಿದ್ದು, ಕಳ್ಳತನವನ್ನೇ ಉದ್ಯೋಗ ಮಾಡಿಕೊಂಡವರಿಗೆ ನಡುಕ ಹುಟ್ಟಿಸಿದ್ದಾರೆ.
ಈ ಸಂಬಂಧ ಹತ್ತು ಖತರ್ನಾಕ್ ಕಳ್ಳರನ್ನು ಬಂಧಿಸಿರುವ ಪೊಲೀಸರು, 800 ಗ್ರಾಂ ಚಿನ್ನ, ಎರಡೂವರೆ ಲಕ್ಷ ನಗದು, ಹದಿನೈದು ನಾಲ್ಕು ಚಕ್ರದ ಮತ್ತು 49 ದ್ವಿಚಕ್ರವನ್ನು ವಶ ಪಡಿಸಿಕೊಂಡಿರುತ್ತಾರೆ. 36 ದ್ವಿಚಕ್ರ ಮತ್ತು 13 ನಾಲ್ಕು ಚಕ್ರದ ವಾಹನದ ಮಾಲೀಕರನ್ನು ಪೊಲೀಸರು ಈಗಾಗಲೇ ಪತ್ತೆ ಹಚ್ಚಿದ್ದಾರೆ.
ದುಬಾರಿ 'ಬಡ್ಡಿ' ಮಕ್ಕಳ ಮೇಲೆ ಪೊಲೀಸರ ವಿಶೇಷ ಕಾರ್ಯಾಚರಣೆ
ಹತ್ತು ಆರೋಪಿಗಳನ್ನು ಬಂಧಿಸಿದ್ದರಿಂದ, ಬೊಮ್ಮನಹಳ್ಳಿ ಠಾಣೆಯ 13, ಮಡಿವಾಳ 14, ಆಡುಗೋಡಿ 13, ಪರಪ್ಪನ ಅಗ್ರಹಾರ 9, ಎಲೆಕ್ಟ್ರಾನಿಕ್ ಸಿಟಿ ಠಾಣೆಯ ಹತ್ತು ಪ್ರಕರಣವನ್ನು ಪತ್ತೆ ಹಚ್ಚಿದಂತಾಗಿದೆ.
ಬಂಧಿತ ಆರೋಪಿಗಳು ಬಹುತೇಕ ತಮಿಳುನಾಡು ಮತ್ತು ಕೇರಳ ಮೂಲದವರಾಗಿದ್ದಾರೆಂದು ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ. ಮೇಲಿನ ಐದು ಠಾಣೆಯಲ್ಲಿ ದೂರು ದಾಖಲಿಸಿದ್ದವರು, ಆಯಾಯ ಠಾಣೆಯನ್ನು ಸಂಪರ್ಕಿಸಬಹುದಾಗಿದೆ.
ಇದಲ್ಲದೇ, ಆಡುಗೋಡಿ ಠಾಣಾ ಪೊಲೀಸರು, ಹದಿನೆಂಟು ದ್ವಿಚಕ್ರ ವಾಹನವನ್ನು ಆರೋಪಿಗಳಿಂದ ವಶ ಪಡಿಸಿಕೊಂಡಿರುತ್ತಾರೆ. ಆರೋಪಿಗಳು, ರಾತ್ರಿ ವೇಳೆ ಕೋಲಾರದಿಂದ ಬೆಂಗಳೂರಿಗೆ ಬಂದು, ದುಬಾರಿ ಬೆಲೆಯ ದ್ವಿಚಕ್ರ ವಾಹನಗಳ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು.
ಬೆಂಗಳೂರು ಚಾಮರಾಜಪೇಟೆ, ಕೆಂಗೇರಿ, ರಾಮಮೂರ್ತಿ ನಗರ, ಹೊಸಕೋಟೆ, ಕೋಲಾರ, ಬಂಗಾರಪೇಟೆ ಸರಹದ್ದುಗಳಲ್ಲಿ ಆರೋಪಿಗಳು ಕಳ್ಳತನ ಮಾಡುತ್ತಿದ್ದರು.
ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸಭೆ
ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಮಾರ್ಗದರ್ಶನದಲ್ಲಿ, ಮಡಿವಾಳ ಉಪವಿಭಾಗದ ಎಸಿಪಿ ಸೋಮೇಗೌಡ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.